ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹುಲಸೂರ ಸಜ್ಜು

Last Updated 30 ಡಿಸೆಂಬರ್ 2017, 6:50 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಬಸವಕುಮಾರ ಶಿವಯೋಗಿಗಳ 42 ನೇ ಪುಣ್ಯಸ್ಮರಣೆ ಅಂಗವಾಗಿ ಡಿಸೆಂಬರ್ 30 ಮತ್ತು 31 ರಂದು ಕನ್ನಡ ಸಾಹಿತ್ಯ ಪರಿಷತ್‌ನ ಆಶ್ರಯದಲ್ಲಿ ಜಿಲ್ಲಾಮಟ್ಟದ 16 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಮಠದಲ್ಲಿ ಈವರೆಗೆ ಹಲವು ಸಮ್ಮೇಳನಗಳು ಜರುಗಿವೆ. ಹಿರಿಯ ಸಾಹಿತಿ ಚೆನ್ನಣ್ಣ ವಾಲಿಕಾರ್ ಸರ್ವಾಧ್ಯಕ್ಷತೆಯಲ್ಲಿ ಕಲಬುರ್ಗಿ ವಿಭಾಗ ಮಟ್ಟದ ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ, ಡಾ.ಗುರುಲಿಂಗಪ್ಪ ಧಬಾಲೆ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ, ರಂಜಾನ್ ದರ್ಗಾ ಸರ್ವಾಧ್ಯಕ್ಷತೆಯಲ್ಲಿ ವಚನ ಸಾಹಿತ್ಯ ಸಮ್ಮೇಳನ ಮತ್ತು ಡಾ.ಜಯದೇವಿ ಗಾಯಕವಾಡ ಸಮ್ಮೇಳನಾಧ್ಯಕ್ಷತೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಗಡಿನಾಡು ಸಮ್ಮೇಳನ, ಸರ್ವಧರ್ಮ ಸಮ್ಮೇಳನ, ಬಸವತತ್ವ ಸಮ್ಮೇಳನಗಳನ್ನು ಆಯೋಜಿಸಲಾಗಿತ್ತು.

‘12 ನೇ ಶತಮಾನದ ಪ್ರಮುಖ ವಚನಕಾರರು, ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಸ್ಥಾಪಿಸಿದ ಮಠವಿದು.  ಆದ್ದರಿಂದ ಇಲ್ಲಿ ವೈಚಾರಿಕ ಚಿಂತನ ಮಂಥನ ನಡೆಯಲಿ ಎಂಬ ಸದುದ್ದೇಶದಿಂದ ಪ್ರತಿ ಸಲ ಸಮ್ಮೇಳನ ಆಯೋಜಿಸಲಾಗುತ್ತದೆ. ಇದರಿಂದ ಭಕ್ತರು ಜಾತ್ರೆಗೆ ಬಂದು ಬೆಂಡುಬತ್ತಾಸು ಖರೀದಿಸುವ ಜತೆಗೆ ಉತ್ತಮ ವಿಚಾರಗಳನ್ನು ತಿಳಿದುಕೊಂಡು ಬದುಕು ಹಸನುಗೊಳಿಸಲು ಸಹಾಯಕವಾಗುತ್ತದೆ. ಇಂಥ ಸಮ್ಮೇಳನಗಳ ಆಯೋಜನೆಗೆ ಕನ್ನಡ ಸಾಹಿತ್ಯ ಪರಿಷತ್‌, ಶರಣ ಸಾಹಿತ್ಯ ಪರಿಷತ್‌ ಮತ್ತು ಬಸವ ಕೇಂದ್ರದವರು ಸರ್ವ ಸಹಕಾರ ನೀಡಿದ್ದಾರೆ’ ಎಂದು ಮಠಾಧಿಪತಿ ಶಿವಾನಂದ ಸ್ವಾಮೀಜಿ  ತಿಳಿಸಿದರು.

‘ಲಿಂ.ಬಸವಕುಮಾರ ಶಿವಯೋಗಿಯವರು ಬಸವತತ್ವ ನಿಷ್ಠರಾಗಿದ್ದರು. ಸಾಹಿತ್ಯ, ಶಿಕ್ಷಣಪ್ರೇಮಿ ಆಗಿದ್ದರು. ಮಠಕ್ಕೆ ಹೊಸರೂಪ ನೀಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜನಾನುರಾಗಿಯಾಗಿದ್ದರು. ಆದ್ದರಿಂದ ಅವರ ಪುಣ್ಯಸ್ಮರಣೋತ್ಸವಕ್ಕೆ ಮಹಾರಾಷ್ಟ್ರ, ತೆಲಂಗಾಣ ಮತ್ತು ರಾಜ್ಯದ ವಿವಿಧೆಡೆ ಭಾಗಗಳಿಂದ ಅನೇಕ ಭಕ್ತರು ಬರುತ್ತಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ ಹೇಳಿದರು.

‘ಜನಪದ ಕಲಾತಂಡಗಳು, ವಿವಿಧ ಸ್ತಬ್ಧಚಿತ್ರಗಳೊಂದಿಗೆ ಮೆರಣಿಗೆ ನಡೆಯುವ ಜತೆಗೆ ಸಮ್ಮೇಳನ ಅದ್ಧೂರಿಯಾಗಿ ಜರುಗಲಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ತಿಳಿಸಿದ್ದಾರೆ.

ಪರಂಪರೆ: ಮೂಲದಲ್ಲಿ ಚೌಕಿಮಠ ಎಂದು ಹೆಸರಿದ್ದ ಮಠವನ್ನು 12 ನೇ ಶತಮಾನದಲ್ಲಿ ಅಲ್ಲಮಪ್ರಭು ಸ್ಥಾಪಿಸಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ. ಅವರ ನಂತರದಲ್ಲಿ ಚೆನ್ನಬಸವ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಬಸವಕುಮಾರ ಶಿವಯೋಗಿ ಹಾಗೂ ಇಂದಿನ ಶಿವಾನಂದ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಸ್ವಾಮೀಜಿಗಳು ಮಠದ ಪೀಠವನ್ನು ಅಲಂಕರಿಸಿದ್ದಾರೆ.

ಬಸವಕುಮಾರ ಶಿವಯೋಗಿ ಅವರು ಯೋಗಿ ಪುರುಷರಾಗಿದ್ದರು. ಆಸನ, ಪ್ರಾಣಾಯಾಮ, ಧ್ಯಾನ ಕೈಗೊಂಡು ಆಧ್ಯಾತ್ಮಶಕ್ತಿ ಪಡೆದಿದ್ದರು. ವಿವಿಧ ವಿಷಯಗಳ ಪಾಂಡಿತ್ಯ ಹೊಂದಿದ್ದರು. ಅವರು ಬರೆದ ಷಟಸ್ಥಲ ಜ್ಞಾನವರ್ಧಕ ಎಂಬ ಪುಸ್ತಕ ಕೂಡ ಲಭ್ಯವಿದೆ.

1963ರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹುಲಸೂರ ಮತ್ತು ಬಸವಕಲ್ಯಾಣದಲ್ಲಿ ಪ್ರೌಢಶಾಲೆವರಿಗಿನ ಶಿಕ್ಷಣ ದೊರಕುವಂತೆ ಮಾಡಿದರು. ಉಳುಮೆ ಮಾಡದೆ ಬೀಳು ಬಿದ್ದಿದ್ದ ಮಠದ 62 ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿ ಅನೇಕರ ಕೈಗೆ ಕೆಲಸ ನೀಡಿದರು. ಮಠದಲ್ಲಿ ದಾಸೋಹ ಸೇವೆ ಆರಂಭಿಸಿದರು. ಅವರ ಕಾರ್ಯದಿಂದ ಮಠದ ಕೀರ್ತಿ ಎಲ್ಲೆಡೆ ಹರಡಿತು. ಅವರು ತಮ್ಮ 70 ನೇ ವಯಸ್ಸಿನಲ್ಲಿ 1976 ರಲ್ಲಿ ಪ್ರಾಣ ತ್ಯಜಿಸಿದರು.

ಊಟಕ್ಕೆ ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಹುಗ್ಗಿ: 2 ದಿನಗಳ ಸಮ್ಮೇಳನದ ಊಟಕ್ಕಾಗಿ ಸತತ ನಾಲ್ಕು ದಿನಗಳಿಂದ 3 ಕ್ವಿಂಟಾಲ್ ಶೇಂಗಾದ ಹೋಳಿಗೆ, 5 ಕ್ವಿಂಟಾಲ್ ಸಜ್ಜೆಯ ಖಡಕ್ ರೊಟ್ಟಿ ತಯಾರಿಸಲಾಗಿದೆ.

10 ಕ್ವಿಂಟಲ್ ಗೋಧಿಯ ಹುಗ್ಗಿ, 3 ಕ್ವಿಂಟಲ್ ನ ಚಪಾತಿ ಮತ್ತು 50 ಕ್ವಿಂಟಲ್ ಅಕ್ಕಿಯ ಅನ್ನ, ಸಾಂಬಾರು, ಪಲ್ಯ ಸಿದ್ಧಪಡಿಸಲಾಗುತ್ತದೆ. ಊಟದಲ್ಲಿ ವಿವಿಧ ಚಟ್ನಿಗಳನ್ನು ಬಡಿಸಲಾಗುತ್ತದೆ ಎಂದು ಮಠಾಧಿಪತಿ ಶಿವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಇಂದು
30 ರಂದು ಬೆಳಿಗ್ಗೆ 8.30ಕ್ಕೆ ಗ್ರಾಮದಲ್ಲಿ ಸಮ್ಮೇಳನಾಧ್ಯಕ್ಷ ಎಂ.ಜಿ.ದೇಶಪಾಂಡೆ ಅವರ ಭವ್ಯ ಮೆರವಣಿಗೆ ನಡೆಯುವುದು. 11ಕ್ಕೆ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ ಉದ್ಘಾಟಿಸುವರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಶಿವಾನಂದ ಸ್ವಾಮೀಜಿ, ಅಕ್ಕ ಅನ್ನಪೂರ್ಣ ನೇತೃತ್ವ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಮಲ್ಲಿಕಾರ್ಜುನ ಖೂಬಾ, ರಾಜಶೇಖರ ಪಾಟೀಲ, ರಹೀಂಖಾನ್, ಸಂಸದ ಭಗವಂತ ಖೂಬಾ ಪಾಲ್ಗೊಳ್ಳುವರು. ಮಧ್ಯಾಹ್ನ 2ಕ್ಕೆ ಪಂಚಾಕ್ಷರಿ ಪುಣ್ಯಶೆಟ್ಟಿ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು ಬರಹ ಗೋಷ್ಠಿ ನಡೆಯುವುದು. ಡಾ.ರಾಜಶೇಖರ ಜಮದಂಡಿ ಉಪನ್ಯಾಸ ನೀಡುವರು. 3ಕ್ಕೆ ಡಾ.ಬಿ.ಬಿ.ಪೂಜಾರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯುವುದು.

5ಕ್ಕೆ ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಮಾನತೆ ನೆಲೆಗಳು ಗೋಷ್ಠಿ ನಡೆಯಲಿದೆ. ಕೂಡಲಸಂಗಮದ ಡಾ.ನಾಗರಾಜ ನಾಡಗೌಡ್, ಬಿ.ಎಂ.ಅಮರವಾಡಿ, ಮಲ್ಲಿಕಾರ್ಜುನ ಆಮ್ಣೆ ಉಪನ್ಯಾಸ ನೀಡುವರು. ಸಂಜೆ 7ಕ್ಕೆ ಬೆಲ್ದಾಳ ಸಿದ್ದರಾಮ ಶರಣರ ಸಾನ್ನಿಧ್ಯದಲ್ಲಿ ಜಾಗತೀಕರಣ ಮತ್ತು ಜನಪದ ಸಂಸ್ಕೃತಿ ಗೋಷ್ಠಿ ಆಯೋಜಿಸಲಾಗುತ್ತದೆ. ಬೇಲೂರ ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮೀಜಿ, ಡಾ.ಜಗನ್ನಾಥ ಹೆಬ್ಬಾಳೆ, ಡಾ.ಶಂಭು ಬಳಿಗಾರ, ಸಂಗಪ್ಪ ಹಿಪ್ಪಳಗಾಂವ ಉಪನ್ಯಾಸನೀಡುವರು.

ಶಾಹೀನ್ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್ ಅವರನ್ನು ಸನ್ಮಾನಿಸಲಾಗುತ್ತದೆ. ರಾತ್ರಿ 9ಕ್ಕೆ ಭಾಲ್ಕಿ ಗುರುಚನ್ನಬಸವ ಸಾಂಸ್ಕೃತಿಕ ಕಲಾ ತಂಡದಿಂದ ಅಕ್ಕಮಹಾದೇವಿ ನಾಟಕ ಪ್ರದರ್ಶನಗೊಳ್ಳಲಿದೆ.

ಊಟಕ್ಕೆ ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಹುಗ್ಗಿ
2 ದಿನಗಳ ಸಮ್ಮೇಳನದ ಊಟಕ್ಕಾಗಿ ಸತತ ನಾಲ್ಕು ದಿನಗಳಿಂದ 3 ಕ್ವಿಂಟಾಲ್ ಶೇಂಗಾದ ಹೋಳಿಗೆ, 5 ಕ್ವಿಂಟಾಲ್ ಸಜ್ಜೆಯ ಖಡಕ್ ರೊಟ್ಟಿ ತಯಾರಿಸಲಾಗಿದೆ. 10 ಕ್ವಿಂಟಲ್ ಗೋಧಿಯ ಹುಗ್ಗಿ, 3 ಕ್ವಿಂಟಲ್ ನ ಚಪಾತಿ ಮತ್ತು 50 ಕ್ವಿಂಟಲ್ ಅಕ್ಕಿಯ ಅನ್ನ, ಸಾಂಬಾರು, ಪಲ್ಯ ಸಿದ್ಧಪಡಿಸಲಾಗುತ್ತದೆ. ಊಟದಲ್ಲಿ ವಿವಿಧ ಚಟ್ನಿಗಳನ್ನು ಬಡಿಸಲಾಗುತ್ತದೆ ಎಂದು ಮಠಾಧಿಪತಿ ಶಿವಾನಂದ ಸ್ವಾಮೀಜಿ ತಿಳಿಸಿದ್ದಾರೆ.

* * 

ಜಾತ್ರೆ ನಡೆಸುವುದಕ್ಕಿಂತ ಸಮ್ಮೇಳನ ಹಮ್ಮಿಕೊಂಡರೆ ಉತ್ತಮ ವಿಚಾರಗಳು ಭಕ್ತರಿಗೆ ತಲುಪಬಲ್ಲವು ಎಂದು ಪ್ರತಿವರ್ಷ ಸಮ್ಮೇಳನ ಆಯೋಜಿಸಲಾಗುತ್ತಿದೆ ಶಿವಾನಂದ ಸ್ವಾಮೀಜಿ
ಮಠಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT