ಸಿರುಗುಪ್ಪ: ತಾಲ್ಲೂಕಿನಲ್ಲಿ ಬಿಜೆಪಿ ವತಿಯಿಂದ ನವ ಕರ್ನಾಟಕ ಪರಿವರ್ತನಾ ರ್ಯಾಲಿ ಜನವರಿ 5ರಂದು ಆಯೋಜಿಸಲಾಗಿದೆ. ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಬೃಹತ್ ಬಹಿರಂಗ ಸಭೆಗೆ 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಾಲ್ಲೂಕಿನ ಶಾನವಾಸಪುರ ಗ್ರಾಮಕ್ಕೆ ಜನವರಿ 5ರಂದು ಮಧ್ಯಾಹ್ನ 3ಕ್ಕೆ ಪರಿವರ್ತನಾ ಯಾತ್ರೆ ಬರಲಿದ್ದು, ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ, ಅನಂತಕುಮಾರ್, ಪ್ರಹ್ಲಾದ ಜೋಷಿ , ಜಗದೀಶ ಶೆಟ್ಟರ್, ರಾಜ್ಯ ಉಸ್ತುವಾರಿಗಳಾದ ಮುರಳೀಧರ, ಪುರಂದರೇಶ್ವರಿ, ಶ್ರೀರಾಮುಲು, ಕರಡಿ ಸಂಗಣ್ಣ, ಗೋವಿಂದ ಕಾರಜೋಳ, ಸಿ.ಟಿ.ರವಿ, ಶಿಸ್ತು ಸಮಿತಿಯ ಅಧ್ಯಕ್ಷ ಶಂಕ್ರಪ್ಪ, ರಾಜ್ಯ ಹಾಗೂ ಕೇಂದ್ರದ ಹಲವು ಮುಖಂಡರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ, ತಾಲ್ಲೂಕು ಕ್ರೀಡಾಂಗಣದಲ್ಲಿ ಬೃಹತ್ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹಳೆಕೋಟೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ ರಾಧಾದರಪ್ಪನಾಯಕ ನನ್ನ ಸಹೋದರಿ ಇದ್ದಂತೆ, ಅವರು ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದು, ಚುನವಾಣೆಯಲ್ಲಿ ಇದೆಲ್ಲಾ ಸಾಮಾನ್ಯ ಸಂಗತಿ. ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು, ಎರಡು ಅವಧಿಯ ಸಾಧನೆ, ಹೋರಾಟಗಳನ್ನು ಪರಿಗಣಿಸಿ, ಪಕ್ಷವು ನನಗೆ ಬಿ–ಫಾರಂ ನೀಡುವ ವಿಶ್ವಾಸವಿದೆ. ಪಕ್ಷದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಇರುವುದರಿಂದ ಕೃಷಿ ಚಟುವಟಿಕೆ ನಡೆಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಜನವರಿ 5ರೊಳಗೆ ನದಿಗೆ ನೀರು ಬೀಡದೆ ಹೋದಲ್ಲಿಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೊಪ್ಪಳ ಸಂಸದ ಕರಡಿಸಂಗಣ್ಣ ಅವರು ನಿಟ್ಟೂರು– ಸಿಂಗಾಪೂರ ಗ್ರಾಮಗಳ ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ಸೇತುವೆ ನಿರ್ಮಾಣಕ್ಕೆ ₹98 ಕೋಟಿ ಅನುದಾನ ಖರ್ಚು ಮಾಡಲು ಅನುಮೋದನೆ ಸಿಗಲಿದೆ. ಜನವರಿ ತಿಂಗಳ ಕೊನೆಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೊಂಚಿಗೇರಿ ನಾಗರಾಜಗೌಡ, ಜಿ.ಪಂ.ಸದಸ್ಯ ರವಿ, ಜಿಲ್ಲಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಮೂರ್ತಿಸ್ವಾಮಿ, ನಿಟ್ಟೂರು ನಾಗರಾಜಗೌಡ, ವೀರನಗೌಡ, ಎಂ.ವೀರೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.