ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಒಳಮೀಸಲಾತಿ ವರದಿ ದಮನಿತರನ್ನು ಮೇಲೆತ್ತುವ ಅಸ್ತ್ರ: ಸಿದ್ದಯ್ಯ

Last Updated 18 ಅಕ್ಟೋಬರ್ 2019, 10:38 IST
ಅಕ್ಷರ ಗಾತ್ರ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಒಳಮೀಸಲಾತಿ ಕುರಿತು ನೀಡಿರುವ ವರದಿ ಬಗ್ಗೆ ಪರ–ವಿರೋಧ ಕೂಗೆದ್ದಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯ, ವರದಿ ಜಾರಿಗೆ ಪಟ್ಟು ಹಿಡಿದಿದೆ. ಬಲಗೈ ಸಮುದಾಯ ಇದನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಜ.13ರಂದು ಮುಖ್ಯಮಂತ್ರಿ ಎರಡೂ ಬಣಗಳ ಸಭೆ ಕರೆದಿದ್ದಾರೆ. ವರದಿಯ ಸಾಧಕ–ಬಾಧಕಗಳ ಬಗ್ಗೆ ಲೇಖಕ ಕೆ.ಬಿ.ಸಿದ್ದಯ್ಯ ಪ್ರಜಾವಾಣಿ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಂದರ್ಶನ ಡಿಸೆಂಬರ್ 31, 2017ರಂದು ಪ್ರಕಟವಾಗಿತ್ತು.

* ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಲು ಕಾರಣಗಳೇನು?

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಉಪಜಾತಿಗಳು ಇವೆ. ಇಲ್ಲಿ ಹೊಲೆಯರಿಗೆ ಹೋಲಿಸಿದರೆ ಮಾದಿಗರ ಜನಸಂಖ್ಯೆ ಹೆಚ್ಚಿದೆ. ಕಡಿಮೆ ಸಂಖ್ಯೆಯಲ್ಲಿ ಇರುವವರಿಗೆ ಹೆಚ್ಚು ಅವಕಾಶಗಳು, ಹೆಚ್ಚು ಸಂಖ್ಯೆಯಲ್ಲಿ ಇರುವವರಿಗೆ ಕಡಿಮೆ ಅವಕಾಶಗಳು ದೊರೆಯುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಯಾವ ಕ್ಷೇತ್ರಗಳಲ್ಲಿಯೂ ಅವಕಾಶಗಳು ದೊರೆಯುತ್ತಿಲ್ಲ. ಒಳ ಮೀಸಲಾತಿಯಿಂದ ಈ ಅನ್ಯಾಯ ಸರಿಪಡಿಸಬಹುದು. ಅಲ್ಲದೆ, ಮೀಸಲಾತಿ ಪ್ರಯೋಜನ ಪಡೆಯದೇ ಇರುವ ಉಪಜಾತಿಗಳಿಗೂ ನೆರವಾಗಲಿದೆ.

* ದಲಿತ ಚಳವಳಿಯ ಆರಂಭ ಮತ್ತು ಉಚ್ಛ್ರಾಯದ ಅವಧಿಯಲ್ಲಿ ಕೇಳದ ಒಳ ಮೀಸಲಾತಿ ಕೂಗು ಈಗ ಏಕೆ‌?

70ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ಬಂದಾಗ ಒಳ ಮೀಸಲಾತಿ ಪ್ರಶ್ನೆ ಹುಟ್ಟಿರಲಿಲ್ಲ. ಆಗ ತುಳಿತಕ್ಕೆ ಒಳಗಾದವರನ್ನು ಸಂಘಟಿಸಬೇಕು, ಹೋರಾಡಬೇಕು ಎನ್ನುವ ಮಹತ್ವದ ಆಶಯ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೆವು. ಕಾಲಾನುಕ್ರಮದಲ್ಲಿ ಇಂತಹ ದೊಡ್ಡ ಆಶಯಗಳೇ ಸಣ್ಣ ಪುಟ್ಟ ಜಾತಿಗಳಿಗೆ ಅವಕಾಶ ಇಲ್ಲದಂತೆ ಮಾಡುತ್ತವೆ ಎಂಬ ಅರಿವಾಯಿತು. ಅದೇ ಹೊತ್ತಿಗೆ ಹಾವನೂರು ವರದಿ ಬಂದಿತು. ‘ಹೊಲೆಯ ಜಾತಿಗೆ ಶೈಕ್ಷಣಿಕವಾಗಿ, ರಾಜಕೀಯವಾಗಿ, ಔದ್ಯೋಗಿಕವಾಗಿ ಹೆಚ್ಚು ಅವಕಾಶ ದೊರೆತಿದೆ. ಮಾದಿಗರಿಗೆ ಅನ್ಯಾಯವಾಗಿದೆ’ ಎನ್ನುವುದು ವರದಿಯಲ್ಲಿ ಅಂಕಿಅಂಶ ಸಮೇತ ಸ್ಪಷ್ಟವಾಗಿ ಇದೆ. ಅಲ್ಲಿಂದ ಆದಿಜಾಂಬವ ಸಂಘ, ಮಾದಿಗರ ಸಂಘದ ಮೂಲಕ ಹೋರಾಟಗಳು ಆರಂಭವಾದವು.

* ಸದಾಶಿವ ಆಯೋಗದ ವರದಿ ಅವೈಜ್ಞಾನಿಕ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ?

ಇದು ತಪ್ಪು ಕಲ್ಪನೆ. ಒಂದು ಆಯೋಗ ಅಂಕಿಅಂಶ ಸಂಗ್ರಹ, ಚರ್ಚೆ, ವಿಶ್ಲೇಷಣೆ ಮಾಡಿಯೇ ವರದಿ ಸಿದ್ಧಪಡಿಸುತ್ತದೆ. ಇದು ಅವೈಜ್ಞಾನಿಕ ಎಂದು ಹೇಳಲು ಕಾರಣಗಳೇ ಇಲ್ಲ. ಒಳ ಮೀಸಲಾತಿ ಜಾರಿಯಾದರೆ ಮಾದಿಗರಿಗೆ ಮಾತ್ರ ಹೆಚ್ಚು ಅವಕಾಶಗಳು ಸಿಕ್ಕುತ್ತವೆ ಎನ್ನುವ ಮಾತು ಸಹ ಇದೆ. ಇದೂ ತಪ್ಪು ಅಭಿಪ್ರಾಯ. ಮೀಸಲಾತಿ ಅವಕಾಶ ಒಂದೇ ಜಾತಿಯ ಕೈಯಲ್ಲಿ ಕೇಂದ್ರೀಕೃತ ಆಗಬಾರದು. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮಾದಿಗರಿಗಿಂತ ಕೆಳಮಟ್ಟದಲ್ಲಿ ಇರುವ ಅಥವಾ ಇನ್ನೂ ಗುರುತಿಸಲು ಸಾಧ್ಯವಾಗದೆ ಅಪಮಾನದಿಂದಲೇ ಬದುಕುತ್ತಿರುವ ಜಾತಿಗಳನ್ನು ಗುರುತಿಸಿ ಒಳ ಮೀಸಲಾತಿ ನೀಡಬೇಕು.

ವರದಿ ಜಾರಿಗೆ ಆಗ್ರಹಿಸುತ್ತಿರುವವರು ಮತ್ತು ವಿರೋಧಿಸುವವರು ಜಾತಿ ಗಣತಿಯ ವರದಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆಗ ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ, ಯಾವ ಪ್ರಮಾಣದಲ್ಲಿ ಮೀಸಲಾತಿ ಅವಕಾಶ ಪಡೆಯುತ್ತಿದ್ದಾರೆ ಎನ್ನುವುದು ತಿಳಿಯಲಿದೆ.

*ಈ ಪರ–ವಿರೋಧದಿಂದ ದಲಿತರಲ್ಲಿನ ಎಡಗೈ ಮತ್ತು ಬಲಗೈ ಉಪಜಾತಿಗಳ ನಡುವೆ ಕಂದರ ಮತ್ತಷ್ಟು ಹೆಚ್ಚಿದೆ ಅಲ್ಲವೇ?

ಹೆಚ್ಚು ಮಂದಿ ರಾಜಕೀಯ ನಾಯಕರು, ಸಾಹಿತಿಗಳು, ಹೋರಾಟಗಾರರು ಹೊಲೆಯ ಜಾತಿಯಿಂದಲೇ ಬಂದವರು. ‘ಒಳ ಮೀಸಲಾತಿಯಿಂದ ಹೊಲೆಯ–ಮಾದಿಗರ ನಡುವಿನ ಒಗ್ಗಟ್ಟು ನಾಶವಾಗುತ್ತದೆ. ಇದನ್ನು ರಾಜಕೀಯವಾಗಿ ಬೇರೆ ಜಾತಿಯವರು ಬಳಸಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ’. ಖಂಡಿತ ಇದು ತಪ್ಪು ತಿಳಿವಳಿಕೆ. ನಾವು ಸಹ ದಲಿತ, ರೈತ ಚಳವಳಿಯಲ್ಲಿ ಇದ್ದವರು. ಜಾತಿಯ ಹೆಸರಿನಲ್ಲಿ ಸಮಾಜ ಛಿದ್ರ ಮಾಡುವ ಕೆಲಸವನ್ನು ಎಂದೂ ಮಾಡುವುದಿಲ್ಲ. ಅಪಮಾನಕ್ಕೆ ಮತ್ತು ತುಳಿತಕ್ಕೆ ಒಳಗಾದವರನ್ನು ಒಗ್ಗೂಡಿಸುವ ಅಸ್ತ್ರ ಒಳ ಮೀಸಲಾತಿ ಎನ್ನುವುದನ್ನು ಮೊದಲು ತಿಳಿಯಬೇಕು. ಮೀಸಲಾತಿ ಲಾಭವನ್ನು ಕೆಲವರು ಮಾತ್ರ ಪಡೆಯುತ್ತಿದ್ದರೆ ಅಲ್ಲಿ ಸಹಜವಾಗಿ ಕಂದಕ ಸೃಷ್ಟಿಯಾಗುತ್ತದೆ. ಈ ಕಂದಕವನ್ನು ನಾಶಮಾಡಲು ಇರುವ ಸಂವಿಧಾನಬದ್ಧವಾದ ಅಹಿಂಸಾತ್ಮಕ ಅಸ್ತ್ರ ಒಳ ಮೀಸಲಾತಿ.

* ಮಾದಿಗ ಸಮುದಾಯಕ್ಕೆ ಈ ಹಿಂದಿನಿಂದ ಯಾವ ರೀತಿ ಅನ್ಯಾಯವಾಗುತ್ತಿದೆ?

ಹಾವನೂರು ವರದಿ ಪ್ರಕಾರ 15 ಉದ್ಯೋಗಗಳು ಇದ್ದರೆ ಅದರಲ್ಲಿ 6 ಮಾದಿಗರಿಗೆ ಕೊಡಬೇಕು ಎಂದಿದೆ. ಸೂಕ್ಷ್ಮವಾಗಿ ಹೇಳುವುದಾದರೆ ಕರ್ನಾಟಕದ 21 ವಿಶ್ವವಿದ್ಯಾಲಯಗಳಲ್ಲಿ ಕೇವಲ ಇಬ್ಬರು ಮಾದಿಗ ಸಮುದಾಯದ ರಿಜಿಸ್ಟ್ರಾರ್‌ಗಳು ಇದ್ದಾರೆ. ಉಳಿದ ಕಡೆ ಹೊಲೆಯರು ಹೆಚ್ಚಿದ್ದಾರೆ. ನಾಲ್ಕೈದು ಮಂದಿ ಮಾತ್ರ ಮಾದಿಗ ಸಮುದಾಯದ ಶಾಸಕರು ಇದ್ದಾರೆ.

*ಹೊಲೆಯರಿಗೆ ಹೆಚ್ಚು ಅಧಿಕಾರ ದಕ್ಕಿದೆ ಎನ್ನುವ ಕಾರಣಕ್ಕೆ ಮಾದಿಗರು ಒಳಮೀಸಲಾತಿಗೆ ಆಗ್ರಹಿಸುತ್ತಿದ್ದಾರೆಯೇ?

ಇದು ಸಹ ಮುಖ್ಯ ಕಾರಣ. ಉದಾಹರಣೆಗೆ ಹೇಳುವುದಾದರೆ ಜಾತ್ಯತೀತ ಪಕ್ಷ ಎಂದು ಕರೆದುಕೊಳ್ಳುವ ಕಾಂಗ್ರೆಸ್‌ನಲ್ಲಿಯೂ ಕೇಂದ್ರ ಮಟ್ಟದಿಂದ ರಾಜ್ಯದವರೆಗೆ ಹೆಚ್ಚು ಅವಕಾಶಗಳನ್ನು ಪಡೆದಿರುವುದು ಹೊಲೆಯರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪರಮೇಶ್ವರ ಹಾಗೂ ಪ್ರಮುಖ ಹೊಲೆಯ ಜಾತಿಯ ನಾಯಕರು ಈ ತಾರತಮ್ಯವನ್ನು ಸರಿಪಡಿಸಬೇಕಿತ್ತು. ಆದರೆ, ಅವರಿಂದ ಈ ಕೆಲಸ ಸಾಧ್ಯವಾಗಿಲ್ಲ. ಪರಮೇಶ್ವರ ಅವರಿಗೆ ಮೀಸಲಾತಿಯ ಸಾಮಾನ್ಯ ತಿಳಿವಳಿಕೆಯೂ ಇಲ್ಲ. ಒಂದು ಜಾತಿಯ ಜನರು ಒಂದು ಪಕ್ಷದಲ್ಲಿ ಹೆಚ್ಚಿದ್ದರೆ ಮತ್ತೊಂದು ಜಾತಿ‌ಯ ಜನರು ಅಧಿಕಾರಕ್ಕಾಗಿ ಬೇರೆ ಪಕ್ಷಗಳನ್ನು ಬೆಂಬಲಿಸುವುದು ಸಹಜ.

*ಕೊರಚ, ಕೊರಮ ಜಾತಿಗಳು ಸ್ಪೃಶ್ಯ ಜಾತಿ ಪಟ್ಟಿಯಲ್ಲಿವೆ. ಒಳ ಮೀಸಲಾತಿಯಿಂದ ಇಂತಹವರಿಗೆ ಅನ್ಯಾಯವಾಗುವುದಿಲ್ಲವೇ?

ಅಸ್ಪೃಶ್ಯರಿಗಿಂತ ಹೆಚ್ಚು ಅನ್ಯಾಯಕ್ಕೆ ಒಳಗಾದವರು ಇವರು. ಆದ್ದರಿಂದ ಒಳಮೀಸಲಾತಿ ಪರ ಹೋರಾಟಗಾರರು ಇಂತಹ ಅವಕಾಶ ವಂಚಿತರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕಾದ ನೈತಿಕ ಮತ್ತು ರಾಜಕೀಯ ಜವಾಬ್ದಾರಿ ಇದೆ. ನಮಗಿಂತ ಕೆಳಗಿರುವವರ ಕೈ ಹಿಡಿದು ಎತ್ತಿಕೊಳ್ಳಬೇಕಾದುದು ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT