ನಂಜನಗೂಡು: ರೈತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಡಿ.ವೈ.ಎಸ್.ಪಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು, ಎಎಸ್ಪಿ ಮಹಮ್ಮದ್ ಸುಜೀತಾ ಅವರು ಕ್ಷಮೆಯಾಚಿಸಿದ ನಂತರ ಪ್ರತಿಭಟನೆ ಹಿಂಪಡೆದರು.
ನಗರದ ದೇವರಾಜ ಅರಸು ಸೇತುವೆ ಮೇಲೆ ರಸ್ತೆತಡೆ ನಡೆಸಿ, ಘಟನೆಗೆ ಕಾರಣರಾದ ಎ.ಎಸ್ಪಿ ಮಹಮ್ಮದ್ ಸುಜೀತಾ, ಸಿ.ಪಿ.ಐ.ಗೋಪಾಲಕೃಷ್ಣ, ಪಿ.ಎಸ್.ಐ. ಪುನೀತ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಕಾರರು, ಪಾದಯಾತ್ರೆ ಮೂಲಕ ತೆರಳಿ ಡಿ.ವೈ.ಎಸ್.ಪಿ. ಕಚೇರಿ ಮುಂಭಾಗ ಪ್ರತಿಭಟನೆ ಆರಂಭಿಸಿದರು.
ಪ್ರತಿಭಟನಕಾರರೊಂದಿಗೆ ಮಾತನಾಡಿದ ಮಹಮ್ಮದ್ ಸುಜೀತಾ, ಬುಧವಾರ ನಡೆದ ಘಟನೆಯ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ. ರೈತರ ಮೇಲೆ ಇಲಾಖೆಗೆ ಯಾವುದೇ ರೀತಿಯ ದ್ವೇಷವಿಲ್ಲ. ಕಳೆದ 4 ತಿಂಗಳ ಹಿಂದೆ ಹೆದ್ದಾರಿಯಲ್ಲಿ ರೈತರು ಗಂಟೆಗಟ್ಟಲೆ ಪ್ರತಿಭಟನೆ ನಡೆಸಿ ರಸ್ತೆ ತಡೆದಾಗ ಸಹ ರೈತರ ಮೇಲೆ ಮೊಕದ್ದಮೆ ಹೂಡಿರಲಿಲ್ಲ. ನಿನ್ನೆ ದುಡುಕಿನಿಂದ ಘಟನೆ ನಡೆದಿದೆ, ಅದಕ್ಕಾಗಿ ಕ್ಷಮೆ ಕೋರುತ್ತೆನೆ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ತಾಲ್ಲೂಕು ಆಡಳಿತವು ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಸಮಸ್ಯೆ ಬಗೆಹರಿಸಲು 3 ಬಾರಿ ಸಭೆ ನಡೆಸಿ, ನಿಯಮದಂತೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿತ್ತು. ಸಭೆಯಲ್ಲಿ ಒಪ್ಪಿಕೊಂಡಂತೆ, ಕಾರ್ಖಾನೆಗಳ ಆಡಳಿತ ಮಂಡಳಿ ನಡೆದುಕೊಳ್ಳದ ಕಾರಣ, ರೈತರು ಕಾರ್ಖಾನೆ ಬಂದ್ ಮಾಡಿಸಿದ್ದರು ಎಂದರು.
ರೈತರು ಕಾನೂನು ಕೈಗೆ ತೆಗೆದುಕೊಳ್ಳದಂತೆ ತಡೆಯಲು ಪೊಲೀಸರು ಪ್ರಯತ್ನಿಸಿದಾಗ, ಅಹಿತಕರ ಘಟನೆ ನಡೆದಿದೆ. ಘಟನೆ ಕುರಿತು ಮಹಮ್ಮದ್ ಸುಜೀತಾ ವಿಷಾದ ವ್ಯಕ್ತಪಡಿಸಿದ್ದಾರೆ. ಅದ್ದರಿಂದ ಪ್ರತಿಭಟನೆ ಕೈಬಿಡಿ, ರೈತರ ಮಕ್ಕಳಿಗೆ ಕೆಲಸ ನೀಡುವ ವಿಚಾರವಾಗಿ ಇನ್ನು ಎರಡು ದಿನಗಳಲ್ಲಿ ಕೆ.ಐ.ಡಿ.ಬಿಯ ಉನ್ನತ ಅಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಸಮ್ಮಖದಲ್ಲಿ ಸಭೆ ನಡೆಸಿ ನ್ಯಾಯ ಒದಗಿಸುತ್ತೇವೆ ಎಂದರು.
ಅಧಿಕಾರಿಗಳ ಮನವಿಗೆ ಒಪ್ಪಿದ ರೈತ ಸಂಘದ ಮುಖಂಡರು, ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೊಸಕೋಟೆ ಬಸವರಾಜು, ತಾಲ್ಲೂಕು ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಮುಖಂಡರಾದ ಅಶ್ವಥ್ ನಾರಾಯಣ ರಾಜೆ ಅರಸು, ಶಿರಮಳ್ಳಿ ಸಿದ್ದಪ್ಪ, ಬೊಕ್ಕಳ್ಳಿ ನಂಜುಂಡಸ್ವಾಮಿ, ಮರಂಕಯ್ಯ, ಕುಮಾರಸ್ವಾಮಿ, ಶಿವಪ್ರಸಾದ್, ರಘು, ಸತೀಶ್ ರಾವ್, ಮಂಟಕಳ್ಳಿ ಮಹೇಶ್, ಬೇಗೂರು ಕೆಂಪಣ್ಣ, ಪ್ರಕಾಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.