ಮುದಗಲ್: ರಾಂಪುರ ಏತನೀರಾವರಿ ಅಚ್ಚುಕಟ್ಟು ಪ್ರದೇಶ ರೈತರು ಕೆಬಿಜೆಎಲ್ ಎಇಇ ಹರ್ಷ ಅವರಿಗೆ ರಾಂಪುರ ಕ್ರಾಸ್ ಬಳಿ ಗುರುವಾರ ಮುತ್ತಿಗೆ ಹಾಕಿ ಸಮರ್ಪಕವಾಗಿ ನೀರು ಬಿಡುವಂತೆ ಒತ್ತಾಯಿಸಿದರು.
‘ವಾರ ಬಂದಿ ಮೇಲೆ ನೀರು ಬಿಡುತ್ತಿದ್ದು, ಕಾಲುವೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ. ಇದರಿಂದ ಬಿತ್ತಿದ ಬೆಳೆಗೆ ನೀರು ಇಲ್ಲದೆ ಬೆಳೆ ಹಾಳಾಗುವ ಹಂತದಲ್ಲಿವೆ. ವಾರಬಂದಿಯಲ್ಲಿ ಒಂದೇ ಮೋಟರ್ ಚಲಾವಣೆ ಮಾಡುತ್ತಿದ್ದಾರೆ. ಇದರಿಂದ ನೀರಿನ ಕೊರತೆಯಾಗುತ್ತಿದೆ. ಸಮರ್ಪಕವಾಗಿ ನೀರು ಬಿಡಬೇಕು’ ಎಂದು ಒತ್ತಾಯಿಸಿದರು.
ಶಾಸಕ ಮಾನಪ್ಪ ವಜ್ಜಲ ಎರಡು ದಿನ ಕಾಲುವೆ ನೀರು ಹರಿಸಿಎಂದು ಎಇಇ ಅವರಿಗೆ ಸೂಚಿಸಿದರು. ವೀರನಗೌಡ ಲಕ್ಕಿಹಾಳ, ಗಿರಿಮಲ್ಲನಗೌಡ, ಬಸನಗೌಡ ಕಂಬಳಿ, ಯಂಕನಗೌಡ ಐದನಾಳ, ನಿಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ಶಂಕ್ರಪ್ಪ ಆಶಿಹಾಳ, ರುದ್ರಗೌಡ, ಗಂಗಾಧರ ಮಾಸ್ತರ, ಬಸನಗೌಡ ಮೇಟಿ ಇದ್ದರು.