ಬೀದರ್: ‘ಅಂಡಮಾನ್ನಲ್ಲಿ ಬೀದರ್ ಮಾದರಿಯಲ್ಲಿ ಸ್ವಸಹಾಯ ಗುಂಪುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ’ ಎಂದು ಅಂಡಮಾನ್ ನಿಕೋಬಾರ್ ಅಪೆಕ್ಸ್ ಬ್ಯಾಂಕ್ನ ಮಹಿಳಾ ಅಭಿವೃದ್ಧಿ ಕೋಶದ ಅಧಿಕಾರಿ ಎಲಿಜಬೆತ್ ಮೇರಿ ಹೇಳಿದರು.
ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಈಚೆಗೆ ಅಂಡಮಾನ್ ನಿಕೋಬಾರ್ ಹಾಗೂ ಆಂಧ್ರಪ್ರದೇಶದ ಬ್ಯಾಂಕ್ ಅಧಿಕಾರಿಗಳಿಗೆ ಆಯೋಜಿಸಿದ್ದ ಸ್ವಸಹಾಯ ಗುಂಪುಗಳನ್ನು ಬ್ಯಾಂಕ್ ಜತೆಗೆ ಜೋಡಿಸುವ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆರ್ಥಿಕ ಸ್ವಾವಲಂಬನೆಗೆ ಸ್ವಸಹಾಯ ಗುಂಪುಗಳು ಸಹಕಾರಿಯಾಗಿವೆ. ಹೀಗಾಗಿ ಬೀದರ್ ಮಾದರಿ ಅನುಸರಿಸಲು ಬ್ಯಾಂಕ್ಗಳಿಗೆ ಮಾರ್ಗದರ್ಶನ ಮಾಡಲಾಗುವುದು’ ತಿಳಿಸಿದರು.
‘ಅಂಡಮಾನ್ನಲ್ಲಿ ಪ್ರಕೃತಿ ಸಂಪತ್ತು ಹೇರಳವಾಗಿದೆ. ಆದರೆ, ದೇಶದ ಭೂಭಾಗದ ಜತೆಗೆ ಸಂಪರ್ಕ ಹೊಂದದ ಕಾರಣ ಸಾರಿಗೆಗಾಗಿ ವಿಮಾನಗಳನ್ನೇ ಅವಲಂಬಿಸಬೇಕಾಗಿದೆ. ಇದರಿಂದಾಗಿ ಹೆಚ್ಚಿನ ಅಭಿವೃದ್ಧಿ ಆಗುತ್ತಿಲ್ಲ’ ಎಂದು ಹೇಳಿದರು.
‘ಸ್ವಸಹಾಯ ಗುಂಪುಗಳ ಸಾಮರ್ಥ್ಯ ವೃದ್ಧಿಗೆ ತರಬೇತಿಗಳು ಪೂರಕವಾಗಿವೆ’ ಎಂದು ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ ಗಾದಗಿ ತಿಳಿಸಿದರು.
‘ಡಿಸಿಸಿ ಬ್ಯಾಂಕ್ ಜನರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕೃಷಿ ಸಾಲ ವಿತರಿಸುವಲ್ಲಿ ಮುಂಚೂಣಿಯಲ್ಲಿದೆ’ ಎಂದು ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ ಹೇಳಿದರು.
ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್, ಆಂಧ್ರಪ್ರದೇಶ ಬ್ಯಾಂಕ್ ಅಧಿಕಾರಿಗಳಾದ ಮಹಮ್ಮದ್ ಜಾಸ್ಮೀನ್, ಸ್ವರ್ಣಚಲ್ಲಾ ಉಪಸ್ಥಿತರಿದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ತನ್ವೀರ್, ಅನಿಲ ನಿರೂಪಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.