ಕಲ್ಕತ್ತ, ಡಿ. 28– ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತದ ಪ್ರಶ್ನೆ ಇಲ್ಲ; ಡಾ. ಪಿ.ಸಿ. ಘೋಷ್ ಸಂಪುಟ ಬಹುಮತ ಬೆಂಬಲ ಪಡೆದಿದೆ; ಪಿ.ಡಿ.ಎಫ್. ಪಕ್ಷಕ್ಕೆ ತನ್ನ ಬೆಂಬಲವಿದೆಯೆಂದು ರಾಜ್ಯಪಾಲರಿಗೆ ಕಾಂಗ್ರೆಸ್ ತಿಳಿಸಿದಾಗ ಅದಕ್ಕೆ ಬಹುಮತ ದೊರೆಯಿತು ಎಂದು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯಿ ಇಂದು ಸ್ಪಷ್ಟಪಡಿಸಿದರು.
ಖೆಡ್ಡಾ ಸಿದ್ಧತೆ: ಆನೆಯ ಹಿಂಡನ್ನು ಸುತ್ತುಗಟ್ಟುವ ಕಾರ್ಯ ಪ್ರಾರಂಭ
ಮೈಸೂರು, ಡಿ. 28– ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಜನವರಿ 10ರಿಂದ ನಡೆಯಲಿರುವ ‘ಖೆಡ್ಡಾ ಕಾರ್ಯಕ್ರಮ’ಕ್ಕೆ ಇನ್ನು ಎರಡುವಾರ ಮಾತ್ರ ಉಳಿದಿದ್ದು ಆನೆಯ ಹಿಂಡುಗಳನ್ನು ಸುತ್ತುಗಟ್ಟುವ ಕಾರ್ಯ ಇಂದು ಆರಂಭವಾಯಿತು.
ಖೆಡ್ಡಾ ನೋಡಲು ಪ್ರಧಾನಿಗೆ ಆಹ್ವಾನ
ಬೆಂಗಳೂರು, ಡಿ. 28– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಿರುವ ಕಾರಣ, ಜನವರಿ 13 ರಂದು ರಾಜ್ಯಕ್ಕೆ ಆಗಮಿಸಿ ಖೆಡ್ಡಾ ವೀಕ್ಷಿಸಬೇಕೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಪ್ರಧಾನಿಯನ್ನು ಪ್ರಾರ್ಥಿಸಿದ್ದಾರೆ.
ಅಂತರರಾಷ್ಟ್ರೀಯ ಪ್ರವಾಸಿ ವರ್ಷದ ಅಂಗವಾಗಿ ಕಾಕನಕೋಟೆ ಪ್ರದೇಶದಲ್ಲಿ ಜನವರಿ 10 ರಂದು ಖೆಡ್ಡಾ ನಡೆಸಲಾಗುವುದು. 13 ರಂದೂ ಖೆಡ್ಡಾ ನಡೆಸಲು ಯೋಚಿಸಲಾಗಿದೆ.