ಕವಿತಾಳ: ‘ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಇರಕಲ್ ಶಿವ ಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವ ಸಹಾಯ ಗುಂಪುಗಳ ಒಕ್ಕೂಟದ ವತಿಯಿಂದ ಸಮೀಪದ ಹಾಲಾಪುರ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದುಶ್ಚಟಗಳಿಗೆ ಬಲಿಯಾಗಿ ಮೋಜಿನ ಜೀವನಕ್ಕೆ ಆಕರ್ಷಿತರಾಗದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿರುವ ತಂದೆ, ತಾಯಿಗಳಿಗೆ ಮಕ್ಕಳು ನೆರವಾಗಬೇಕು. ನಿರುದ್ಯೋಗಿ ವಿದ್ಯಾವಂತ ಯುವಕರು ಸೂಕ್ತ ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು’ ಎಂದರು. ‘ಸ್ವ ಸಹಾಯ ಗುಂಪುಗಳ ರಚನೆ, ರೈತ ಗುಂಪುಗಳು ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.
ಸಂಸ್ಥೆಯ ತಾಲ್ಲೂಕು ಘಟಕದ ಯೋಜನಾಧಿಕಾರಿ ವಿನಾಯಕ ಪೈ ಮಾತನಾಡಿ, ‘ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ಪೂಜಾ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಉತ್ತಮ ಜೀವನ ನಿರ್ವಹಣೆ, ಆರ್ಥಿಕ ಹೊಣೆಗಾರಿಕೆ ಮತ್ತು ಬ್ಯಾಂಕ್ಗಳಲ್ಲಿ ವ್ಯವಹರಿಸುವ ಕುರಿತು ಮಾಹಿತಿ ನೀಡುವ ಮೂಲಕ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಣೆಗೆ ಸಂಸ್ಥೆ ಶ್ರಮಿಸುತ್ತಿದೆ’ ಎಂದು ಹೇಳಿದರು.
ಜಂಗಮರಹಳ್ಳಿಯ ದಂಡಗುಂಡಪ್ಪ ತಾತ, ವೀರನಗೌಡ ಪಾಟೀಲ, ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ವಡಿಗೇರಿ, ತಿಮ್ಮಣ್ಣ ನಾಯಕ, ಗುಂಡಮ್ಮ, ಸುಜಾತ, ಮಾಳಿಂಗರಾಯ ಮತ್ತು ಮರಿಗೌಡ ಪಾಟೀಲ ಇದ್ದರು.