ಕುಮಟಾ: ‘ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಬಿ.ಎಸ್.ಎನ್.ಎಲ್ ನೌಕರರನ್ನು ತಮ್ಮ ಕೈಕೆಳಗೆ ಖಾಸಗಿಯಾಗಿ ಬಳಕೆ ಮಾಡಿಕೊಂಡು ಅವರಿಗೆ ಕನಿಷ್ಠ ವೇತನ, ಅಗತ್ಯ ಸೌಲಭ್ಯ ನೀಡುವುದಕ್ಕೂ ಹಿಂದೆ–ಮುಂದೆ ನೋಡಲಾಗುತ್ತಿದೆ’ ಎಂದು ಬಿ.ಎಸ್.ಎನ್.ಎಲ್ ನೌಕರರ ಯೂನಿಯನ್ ಕರ್ನಾಟಕ ವೃತ್ತ ಕಾರ್ಯದರ್ಶಿ ಸಿ.ಕೆ.ಗುಂಡಣ್ಣ ಆರೋಪಿಸಿದರು.
ಕುಮಟಾದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬಿ.ಎಸ್.ಎನ್.ಎಲ್ ನೌಕರರ ಐದನೇ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
‘ನೌಕರರ ಸಂಘಟನೆ ಹಕ್ಕನ್ನು ಬಿ.ಎಸ್.ಎನ್.ಎಲ್ ನೀಡಿಲ್ಲ, ಬದಲಾಗಿ ಕೇಂದ್ರ ಸರ್ಕಾರವೇ ನೀಡಿದೆ. ಕೇಂದ್ರದ ಖಾಸಗಿ ಪರ ಧೋರಣೆಯಿಂದ ಸಂಸ್ಥೆಗೆ ಹೊಡೆತ ಬೀಳುತ್ತಿದೆ. ಪ್ರಧಾನಿ ಮೋದಿ ಮತ್ತು ಅವರ ಗುಂಪು ಖಾಸಗಿ ಮೊಬೈಲ್ ಕಂಪನಿ ನಡೆಸುತ್ತಿರುವ ಅಂಬಾನಿ ಮತ್ತು ಕಂಪೆನಿಯ ಹತ್ತಿರವೂ ಸುಳಿಯಲ್ಲ. ಅದಾನಿ ಕಂಪನಿಗೆ ವಿದೇಶದಲ್ಲಿಯೇ ವ್ಯವಹಾರ ಬೆಳೆಸಿಕೊಳ್ಳಿ ಇಲ್ಲಿ ಎಲ್ಲವನ್ನು ಅಂಬಾನಿ ನೋಡಿಕೊಳ್ಳುತ್ತಾರೆ ಎನ್ನುವ ಅಭಯ ನೀಡಿದ್ದಾರೆ. ಕೇಂದ್ರ ಸರ್ಕಾರ ಖಾಸಗಿಯವರಿಗೆ ಬಿ.ಎಸ್.ಎನ್.ಎಲ್ ನ ಎಲ್ಲ ಟವರ್ಗಳನ್ನು ಮಾರಾಟ ಮಾಡಲು ಹೊರಟಿದೆ’ ಎಂದು ಲೇವಡಿ ಮಾಡಿದರು.
‘ಬಿ.ಎಸ್.ಎನ್.ಎಲ್ ಅಸ್ತಿತ್ವಕ್ಕೆ ಬಂದು 17 ಕಳೆದರೂ ಕಾರವಾರದ ಕಚೇರಿಗಳಲ್ಲಿ ವಿದ್ಯುತ್ ದೀಪ, ಕುಡಿಯುವ ನೀರಿನ ಸೌಲಭ್ಯ ಇಲ್ಲ, ಗ್ರಾಹಕರಿಗೆ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಕೂಡ ಇಲ್ಲವಾಗಿದೆ. ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ಪ್ರ್ಯಾಂಚೈಸಿ ಪಡೆದಿರುವ ಬೆಣ್ಣೆ ಅಂಥವರು ವರ್ಗಾವಣೆ ಮಾಡಿಸುವ ಬೆದರಿಕೆ ಹಾಕುತ್ತಿದ್ದಾರೆ. ಕರ್ತವ್ಯ ನಿರ್ವಹಿಸಲು ಅವರು ಸಹಕಾರ ನೀಡದಿದ್ದರೆ ನೌಕರರು ಅವರ ವಿರುದ್ಧ ಧರಣಿ ನಡೆಸಲು ಹಿಂದೆ–ಮುಂದೆ ನೋಡಬೇಡಿ. ಜಿಲ್ಲೆಗೆ 4 ಜಿ ಸೌಲಭ್ಯ ಖಂಡಿತಾ ಬರಲಾರದು. ಇವೆಲ್ಲವನ್ನು ಪ್ರಿನ್ಸಿಪಾಲ್ ಜನರಲ್ ಮ್ಯಾನೇರ್ ಜಿ.ಆರ್.ರವಿ ಅವರಿಗೆ ಮನದಟ್ಟ ಮಾಡಬೇಕಿತ್ತು. ಆದರೆ ಅವರು ಬೇರೆ ಕಾರಣ ನೀಡಿ ಕಾರ್ಯಕ್ರಮ ತಪ್ಪಿಸಿಕೊಂಡಿದ್ದಾರೆ’ ಎಂದರು.
ಸಂಘಟನಾ ಕಾರ್ಯದರ್ಶಿ ಎಚ್.ವಿ.ಸುದರ್ಶನ, ‘ಭಾರತೀಯ ಟೆಲಿಕಾಂ ಸೇವೆ ಅಧಿಕಾರಿಗಳಿಗೆ ಆಗಲೇ ಏಳನೇ ವೇತನ ಆಯೋಗದ ವೇತನ ದೊರೆಯುತ್ತಿದೆ. ಸಂಸ್ಥೆ ಲಾಭದಲ್ಲಿ ಬಂದರೆ ಉಳಿದ ಸಿಬ್ಬಂದಿಗೂ ಅದನ್ನು ನೀಡಲಾಗುವುದು ಎನ್ನುವುದು ಸರ್ಕಾರದ ವಾದ. ಸರ್ಕಾರದ ಆದೇಶ, ನೀತಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಹಾನಿ ಅನುಭವಿಸುತ್ತಿರುವ ಬಿ.ಎಸ್.ಎನ್.ಎಲ್ ಅನ್ನು ರೋಗಗ್ರಸ್ತ ಮಾಡಿ ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಭಾಗೀಯ ಜನರಲ್ ಮ್ಯಾನೇಜರ್ ನಜೀರ್ ಶೇಖ್, ‘ಜಿಲ್ಲೆಯಲ್ಲಿ 2ಜಿ. 3ಜಿ ಸೌಲಭ್ಯದಲ್ಲಿ ಉಂಟಾಗುತ್ತಿರುವ ಒತ್ತಡ ನಿವಾರಸಲು ಹೆಚ್ಚುವರಿ ಟವರ್ ಅಗತ್ಯವಿದೆ. ಹೆಚ್ಚುವರಿ 60 ಟವರ್ ಬಗ್ಗೆ ಪ್ರಸ್ತಾವ ಹೋಗಿ ಒಂದು ವರ್ಷವಾಗಿದೆ. ಇಲ್ಲಿ 10 ಎಂ.ಬಿ.ಪಿ.ಎಚ್. ವೇಗದ ಇಂಟರನೆಟ್ಗೆ ಬೇಡಿಕೆ ಇದ್ದರೂ ಅದನ್ನು ತಕ್ಷಣ ಪೂರೈಸಲಾಗುತ್ತಿಲ್ಲ. ರಸ್ತೆ ಕಾಮಗಾರಿ ನಡೆಸುವಾಗ ಅಗೆಯುವುದರಿಂದ ತಂತಿ ತುಂಡಾಗಿ ಸೇವೆಗೆ ಅಡ್ಡಿಯಾಗುತ್ತಿದೆ. ಖಾಸಗಿ ಪ್ರ್ಯಾಂಚೈಸಿ ಬೆಣ್ಣೆ ಅವರ ವರ್ತನೆಯ ಬಗ್ಗೆ ಆರೋಪಗಳಿವೆ. ಹೆಚ್ಚುವರಿ ಪ್ರ್ಯಾಂಚೈಸಿ ನೇಮಕಕ್ಕೆ ಪ್ರಸ್ತಾವ ಕಳಿಸಲಾಗಿದ್ದು, ಅದಕ್ಕೆ ಸ್ಪಂದನೆ ಕೂಡ ಸಿಕ್ಕಿದೆ’ ಎಂದರು.
ಎಂ.ಎಂ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನೌಕರರ ಯೂನಿಯನ್ ರಾಜ್ಯ ವೃತ್ತ ಅಧ್ಯಕ್ಷ ಎಂ.ಸಿ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಸಿ.ಐ.ಟಿ.ಯು ಜಿಲ್ಲಾ ಘಟಕದ ಅಧ್ಯಕ್ಷ ತಿಲಕ ಗೌಡ, ಮುಖ್ಯಲೆಕ್ಕಾಧಿಕಾರಿ ಗಣೇಶ ಭಟ್ಟ, ಜಿಲ್ಲಾ ಎಂಜಿನಿಯರ್ ಎಂ.ಎನ್. ಮೊಗೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.