ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳದಲ್ಲಿ ಹೆಚ್ಚುತ್ತಿವೆ ಅಪಘಾತ ಪ್ರಕರಣ!

Last Updated 27 ಡಿಸೆಂಬರ್ 2017, 7:10 IST
ಅಕ್ಷರ ಗಾತ್ರ

ಭಟ್ಕಳ: ದಿನದಿಂದ ದಿನಕ್ಕೆ ಬೆಳೆಯುತ್ತಿ ರುವ ಪಟ್ಟಣದಲ್ಲಿ ವಾಹನಗಳ ಸಂಖ್ಯೆಯೂ ಏರುತ್ತಿದ್ದು, ಅಪಘಾತಗಳ ಸಂಖ್ಯೆಯೂ ಹೆಚ್ಚಳವಾಗಿದೆ. ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 15 ಅಪಘಾತಗಳು ನಡೆದಿವೆ. ದುರ್ಘಟನೆ ಯಲ್ಲಿ 27 ಮಂದಿ ಗಾಯಗೊಂಡು, ಒಬ್ಬರು ಮೃತಪಟ್ಟಿದ್ದಾರೆ.

ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮುಖ್ಯರಸ್ತೆ ಹಾಗೂ ವಿವಿಧ ರಸ್ತೆಗಳಲ್ಲಿ ಅಪಘಾತ ಉಂಟಾಗುತ್ತಿವೆ. ಶಿರಾಲಿ ಹಾಗೂ ಪ್ರವಾಸಿ ತಾಣ ಮುರ್ಡೇಶ್ವರ ಸಮೀಪದ ಹೆದ್ದಾರಿಯಲ್ಲಿ ದಿನನಿತ್ಯ ಅಪಘಾತ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅದು ಸಾಮಾನ್ಯ ವಿಷಯ ಎಂಬಂತಾಗಿದೆ.

ಸವಾರರಿಗೆ ಗೊಂದಲ: ಪಟ್ಟಣದಲ್ಲಿ ಚತುಷ್ಪಥ ಕಾಮಗಾರಿಯು ಭರದಿಂದ ನಡೆಯುತ್ತಿದ್ದು, ಹೆದ್ದಾ ರಿಯ ಕೆಲವೆಡೆ ಅಕ್ಕಪಕ್ಕದಲ್ಲಿ ತೆಗೆದಿರುವ ಗುಂಡಿ, ಮಣ್ಣಿನ ರಾಶಿ ವಾಹನ ಸವಾರರಿಗೆ ಕಂಟಕವಾಗಿದೆ. ಕೆಲವೆಡೆ ಹೊಸ ಪಥದಲ್ಲಿ ಸಂಚಾರ ಆರಂಭಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕುವುದರ ಜತೆಗೆ ಮಾರ್ಗದ ದಿಕ್ಸೂಚಿಯನ್ನೂ ಹಾಕ ಲಾಗಿದೆ. ಆದರೆ ರಾತ್ರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಎತ್ತ ಸಾಗಬೇಕು ಎಂಬ ಗೊಂದಲ ಮೂಡಿಸುತ್ತಿದೆ. ಅನೇಕ ಬಾರಿ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಗುತ್ತಿವೆ.

ರಸ್ತೆ ದಾಟಲು ಪರದಾಟ: ‘ಪಟ್ಟಣದ ಶಂಸುದ್ದೀನ್ ಸರ್ಕಲ್‌, ರಂಗೀಕಟ್ಟೆ, ಮುಖ್ಯರಸ್ತೆ, ಮಾರಿಕಟ್ಟೆಯ ಜನ ನಿಬಿಡ ಪ್ರದೇಶದಲ್ಲಿ ಒಂದರ ಹಿಂದೆ ಒಂದರಂತೆ ವಾಹನ ಸಂಚಾರ ಮಾಡು ತ್ತವೆ. ವಾಹನ ದಟ್ಟಣೆಯಿಂದ ಶಾಲಾ ಮಕ್ಕಳು, ಪಾದಾಚಾರಿಗಳು ರಸ್ತೆ ದಾಟಲು ಪರದಾಡುವಂತಾಗಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸಿದ್ದರೂ ಸಹ ಮಿತಿಮೀರಿದ ವಾಹನಗಳಿಂದ ಪರದಾಟ ತಪ್ಪಿಲ್ಲ’ ಎಂದು ಎನ್ನುತ್ತಾರೆ ರಿಕ್ಷಾ ಚಾಲಕ ಗಣಪತಿ ನಾಯ್ಕ.

‘ಹೆದ್ದಾರಿಯಲ್ಲೂ ವಾಹನ ಸಂಚಾರ ಹೆಚ್ಚಿದೆ. ಹೀಗಾಗಿ ಬೆಳಿಗ್ಗೆ ಕೆಲಸಕ್ಕೆ ಹೋಗುವ ನೌಕರರು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಸಂಚಾರಿ ಪೊಲೀಸರನ್ನು ನಿಯೋಜಿಸಬೇಕಿದೆ’ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ಕೃಷ್ಣ ಮೊಗೇರ ಹೊನ್ನಿಗದ್ದೆ.

‘ಭಟ್ಕಳದಲ್ಲಿ ಒಂದು ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಇದರಿಂದ ಸಂಚಾರ ವ್ಯವಸ್ಥೆ ಹಾಗೂ ನಿಲುಗಡೆಗೂ ಸಮಸ್ಯೆ ಉಂಟಾಗಿದೆ. ವಾಹನದಟ್ಟಣೆ ಇರುವ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನೂ ನಿಯೋಜಿಸಲಾಗುತ್ತದೆ. ನೆರೆ ಜಿಲ್ಲೆಗಳಲ್ಲಿ ಗಲಭೆ ನಿಯಂತ್ರಣ ಹಾಗೂ ಬಂದೋಬಸ್ತ್‌ಗಾಗಿ ಇಲ್ಲಿನ ಸಿಬ್ಬಂದಿಯನ್ನು ಅಲ್ಲಿಗೆ ಕಳುಹಿಸು ವುದು ಅನಿವಾರ್ಯ. ಅಲ್ಲದೇ ಮೊದಲೇ ಇಲ್ಲಿ ಪೊಲೀಸ್‌ ಸಿಬ್ಬಂದಿ ಕೊರತೆಯಿದೆ. ಇಷ್ಟಾದರೂ ಪೊಲೀಸ್ ಇಲಾಖೆಯಿಂದ ಎಲ್ಲವನ್ನೂ ಆದಷ್ಟು ನಿಭಾಯಿಸಲಾಗುತ್ತಿದೆ’ ಎಂದು ಡಿವೈಎಸ್ಪಿ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಭಟ್ಕಳಕ್ಕೆ ವರ್ಗವಾಗಿ ಬಂದ ತಕ್ಷಣವೇ ಇಲ್ಲಿನ ಸಂಚಾರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಚಾರಿ ಪೊಲೀಸ್‌ ಠಾಣೆ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೆ. ಒಂದು ವರ್ಷವಾದರೂ ಸಂಚಾರಿ ಠಾಣೆ ಮಂಜೂರು ಆಗುವ ಬಗ್ಗೆ ಯಾವುದೇ ಸೂಚನೆ ದೊರಕಿಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 10 ಕಿ.ಮೀ.ಗೂ ಪೊಲೀಸ್ ಠಾಣೆ ಇದೆ’ ಎಂದು ಹೇಳಿದರು.

* * 

ಜಿಲ್ಲೆಯಲ್ಲೇ ಕಾರವಾರ ಬಿಟ್ಟರೆ ಅತಿ ಹೆಚ್ಚು ವಾಹನ ಇರುವ ಭಟ್ಕಳದಲ್ಲಿ ಸಂಚಾರಿ ಠಾಣೆ ಇಲ್ಲ. ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿದಲ್ಲಿ ಸಂಚಾರ ಠಾಣೆ ಮಂಜೂರು ಮಾಡಿಸಬಹುದು
ಶಿವಕುಮಾರ್, ಡಿವೈಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT