‘ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು’ ಎನ್ನುವಂತೆ ರಾಜಕೀಯ ಪಕ್ಷಗಳ ಕೆಸರೆರಚಾಟದಲ್ಲಿ ಮಹದಾಯಿ ನದಿನೀರಿನ ಹಂಚಿಕೆ ವಿಷಯ ಇತ್ಯರ್ಥವಾಗದೆ ದಿನೇ ದಿನೇ ಜಟಿಲವಾಗುತ್ತಿರುವುದು ವಿಪರ್ಯಾಸವೇ ಸರಿ.
ಮುಖಂಡರು ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡದೆ, ಜನ- ಜಾನುವಾರುಗಳಿಗೆ ನೀರೊದಗಿಸುವ ಪುಣ್ಯದ ಕೆಲಸ ಮಾಡಬೆಕು. ರಾಜ್ಯದ ಎಲ್ಲ ಶಾಸಕರು ಹಾಗೂ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಕೇಂದ್ರದ ಮೇಲೆ ಒತ್ತಡಹಾಕುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು.
ಸಮುದ್ರಕ್ಕೆ ಸೇರುವ ನೀರಿನ ವಿಷಯದಲ್ಲಿ ವಿನಾಕಾರಣ ತಕರಾರು ತೆಗೆಯುತ್ತಿರುವ ಗೋವಾ ರಾಜ್ಯಕ್ಕೆ ಕನ್ನಡಿಗರ ಏಕತೆಯ ಶಕ್ತಿಯನ್ನು ತೋರಿಸುವ ಕೆಲಸವನ್ನು ರಾಜಕಾರಣಿಗಳು ಮಾಡಲಿ.