ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿಂದಾ...ಗೋವಿಂದಾ...ನಾಮ ಸ್ಮರಣೆ

Last Updated 30 ಡಿಸೆಂಬರ್ 2017, 8:39 IST
ಅಕ್ಷರ ಗಾತ್ರ

ದಾವಣಗೆರೆ: ಶ್ರೀನಿವಾಸನ ದೇಗುಲಗಳ ಮುಂದೆ ಭಕ್ತಸಾಗರ. ಸರತಿ ಸಾಲಿನಲ್ಲಿ ನಿಂತು ತಿಮ್ಮಪ್ಪನ ದರ್ಶನ. ಎಲ್ಲೆಡೆ ಗೋವಿಂದಾ.. ಗೋವಿಂದಾ.. ನಾಮ ಸ್ಮರಣೆ. ವೈಕುಂಠ ಏಕಾದಶಿ ದಿನವಾದ ಶುಕ್ರವಾರ ಕಂಡುಬಂದ ದೃಶ್ಯಗಳಿವು.

ವೈಕುಂಠ ಏಕಾದಶಿ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ, ಅಂದು, ತಿಮ್ಮಪ್ಪನ ದರ್ಶನ ಮಾಡಿದರೆ ಮೋಕ್ಷ ಸಿಗಲಿದೆ ಎಂಬುದು ಭಕ್ತರ ನಂಬಿಕೆ. ಹಾಗಾಗಿ, ಶುಕ್ರವಾರ ವೆಂಕಟೇಶ್ವರ ದೇಗುಲಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು.

ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತಸಾಗರವೇ ನೆರೆದಿತ್ತು. ಬೆಳಿಗ್ಗೆ 5ಕ್ಕೆ ಉತ್ತರ ಬಾಗಿಲಿನ ದ್ವಾರಪೂಜೆ ನೆರವೇರಿತು. ನಾರಾಯಣ ಉತ್ತರ ಬಾಗಿಲಿನ ಮೂಲಕವೇ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬ ಪ್ರತೀತಿ ಇರುವುದರಿಂದ ಉತ್ತರಬಾಗಿಲಿನ ದರ್ಶನಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ದೇಗುಲದ ಮ್ಯಾನೆಜಿಂಗ್ ಟ್ರಸ್ಟಿ ರಾಮಮೋಹನ್‌ ತಿಳಿಸಿದರು.

ಬಗೆಬಗೆಯ ಹೂಗಳಿಂದ ದೇವರನ್ನು ಅಲಂಕರಿಸಲಾಗಿತ್ತು. ದಿನವಿಡೀ ವಿಶೇಷ ಪೂಜೆ, ಅರ್ಚನೆಗಳು ನಡೆದವು. ಭಕ್ತರಿಗೆ ಹಂಚಲು 25 ಸಾವಿರ ಲಡ್ಡು ಹಾಗೂ 1 ಕ್ವಿಂಟಲ್‌ ಸಜ್ಜಿಗೆ ತಯಾರಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ವಿಶೇಷ ದರ್ಶನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ರಾತ್ರಿ 10ವರೆಗೂ ಅಖಂಡ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 60 ಸಾವಿರ ಭಕ್ತರು ದರ್ಶನ ಪಡೆದರು ಎಂದು ರಾಮಮೋಹನ್‌ ತಿಳಿಸಿದರು.

15 ಸ್ವಯಂ ಸೇವಕರ ತಂಡ ಉಸ್ತುವಾರಿ ವಹಿಸಿಕೊಂಡಿತ್ತು. ಎಂ.ನರಸಿಂಗ ಅಯ್ಯಂಗಾರ್, ಸರೋಜಾ ರೆಡ್ಡಿ, ಶ್ರೀಕಾಂತ್‌, ಗೋಪಾಲಗೌಡ, ವಿಠ್ಠಲ್‌, ವೀರೇಶ್‌, ಪ್ರತಿಭಾ ರಾಯ್ಕರ್, ರಂಗನಾಥ ಜಗನ್ನಾಥ ಹಾಗೂ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

ಮತ್ತೊಂದೆಡೆ ವಿದ್ಯಾನಗರ, ಹಳೆಯ ದಾವಣಗೆರೆ, ಬಸವಾಪಟ್ಟಣ, ಹರಿಹರ ತಾಲ್ಲೂಕಿನ ಹಲವೆಡೆ ವೆಂಕಟೇಶ್ವರನ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT