ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ...

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬದುಕೆಂಬ ಅಯಸ್ಕಾಂತ ಸೆಳೆದದ್ದು ಸಿಕ್ಕಿಂನ ಹೂ ಕಣಿವೆಗೆ. ನಾವು ಲಾಚುಂಗ್ ಹಾದು ಯುಮ್‌ತುಂಗ್ ವ್ಯಾಲಿ ನೋಡುವ ತವಕದಲ್ಲಿದ್ದೆವು. ಮಧ್ಯೆ ಉಳಿದದ್ದು ಒಂದು ದಿನ ಮಾತ್ರ. ಸುಮ್ಮನೆ ಕಳೆಯುವುದೇಕೆಂದು ಪಶ್ಚಿಮ ಬಂಗಾಲದ ಪುಟಾಣಿ ಹಳ್ಳಿ ಕಾಲಿಪೊಂಗ್ ನೋಡೋಣ ಎಂದುಕೊಂಡೆವು.

ಇಲ್ಲಿಗೆ ಬಂದಾಗ ಭಾನುವಾರ. ಪೇಟೆ, ಬೀದಿಗಳೆಲ್ಲಾ ಭಯವಾಗುವಷ್ಟು ಖಾಲಿ ಖಾಲಿ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ದಿನಕ್ಕೆ ಎರಡು ಬಸ್ಸು ಗ್ಯಾಂಗ್‌ಟಾಕ್ ಕಾಲಿಪೊಂಗ್ ನಡುವೆ ಚಲಿಸುತ್ತೆ. ಬೆಂಗಳೂರಿನಿಂದ ಬಗ್ದೊದ್ರದಲ್ಲಿಳಿದು ಡಾರ್ಜಿಲಿಂಗ್ ನೋಡಿ ಅಲ್ಲಿಂದ ಕಾಲಿಪೋಂಗ್ ತಲುಪಿದೆವು. ಪ್ರತಿಯೊಬ್ಬರಿಗೆ ₹ 12,000ದಷ್ಟು ವಿಮಾನಯಾನ ಖರ್ಚು ಮತ್ತು ₹ 10 ಸಾವಿರದಷ್ಟು ತಿರುಗಾಟದ ವೆಚ್ಚ ನಮ್ಮ ಜೋಳಿಗೆಯಿಂದ ಖಾಲಿಯಾಗಿತ್ತು.

ಇದ್ದ ಒಬ್ಬೇ ಒಬ್ಬ ಟ್ಯಾಕ್ಸಿ ಚಾಲಕ ರಜತ್‌ನಲ್ಲಿ ಊರು ತೋರಿಸಲು ಚೌಕಾಸಿಗಿಳಿದೆವು. ₹2,200ಕ್ಕೆ ಸಣ್ಣ ವಾಹನವೊಂದು ಪಡೆದುಕೊಂಡೆವು. ಮಣಮಣ ಮಂತ್ರದಂತೆ ಗುಣುಗುಣಿಸುತ್ತಾ ಬೆಳಿಗ್ಗೆ 7.30ಕ್ಕೆ ತಡವಾಗಿ ಅವನ ಸ್ನೇಹಿತನೊಬ್ಬ ಹಾಜರಾದ. ಈ ಊರಿನ ಯಾರಿಗೂ ಧಾವಂತವಿದ್ದಂತೆ ತೋರಲಿಲ್ಲ. ಸಮಯಕ್ಕೂ ಕೂಡ!

ಎಲ್ಲೆಲ್ಲೂ ಬಿದಿರ ಮೆಳೆಗಳ ಪುಟಾಣಿ ಹಳ್ಳಿ ಕಾಲಿಪೊಂಗ್. ಶಾಂತ ಸಜ್ಜನ ಊರು. ಬೀದಿಯಲ್ಲಿ ಬಹಳ ಜನವಿದ್ದರೂ ಗದ್ದಲವಿಲ್ಲದೆ ಶಾಂತವೋ ಶಾಂತ. ಕ್ರಿ.ಶ.1700ರ ಸುಮಾರಿಗೆ ನಾಲ್ಕಾರು ಮನೆಗಳಿದ್ದ ಊರು. ಬ್ರಿಟಿಷ್ ಪಳೆಯುಳಿಕೆಯ ಹಲವಾರು ಕಟ್ಟಡಗಳು ಇನ್ನೂ ಉಳಿದಿವೆ. ಖಾಲಿಯಾಗಿದ್ದ ಊರು ಟಿಬೆಟ್ ಆಕ್ರಮಣವಾದ ತರುವಾಯ ನಿರಾಶ್ರಿತರಿಂದ ತುಂಬಿ ತುಳುಕಿತು ಎನ್ನಬಹುದು.

ಭೂತಾನ್‌ನ ರಾಣಿವಾಸದ ಸುಂದರ ಕಟ್ಟಡ ನೋಡಿ ಬಂದೆವು. ಊರ ಸನಿಹದ ಬೆಟ್ಟದ ಮೇಲಿನ ಸುಂದರ ದುರಪಿನ್ ಮಾನೆಷ್ಟ್ರಿಯೊಂದು ದುರ್‌ಪಿನ್ ದಾರಾ ಬೆಟ್ಟದ ತುದಿಯಲ್ಲಿತ್ತು. ಅಲ್ಲಿಗೆ ಹೋಗಿ ಬಂದೆವು. ಮಾನೆಷ್ಟ್ರಿಗಳ ಮತ್ತು ಸ್ಥಳೀಯ ಊರಿನ ಹೆಸರುಗಳನ್ನು ನೆನಪಿನಲ್ಲಿಡುವುದು ನಮಗೊಂದು ಸವಾಲು. ಊರಿನ ಸುಂದರ ಚಿತ್ರ ಇಲ್ಲಿಂದ ಪಡೆದೆವು.

ನಾವು ಬೆಳಗ್ಗೆ 7ಕ್ಕೆ ಹೊರಟು ಲಾವಾ, ರಿಷಿ ಸರ್ಕಲ್, ಸ್ಥಳೀಯ ಮಾನೆಷ್ಟ್ರಿ ಸುತ್ತಿ ಸಂಜೆ ನಾಲ್ಕರ ಹೊತ್ತಿಗೆ ವಾಪಾಸು ಬಂದೆವು. ಬೌದ್ಧಾಲಯಗಳಲ್ಲಿನ ಹಿರಿಯರನ್ನು ಮಾತನಾಡಿಸುವ ತವಕವಾದರೂ ಅವರ ಧ್ಯಾನಕ್ಕೆ ಭಂಗ ತರುವ ಮನಸಾಗಲಿಲ್ಲ. ಮಣಿಸರ ಹಿಡಿದು ಜಪದಲಿ ನಿರತರವರು.

ಸಂಜೆಗೆ ಊರು ಸುತ್ತುಲು ಹೊರಟಾಗ ಹಿರಿಯರೊಬ್ಬರು ಅಂಗಡಿ ಎದುರು ಕುಳಿತಿದ್ದರು. ಅವರನ್ನು ಮಾತಿಗೆ ಎಳೆದೆವು. ತುಂಬಾ ಸಂತೋಷ ಸ್ವಭಾವದವರಾದ ಅವರು ನಮ್ಮೆದುರು ಮನದ ಇಂಗಿತವನ್ನು ತೆರೆದುಕೊಂಡರು. ಅವರ ಹೆಸರು ತಾಶಿರಿಂಗ್ ಸಾಂಗ್‌ಪೋ. ಹೆಸರಿನ ಅರ್ಥ ಒಳ್ಳೆಯ ಮನುಷ್ಯ. ಅವರ ಹೆಸರನ್ನು ಹೇಗೆ ಉಚ್ಚಾರ ಮಾಡಬೇಕೆಂದು ಈಗಲೂ ನನಗೆ ತಿಳಿದಿಲ್ಲ. ತಮ್ಮ ಹೆಸರಿನ ಸ್ಪೆಲಿಂಗ್‌ನ್ನು ಅವರೇ ಹೇಳಿದರು. ಅವರ ಕತೆಯನ್ನು ನಮ್ಮೆದುರಿಗೆ ಹೀಗೆ ತರೆದಿಟ್ಟರು.

ನೆತ್ತರ ಚರಿತ್ರೆ
ನಾನು, ತಾಶಿರಿಂಗ್ ಸಾಂಗ್‌ಪೋ, ನನ್ನ ಕುಟುಂಬದೊಂದಿಗೆ ತಣ್ಣಗೆ ಟಿಬೆಟ್‌ನಲ್ಲಿದ್ದೆವು. ಉತ್ತಿ, ಬಿತ್ತಿ, ಉಂಡುಟ್ಟು ಸುಖವಾಗಿದ್ದೆವು. ನಿರಭ್ರ ನೀಲಾಕಾಶ ಸರಳ ಜೀವನ ನಮ್ಮದಾಗಿತ್ತು. ಸಾಕಷ್ಟು ಅನುಕೂಲಿಗರೇ ಆಗಿದ್ದೆವು. ರಾತ್ರೋ ರಾತ್ರಿ ನಮ್ಮ ಅರಿವಿಗೆ ಬರದಂತೆ ಚೀನಾ ದಾಳಿ ಮಾಡಿತು. ನಮ್ಮ ಸಂಸಾರವೆಲ್ಲಾ ಚಲ್ಲಾಪಿಲ್ಲಿ. ಇವರ ಪ್ರಭುತ್ವ ಒಪ್ಪದವರು ಕಾಲಡಿ ಸಿಲುಕಿದ ಇರುವೆಗಳಂತಾಗಿ ಊರು ಬಿಟ್ಟರು. ನಾವು ಕೂಡ ಊರು ಬಿಟ್ಟೆವು. ರಾತ್ರಿಗಳಲ್ಲಿ ಸಂಚರಿಸುತ್ತಾ, ಹಗಲು ಕಾಡುಗಳಲ್ಲಿ ಅಡಗಿ ಕುಳಿತು ಹಲವು ದಿನ ಪ್ರಯಾಣ ಮಾಡಿದೆವು. ಎಷ್ಟು ದಿನ ಹೀಗೆ ಕಳೆದೆವೋ ಗೊತ್ತಿಲ್ಲ. ಚೀನಿಯ ಕಣ್ಣಿಗೆ ಬಿದ್ದಿದ್ದರೆ ಕೈಲಾಸಕ್ಕೆ ರಹದಾರಿ. ದಾರಿ ಇಲ್ಲದ ಹಾದಿಗಳಲ್ಲಿ ರಾತ್ರಿ ಸಂಚಾರ. ಹಾವು, ಕಾಡು ಪ್ರಾಣಿಗಳ ಭಯ. ಇನ್ನೊಂದೆಡೆ ಮನುಷ್ಯರ ಭಯ!

ಎರಡು ಪುಟಾಣಿ ಮಕ್ಕಳು ಬೇರೆ ಜೊತೆಯಲ್ಲಿದ್ದರು. ದಾರಿಯಿಲ್ಲದ ದಾರಿಯಲ್ಲಿ, ಗುರಿಯಿಲ್ಲದ ಸಂಚಾರ! ನಮಗಚ್ಚರಿ ಈಗ. ಕೆಲವು ತಿಂಗಳ ಪ್ರಯಾಣದ ಬಳಿಕ ಸುರಕ್ಷಿತ ಕಾಲಿಪೊಂಗ್ ತಲುಪಿದೆವು. ಇಲ್ಲಿಂದ ಪ್ರಾರಂಭವಾದುದು ಹೊಸ ಸಾಹಸ ಯಾತ್ರೆ. ಹಿಂದಿ ಚೀನಿ ಬಾಯಿ ಬಾಯಿ, ಎಂಬ ಮಂತ್ರದಿಂದ ಸಾವಿರಾರು ಮಂದಿ ಹಾದಿಯಿಲ್ಲದ ಹಾದಿಯ ಪಾಲಾದರು. ಇನ್ನೊಂದಿಷ್ಟು ಮಂದಿ ಕಾಡು ಪಾಲಾದರು! ಉಳಿದವರೆಷ್ಟೋ ಗೊತ್ತಿಲ್ಲ?’ ಎಂದರು ತಾಶಿರಿಂಗ್ ಸಾಂಗ್‌ಪೋ.

ನಮಗೆ ಇತಿಹಾಸ ಸೇರಿದ ಕ್ರೂರ ಆಕ್ರಮಣದೊಂದರ ಭಾಗವನ್ನು ಸ್ಪರ್ಶಿಸಿ ಬಂದ ಅನುಭವವಾಗಿತ್ತು. ಟಿಬೆಟ್‌ನಿಂದ ಪಾರಾಗಿ ಬಂದ ನಿರಾಶ್ರಿತರು ಇಲ್ಲೀಗ ನೆಲೆಸಿದ್ದಾರೆ. ಇದನ್ನೀಗ ನಿರಾಶ್ರಿತರ ಬೀಡೆನ್ನಲು ಅಡ್ಡಿಯಿಲ್ಲ. ಓಡಿಬಂದ ಅವರ ಮನಸ್ಥಿತಿ ಹೇಗಿತ್ತು? ತಮ್ಮನ್ನು ದುರ್ದಿನಗಳಿಗೆ ತಳ್ಳಿದ ಪ್ರಭುತ್ವದ ಬಗೆಗೆ ಅವರು ತಾಳಿದ ನಿಲುವು ಏನು?

ಜೀವನವನ್ನು ಅವರೆದುರಿಸಿದ ರೀತಿಯ ಊಹಿಸಿಕೊಂಡರೆ ಅಚ್ಚರ ಎನಿಸುತ್ತದೆ. ಏನೆಲ್ಲಾ ಕೇಳುವುದಿತ್ತು ಆ ಅಜ್ಜನಲ್ಲಿ. ಯಾವುದಕ್ಕೂ ಸಮಯ ಸಾಲಲಿಲ್ಲ. ಅವರಿಗೆ ಕೃತಜ್ಞತೆ ಹೇಳಿ ಹೊರಟೆವು. ನಮ್ಮ ಅನುಭದ ಬುತ್ತಿಗೆ 74ರ ಆ ಅಜ್ಜನ ಪ್ರೀತಿ ಸೇರ್ಪಡೆಗೊಂಡಿತ್ತು.ಇಲ್ಲಿಂದ ನಮ್ಮ ಪ್ರಯಾಣ ಲಾಚುಂಗ್ ಎಂಬ ಹಳ್ಳಿಗೆ.

ಹೂ ಕಣಿವೆಯತ್ತ
ಮನೆಯೆದುರಿಗೆ ಸ್ಥಳೀಯ ದನದಿಂದ ಹಾಲು ಕರೆಯುವವರಲ್ಲಿ ಬೇಡಿ ಒಂದೆರಡು ಲೋಟ ಹಾಲು ಕುಡಿದೆವು. ಲಾಚುಂಗ್ ಹಳ್ಳಿಯಿಂದ ಹೂ ಕಣಿವೆ ಕೇವಲ 23 ಕಿ. ಮೀ. ದೂರದಲ್ಲಿನ ‘ಹೂ ಕಣಿವೆ’ ಕಣಿವೆಗಳ ಸ್ವರ್ಗವೆಂದೇ ಹೇಳಬೇಕು. ದೂರ ಕಡಿಮೆಯಾದರೂ ದಾರಿ ದುರ್ಗಮ. ಒಮ್ಮೆಯಂತೂ ದಾರಿಗಡ್ಡವಾಗಿ ಬಂಡೆಗಳ ರಾಶಿ ಬಂದು ಬಿದ್ದಿತ್ತು! ‘ದಾರಿ ಕಾಣದಾಗಿದೆ’ ಎಂದು ಹಾಡಿಕೊಂಡೆವು.

ಚಾಲಕನಿಳಿದು ಹೋಗಿ ಸರಿದಾರಿ ಪತ್ತೆಹಚ್ಚಿದ. ಭೂಕಂಪನಗಳಿಲ್ಲಿ ಸಾಮಾನ್ಯನೆಂದ ನಮ್ಮ ಚಾಲಕ. ಒಂದು ಕಲ್ಲು ಅಡ್ಡಲಾಗಿ ಬಿದ್ದಿದ್ದರೂ ನಾವು ಕನಿಷ್ಠ ಎರಡು ದಿನ ನಿರ್ಜನ ಏಕಾಂತದಲ್ಲಿ ಕಾಲ ಕಳೆಯಬೇಕಿತ್ತು. ಭೂಕಂಪನದ ಅನುಭವವೂ ನಮ್ಮ ತಂಡಕ್ಕಾಗಿತ್ತು. ಅಡಿಗಡಿಗೂ ಹೊಂಡಗಳ ಅಡಚಣೆಯನ್ನು ಹೇಗೋ ನಿಭಾಯಿಸಿ ಲಾಚುಂಗ್‌ನ 9,500 ಅಡಿಯಿಂದ ಬೆಟ್ಟಗಳ ಜೋಳಿಗೆಗೆ ತಲುಪಿಬಿಟ್ಟೆವು.

ಶಿಂಗ್ಬಾ ರೇಡೋಡೆಂಡ್ರಾನ್ ಸ್ಯಾಂಚುರಿಯಲ್ಲಿದಲ್ಲಿದ್ದೆವು. ಹಕ್ಕಿಗಳ, ಪ್ರಾಣಿಗಳ ಸ್ಯಾಂಚುರಿಯಂತೆ ಇದೊಂದು ಪುಷ್ಪಗಳ ಸ್ಯಾಂಚುರಿ. ಮಾರ್ಚ್‌ನಿಂದ ಮೇವರೆಗೆ ಪುಷ್ಪಗಳ ಹಬ್ಬ! ನೋಡುವ ನಮ್ಮ ಭಾಗ್ಯವೇ ನಮ್ಮನ್ನು ಧನ್ಯರನ್ನಾಗಿಸುತ್ತೆ. ನೋಡನೋಡತ್ತಾ ಪ್ರಕೃತಿ ನಮ್ಮನ್ನಿಲ್ಲಿ ನಿರ್ಗರ್ವಿಗಳನ್ನಾಗಿಸುತ್ತದೆ, ಕೆಲವೊಮ್ಮೆ ಕವಿಯಾಗಿಸುತ್ತೆ.

ಸುಮಾರು 14,000 ಅಡಿಗಳಷ್ಟು ಎತ್ತರಕ್ಕೆ ಬಂದಿದ್ದೆವು. ಕಣಿವೆಗಳ ನಡುವೆ ಹಿಮ ಕರಗಿ ವಿಸ್ತಾರವಾಗಿ ಹರಿವ ನದಿ. ಬೆಟ್ಟಗಳ ಅಂಚುಗಳಲ್ಲಿ ಕುರಿಯ ತುಪ್ಪಳದಂತೆ ಹರಡಿದ ರೇಡೋಡೆಂಡ್ರಾನ್ ಕಾಡುಗಳು. ಕಣಿವೆಯುದ್ದಕ್ಕೂ ಕಣ್ಣು ಕುಕ್ಕುವ ಪುಷ್ಪದಂಗಳ. ಲಾಚುಂಗ್‌ನಲ್ಲಿ ಅವಸರವಾಗಿ ಹರಿವ ತೀಸ್ತಾ ನದಿ ಇಲ್ಲಿ ಮಂದಗಮನೆ. ವಿಸ್ತಾರದ ಹರವು, ಆಳ ಬಹಳ ಕಡಿಮೆ. ನೀಲಾಕಾಶದ ಬಣ್ಣಕ್ಕೆ ನೀಲಿಗಟ್ಟಿದ ನದಿ. ಈ ಹೂ ಚಿತ್ತಾರವನ್ನು ಸವಿದು ಯುಮ್‌ತುಂಗ್ ಕಣಿವೆಯವರೆಗೆ ಪ್ರಯಾಣ ಬೆಳೆಸಿದೆವು.

ಸುಮಾರು 15 ಕಿಲೋ ಮೀಟರ್ ಪುಷ್ಪಗಳ ಮೆರವಣಿಗೆ. ನೋಟ ಹರಿಸಿದ ಕಡೆ ಹಿಮ ಮತ್ತು ಹೂ. ಐದು ಜಾತಿಯ ರೇಡೋಡೆಂಡ್ರಾನ್‌ಗಳಿದ್ದವು. ಕೆಂಪು, ಬಿಳಿ, ಕೇಸರಿ, ತೆಳು ನೇರಳ, ಅರಶಿನ, ಒಂದಕ್ಕಿಂತೊಂದು ಚೆನ್ನ. ಇವೆಲ್ಲಾ ದೊಡ್ಡ ಹೂಗಳ ಹೆಸರು ಬಲ್ಲವುಗಳ ಪ್ರವರವಾಯಿತು. ಇನ್ನು ಚಿಕ್ಕ ಚಿಕ್ಕ ಪುಷ್ಪಗಳ ಲೆಕ್ಕವಿಟ್ಟವರಾರು? ಪುಷ್ಪ, ತರುಲತೆಗಳ ಅಧ್ಯಯನಕಾರರಿಗೆ, ನನ್ನಂತಹ ಭಾವುಕರಿಗೆ ಸುಗ್ರಾಸ. ಇಲ್ಲಿ ಕ್ಯಾಮೆರಾ ಬದಿಗಿಟ್ಟ ಗಳಿಗೆಗಳ ನೆನಪಿಲ್ಲ.

ಕೈಚಾಚಿದ ಮನುಜರಂತೆ ಕಾಣುವ ಸೂಚಿಪರ್ಣದ ಕಾಡುಗಳ ನಡುವೆ ಹಿಮ ಕರಗಿದ ತೊರೆಗಳ ಹಾದು ಯುಮ್‌ತುಂಗ್ ಕಣಿವೆಯಲ್ಲಿದ್ದೆವು. ಇಲ್ಲಿಂದಲೇ ಜೀರೋ ಪಾಯಿಂಟ್‌ಗೂ ಹೋಗಿ ಹಿಮಗಡ್ಡೆಗಳನ್ನೆಲ್ಲಾ ಮಾತಾಡಿಸಿ ಬರಬಹುದು.

ಹಿಮದಲ್ಲಿ ನಡೆದಾಡುವ ಓಡಾಡುವ ಸಲಕರಣೆಗಳು ಬಾಡಿಗೆಗೆ ಲಭ್ಯ. ಕೆಲವೇ ಗಂಟೆಗಳ ಜರ್ಕಿನ್ ಒಂದರ ಬಾಡಿಗೆ ₹100 ರಿಂದ ₹200. ಕೆಲವರು ಜೀರೋ ಪಾಯಿಂಟ್ ನೋಡಲು ಹೊರಟಿದ್ದರು. ನಮ್ಮದಿನ್ನು ಬೆಳಗ್ಗಿನ ಹೊಟ್ಟೆ ಪೂಜೆ ಮುಗಿದಿರಲಿಲ್ಲ. ಸಿಕ್ಕಿಂ ತಿಂಡಿ ಸಿಗುವುದೆಂಬ ಬೋರ್ಡ್ ನೋಡಿ ಗೂಡಂಗಡಿ ಒಳಹೊಕ್ಕೆವು. ಅಂಗಡಿ ಸಂಖ್ಯೆ 46ರಲ್ಲಿ ಬೆಳ್ಳಂ ಬೆಳಿಗ್ಗೆ ಯಾಕ್ ಮಾಂಸವನ್ನು ಕತ್ತರಿಸುತ್ತಾ ಕೂತಿದ್ದನೊಬ್ಬ.

ಟಿಬೆಟಿಯನ್ ತಿಂಡಿ ತುಪ್ಕಾ ಮತ್ತು ನಮಕೀನ್ ಚಹಗೆ ಆರ್ಡರಿಸಿದೆವು. ಒಂದತ್ತು ನಿಮಿಷಕ್ಕೆ ತಯಾರಾದ ತುಪ್ಕಾ ತಿಂದು ಹೊರಟೆವು. ನಾಲ್ಕೈದು ತಿಂಗಳು ವ್ಯಾಪಾರ ಮಾಡಿ ಹಿಂದಿರುಗುವ ವ್ಯಾಪಾರಿಗರೊಂದಿಗೆ ಚೌಕಾಸಿಗಿಳಿದು ಎರಡು ಟಿಬೆಟಿಯನ್ ಗಂಟೆಗಳನ್ನು ಖರೀದಿಸಿದೆವು. ನೆಪಾಲಿಯನ್ ಕುರ್ಪಿಯೊಂದು ಈಗಾಗಲೇ ನಮ್ಮ ಜೊತೆಯಾಗಿತ್ತು.

ಮುಟ್ಟಿದರೆ ಸಿಗಬಹುದೆನ್ನುವಷ್ಟು ದೂರದಲ್ಲಿ ಕೆನೆಹಾಲ ಮೆತ್ತಿಕೊಂಡ ಹಿಮ ಹೊತ್ತ ಶಿಖರಗಳು. ಸುತ್ತಲೂ ಹೂ ಕಣಿವೆ. ಜೀರೊ ಪಾಯಿಂಟ್ ಹೋಗುವ ಮನಸ್ಸಿದ್ದರೂ ದಿನಗಳಿರಲಿಲ್ಲ. ಹಿಂದಿರುಗುವ ಹಾದಿಯಲ್ಲಿದ್ದ ಬಿಸಿನೀರ ಬುಗ್ಗೆಯೊಂದನ್ನು ನೋಡಿ ಅದರ ಉಗಮದಲ್ಲಿ ಕಾಲಿಟ್ಟು ಕೂರುವ ಉತ್ಸಾಹದಿಂದ ಹುಡುಕಿದೆವು, ಸಿಗಲಿಲ್ಲ. ಉಗಮವೆಲ್ಲೋ ಬೆಟ್ಟದ ತುದಿಯಲ್ಲಿತ್ತೆಂದು ಕಾಣುತ್ತದೆ. ಅಲ್ಲಿಂದಲೇ ಒಂದು ಪೈಪೊಂದನ್ನು ನೀಡಿ ಸಣ್ಣ ಈಜು ಹೊಂಡ ನಿರ್ಮಿಸಿದ್ದರು. ಆದರಿದು ಗಲೀಜಾಗಿತ್ತು. ನಿರಾಶರಾಗಿ ಹೊರಟೆವು.

ಕೇವಲ ಒಂದೆರಡು ದಿನಗಳಿಗೆ ಬಂದರೆ ಈ ಸೌಂದರ್ಯ ಕಣ್ಣು ತುಂಬಿ ಜನ ಜೀವವ ಅರಿಯಲು ಏನೇನೂ ಸಾಲದು. ಚಳಿಯ ದಿನಗಳಿಗಳಲ್ಲಿ ಒಂದೈದು ದಿನ ಬರುವ ಇರಾದೆಯೊಂದಿಗೆ ಹೂ ಕಣಿವೆಗೆ ಬಾಯ್ ಬಾಯ್ ಎಂದೆವು.

ಲಾಚುಂಗ್ ಎಂಬ ಪರ್ವತದ ಮರಿ
ಕಾಲಿಪೊಂಗ್‌ನಿಂದ ತೀಸ್ತಾ ನದಿ ಸವರಿಕೊಂಡು, ಗ್ಯಾಂಗ್‌ಟಾಕ್ ದಾಟಿ ಎರಡು ಹಿಮಬೆಟ್ಟಗಳ ಮಡಿಲಾದ ಸ್ವರ್ಗ ಸದೃಶ ಲಾಚುಂಗ್‌ನಲ್ಲಿದ್ದೆವು. ಇಲ್ಲಿಗೆ ತಲುಪಿದಾಗ ನಡು ಮಧ್ಯಾಹ್ನ. ಬಿಸಿಯೂಟ ಹೊಟ್ಟೆಗಿಳಿಸಿದೆವು.

ಲಾಚುಂಗ್‌ನಲ್ಲಿ ರಾಗಿಯಿಂದ ತಯಾರಾಗುವ ಸ್ಥಳೀಯ ಬಿಯರಾದ ತುಂಬಾ ತುಂಬಾನೇ ಜನಪ್ರಿಯ. ಹೀರುವವರಿಗೆ ಚಂದದ ಮರದಿಂದ ಕೊರೆದ ಮಡಿಕೆಯಲ್ಲಿ ಇದನ್ನು ನೀಡುವರು. ಬಿದಿರ ಹೀರು ಕೊಳವೆ ಹೀರಲು ಕೊಡುವರು. ಇಲ್ಲಿನವರು ಮತ್ತೆ ಮತ್ತೆ ಬಿಸಿ ನೀರನ್ನು ಅದಕೆ ಸೇರಿಸಿ ನಾಲ್ಕು ಸೇರು ಬಿಯರು ಹೀರುವುದ ನೋಡುವುದೇ ಚಂದ.

ಹಳ್ಳಿಯ ಪೂರ್ವ ತುದಿಯಲ್ಲಿದ್ದೆವು. ಎದುರಿಗಿನ ಪರ್ವತವೊಂದು ಆಗಲೋ ಈಗಲೋ ಬೀಳುವಂತಿತ್ತು. ಸನಿಹದಲ್ಲೊಬ್ಬಳು ಜಲಕನ್ಯೆ ತನ್ನ ವಯ್ಯಾರ ತೋರುತ್ತಾ ಕರಗಿ ಕಲ್ಲಿಗಪ್ಪಳಿಸುತ್ತಿದ್ದಳು. ಹಿಮಧಾರೆಯ ಬಿಳಲುಗಳ ಕ್ಯಾಮೆರಾದೊಳಗೆ ಮತ್ತೆ ಮತ್ತೆ ಹೋಗಿ ಕುಳಿತವು. ಕದ್ದು ಕದ್ದು ತನ್ನ ಪೋಟೊ ತೆಗೆಸಿಕೊಳ್ಳುತಲಿದ್ದಳು ಜಲಕನ್ಯೆ! ಇದೇ ನೀರಿನಲ್ಲಿ ಸ್ಥಳೀಯ ಗೋಧಿ, ಹೂಕೋಸು, ಸಾಸಿವೆ ಬೆಳೆಯುತ್ತಿದ್ದರು.

ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ದಾಟಿ ದೊಡ್ಡ ಬೆಟ್ಟದ ಬುಡದಲ್ಲಿತ್ತು ನಮ್ಮ ಹೋಂ ಸ್ಟೇ. ಉದ್ಯಾನವನದ ನಡುವಿನ ಮನೆಯಂತಿತ್ತು ನಮ್ಮ ಹೋಂ ಸ್ಟೇ. ಕೋಣೆಯಿಂದ ಕೈ ಹೊರ ಚಾಚಿದರೆ ಹೂ ಕೋಸಿನ ಸಣ್ಣ ವನ. ಮುದುಕಪ್ಪನೊಬ್ಬ ಮೇವು ಹೊತ್ತು ಹೊರಟಿದ್ದ. ಕ್ಯಾಮೆರಾ ಹಿಡಿದ ನನ್ನನ್ನು ವಿಚಿತ್ರ ವ್ಯಕ್ತಿಯೆಂಬಂತೆ ನೋಡಿ ಹೊರಟು ಹೋದ.

ನಾವು ಊರು ಸುತ್ತಲು ಹೊರಟೆವು. ಶಾಲು, ಸ್ವೆಟರು ಮಾರುವ ಅಂಗಡಿಗಳ ಸಾಲು. ರವ ರವನೇ ಬೀಸುವ ಹಿಮ ಗಾಳಿ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಸ್ವಲ್ಪ ಬಿಟ್ಟಿತ್ತು. ಅಧ್ಯಾತ್ಮ ಚಿಂತನೆಗೆ, ಧ್ಯಾನಕ್ಕೆ ಹೇಳಿ ಮಾಡಿಸಿದ ತಾಣ. ಜನರ ನಿಷ್ಕಲ್ಮಷ ಪ್ರೀತಿಗೆ ಮಾರು ಹೋದೆವು. ಬಜ್ಜಿ ಅಂಗಡಿಯಲ್ಲಿ ಬೋಂಡಾ ತಿನ್ನುತ್ತಾ ಎದುರಿಗಿನ ಜಲಪಾತ ನೋಡುತ್ತಾ ಕುಳಿತೆವು. ಕಾಲವೇ ಕುಕ್ಕುರುಗಾಲಿನಲ್ಲಿ ಕುಳಿತ ಅನುಭವ. ಜನ, ಜೀವನ ಬಹಳ ನಿಧಾನ. ಚಳಿ ಅಡರುವ ಮುನ್ನವೇ ಎರಡೆರಡು ಹೊದಿಕೆ ಹೊದ್ದು ಮಲಗಿದೆವು.


–ಹೂ ಕಣಿವೆಯ ಹಾದಿಯಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT