ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ವರ್ಷದಿಂದ ಸಿಗದ ನಿವೇಶನದ ಹಕ್ಕು ಪತ್ರ...!

ಇಡಕಿಣಿ: ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಪ್ರಯತ್ನ--
Last Updated 28 ಡಿಸೆಂಬರ್ 2017, 7:19 IST
ಅಕ್ಷರ ಗಾತ್ರ

ಕಳಸ: ಇಲ್ಲಿಗೆ ಸಮೀಪದ ಇಡಕಿಣಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ 12 ವರ್ಷಗಳಿಂದ ವಸತಿರಹಿತರಿಗೆ ದಕ್ಕಬೇಕಿದ್ದ ನಿವೇಶನದ ಹಕ್ಕು ಪತ್ರಗಳು ಧೂಳು ತಿನ್ನುತ್ತಾ ಕೂತಿವೆ.

2005ರ ಜನವರಿ ತಿಂಗಳಲ್ಲೇ ಈ ಗ್ರಾಮ ಪಂಚಾಯಿತಿಯ ಹೆಮ್ಮಕ್ಕಿ ಗ್ರಾಮದ ಸರ್ವೆ ನಂಬರ್ 119ರಲ್ಲಿ 1.18 ಎಕರೆ ಭೂಮಿಯನ್ನು ವಸತಿರಹಿತರ ಮನೆ ನೀವೇಶನಕ್ಕಾಗಿ ಸರ್ಕಾರ ಗುರುತು ಮಾಡಿ ಪಹಣಿಯಲ್ಲೂ ದಾಖಲಾಗಿತ್ತು.

ಸುಮಾರು 20 ಫಲಾನುಭವಿಗಳಿಗೆ ಆ ಭೂಮಿಯನ್ನು ತಲಾ 40 ಅಡಿ ಅಗಲ ಮತ್ತು 30 ಅಡಿ ಉದ್ದದಂತೆ ಹಂಚಿ ಹಕ್ಕು ಪತ್ರಗಳನ್ನು ಗ್ರಾಮ ಪಂಚಾಯತಿಗೆ ಕಳಿಸಲಾಗಿತ್ತು. ಆದರೆ ಈ ಹಕ್ಕು ಪತ್ರಗಳನ್ನು ಸಂಬಂಧಪಟ್ಟವರು ಹಂಚದೇ 12 ವರ್ಷದಿಂದ ಅವು ಪಂಚಾಯಿತಿಯ ಕಪಾಟಿನಲ್ಲೇ ಭದ್ರವಾಗಿವೆ.

ಈ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿರುವ ಸಚಿತ್ರಾ ಶ್ರೀಕಾಂತ್ ತಂಡಕ್ಕೆ ಈ ಹಕ್ಕುಪತ್ರಗಳು ಸಿಕ್ಕಿವೆ. ಅವರು ಈ ಹಕ್ಕುಪತ್ರಗಳನ್ನು ಕಂಡು ಅವುಗಳನ್ನು ಆಯಾ ಫಲಾನು ಭವಿಗಳಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಪೈಕಿ ಕೆಲವರು ಈಗಾಗಲೇ ಊರು ಬಿಟ್ಟಿದ್ದರೆ ಕೆಲವರು ಬೇರೆ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಹಕ್ಕು ಪತ್ರ ಗ್ರಾಮ ಪಂಚಾಯಿತಿಗೆ ಬಂದ ಬಗ್ಗೆ ಫಲಾನುಭವಿಗಳಿಗೆ ಇತ್ತೀಚಿನವರೆಗೂ ಮಾಹಿತಿಯೇ ಇರಲಿಲ್ಲ ಎಂದು ಕೆಳಭಾಗದ ಶ್ರೀಕಾಂತ್ ಹೇಳುತ್ತಾರೆ.

'ಅವರಿಗೆ ನಿವೇಶನ ಮಂಜೂರಾದ ಭೂಮಿಯಲ್ಲಿ ಕಳೆ ಗಿಡ ಬೆಳೆದು ಅದು ಪಾಳು ಬಿದ್ದಿತ್ತು. ಫಲಾನುಭವಿಗಳ ಪೈಕಿ 8 ಮಂದಿ ಈಗಲೂ ಆಸುಪಾಸಿನ ತೋಟದ ಲೈನುಗಳಲ್ಲಿ ವಾಸಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಈ ಫಲಾನುಭವಿಗಳಿಗೆ ಈ ಹಕ್ಕುಪತ್ರದ ಬಗ್ಗೆ ಇತ್ತೀಚೆಗೆ ತಿಳಿದಾಗ ಅವರು ಸಂತಸಗೊಂಡರು.

ಬುಧವಾರ ಅದೇ ಸ್ಥಳದಲ್ಲಿ ನೆರೆದ ಈ ಫಲಾನುಭವಿಗಳು ಮತ್ತು ಇತರೆ ವಸತಿರಹಿತರು ಆ ಪ್ರದೇಶದಲ್ಲಿ ಕಳೆ ಗಿಡಗಳನ್ನು ನಿವಾರಣೆ ಮಾಡಿ ಸ್ವಚ್ಛಗೊಳಿಸಿದರು. ನಿವೇಶನದ ನಿಗದಿತ ಅಳತೆಯಂತೆ ಗುರುತಿನ ಕಲ್ಲು ನೆಟ್ಟರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿತ್ರಾ ಶ್ರೀಕಾಂತ್ 8 ಫಲಾನುಭವಿಗಳಿಗೆ ಈ ಹಕ್ಕು ಪತ್ರದ ನಕಲು ಪ್ರತಿಯನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಕಾನೂನಿಗೆ ಅನುಸಾರವಾಗಿ ಸದ್ಯ ದಲ್ಲೇ ಅಸಲಿ ಹಕ್ಕುಪತ್ರವನ್ನು ಹಸ್ತಾಂತರಿಸುವುದಾಗಿ ಹೇಳಿದರು.

'ನಮ್ಮ ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದ್ದೆವು. ಅದರಂತೆ ಇಂದು ಅವರನ್ನು ಒಗ್ಗೂಡಿಸಿ ಹಕ್ಕು ಪತ್ರ ಒದಗಿಸುವ ಬಗ್ಗೆ ಮಾಹಿತಿ ನೀಡಿದ್ದೇವೆ. ಹಕ್ಕು ಪತ್ರ ಮಂಜೂರಾಗದ ಅರ್ಹರಿಗೂ ಹಕ್ಕು ಪತ್ರ ಸಿಗಲು ಪ್ರಯತ್ನ ಮಾಡುತ್ತೇವೆ' ಎಂದು ಮುಖಂಡ ಶ್ರೀಕಾಂತ್ ಹೇಳಿದರು.

15 ವರ್ಷದಿಂದಲೂ ಈ ಫಲಾನುಭವಿಗಳಿಗೆ ಹಕ್ಕು ಪತ್ರ ಹಸ್ತಾಂತರಿಸದೆ ಅದನ್ನು ಗೌಪ್ಯವಾಗಿ ಇಟ್ಟಿದ್ದು ಯಾಕೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರ ಇರಲಿಲ್ಲ.

ಸ್ಥಳೀಯರೊಬ್ಬರು ಪಿಸು ದನಿಯಲ್ಲಿ 'ಇದಕ್ಕೆ ರಾಜಕೀಯ ದುರುದ್ದೇಶವೇ ಕಾರಣ. ಈಗಲೂ ಹಕ್ಕು ಪತ್ರ ನೀಡಬಾರದು ಎಂಬ ಒತ್ತಡ ಇದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT