ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಋಷಿ ಕುವೆಂಪು ಜಗತ್ತಿನ ಶ್ರೇಷ್ಠ ಕವಿ

Last Updated 30 ಡಿಸೆಂಬರ್ 2017, 9:27 IST
ಅಕ್ಷರ ಗಾತ್ರ

ಕೊಪ್ಪಳ: ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್.ಎಸ್. ಪಾಟೀಲ ಹೇಳಿದರು. ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ನಿಮಿತ್ತ ನಡೆದ ವಿಶ್ವಮಾನವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ನಾಡಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಕುವೆಂಪು ಮತ್ತು ಬೇಂದ್ರೆ ಪ್ರಮುಖರು. ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ ಇವರು ರಚಿಸಿದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಆಧುನಿಕ ಕಾಲದ ಶ್ರೇಷ್ಠ ಕಾವ್ಯಗಳಲ್ಲೊಂದು. ಇವರ ಭಾಷಾ ಸಾಮರ್ಥ‌್ಯ ಏನೆಂಬುದನ್ನು ಇದು ಸಾಬೀತುಪಡಿಸಿದೆ. ಛಂದಸ್ಸು, ಷಟ್ಪದಿ ಇತ್ಯಾದಿ ಪ್ರಕಾರಗಳು ಓದುಗರಿಗೆ ಕಷ್ಟಕರ.

ಆದರೆ ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ರಚಿಸಿರುವ ಕವನ, ಕಾವ್ಯ, ಕಾದಂಬರಿಗಳು, ಅವರಿಗೆ ಭಾಷೆಯ ಮೇಲಿದ್ದ ಹಿಡಿತ, ಅವರ ಪಾಂಡಿತ್ಯ, ಜ್ಞಾನಾರ್ಜನೆಯ ಪರಿಚಯ ಮಾಡಿಸುತ್ತದೆ. ಆಧುನಿಕ ಕವಿಗಳಿಗೆ ಉತ್ತೇಜನ ನೀಡಲು ರಾಜಮಾರ್ಗ ಹಾಕಿಕೊಟ್ಟರು. ನಿಸರ್ಗದ ಬಗ್ಗೆ ಅವರು ತಮ್ಮ ಕಾವ್ಯದಲ್ಲಿ ಚೆನ್ನಾಗಿ ವರ್ಣಿಸಿದ್ದಾರೆ. ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ. ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ಸಾಹಿತ್ಯದ ಕರ್ತವ್ಯವಾಗಬೇಕು ಎಂಬುದು ಕುವೆಂಪು ಅವರ ಶ್ರೇಷ್ಠ ನುಡಿಯಾಗಿತ್ತು' ಎಂದರು.

ಡಾ.ರಾಜಶೇಖರ ಜಮದಂಡಿ ಅವರು ವಿಶೇಷ ಉಪನ್ಯಾಸ ನೀಡಿ, 'ಕುವೆಂಪು ಅವರು ರಾಮಕೃಷ್ಣ ಪರಮಹಂಸ, ಶಾರದಾ ಮಾತೆ, ಸ್ವಾಮಿ ವಿವೇಕಾನಂದರಂತಹ ಮಹನೀಯರಿಂದ ಪ್ರಭಾವಿತರಾಗಿದ್ದರು. ಪ್ರೀತಿ, ವಾತ್ಸಲ್ಯ, ಕರುಣೆ, ಮಾನವ ಗುಣ– ದೋಷಗಳು, ಶೋಷಣೆ, ಮೂಢನಂಬಿಕೆ ಹೀಗೆ ಅವರು ಬರೆಯದ ವಸ್ತು ಹಾಗೂ ವಿಷಯಗಳೇ ಇಲ್ಲ. 10ನೇ ಶತಮಾನದಲ್ಲಿ ಆದಿಕವಿ ಪಂಪ ಅವರು ಮಹಾಕಾವ್ಯ ರಚಿಸಿದರೆ, 20ನೇ ಶತಮಾನದಲ್ಲಿ ಕುವೆಂಪು ಅವರು ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿದ್ದು, ಮಹಾಕಾವ್ಯ ರಚನೆಯ ಪರಂಪರೆಯನ್ನು ಈ ರೀತಿ ಮುಂದುವರಿಸಿದರು. ಪ್ರಕೃತಿ ಸೌಂದರ್ಯವನ್ನು, ಕರ್ನಾಟಕದ ಸೊಬಗನ್ನು ಕಣ್ಣಿಗೆ ಕಟ್ಟುವಂತೆ ರಚಿಸಿರುವ ಅನೇಕ ಕವಿತೆಗಳು ಜನರ ನಾಲಿಗೆಯ ಮೇಲೆ ಇಂದಿಗೂ ಹರಿದಾಡುತ್ತಿವೆ' ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಿ. ಛಲವಾದಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾನಾಧಿಕಾರಿ ಹರಿನಾಥಬಾಬು, ತಹಶೀಲ್ದಾರ್ ಗುರುಬಸವರಾಜ, ಮಹಾಂತೇಶ್ ಮಲ್ಲನಗೌಡರ, ಶಿವಾನಂದ ಹೊದ್ಲೂರ, ವಾರ್ತಾಧಿಕಾರಿ ತುಕಾರಾಂರಾವ್, ಜಿಲ್ಲಾ ಬಿಸಿಎಂ ಅಧಿಕಾರಿ ಚಿದಾನಂದ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು. ನಾಗರಾಜ್ ಸ್ವಾಗತಿಸಿ, ವಂದಿಸಿದರು. ಸಿ.ವಿ. ಜಡಿಯವರ್ ನಿರೂಪಿಸಿದರು.

* * 

ಕುವೆಂಪು ನಾಡಿನ ಸಂಸ್ಕೃತಿ ಬಿಂಬಿಸುವ ಉಡುಪು ಧರಿಸಿ ಐರಿಷ್ ಕವಿಯ ಬಳಿ ಇಂಗ್ಲಿಷ್ ತೋರಿಸಿದಾಗ, ಮಾತೃ ಭಾಷೆಯಲ್ಲಿ ಕವಿತೆ ರಚಿಸುವಂತೆ ಸಲಹೆ ನೀಡಿದ್ದರು.
ಡಾ.ರಾಜಶೇಖರ ಜಮದಂಡಿ, ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT