ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ಸಂರಕ್ಷಣೆ ಈ ಹೊತ್ತಿನ ತುರ್ತು ಅಗತ್ಯ’

ಅದಮ್ಯಚೇತನ ಸೇವಾ ಉತ್ಸವ ಉದ್ಘಾಟಿಸಿದ ರಾಷ್ಟ್ರಪತಿ
Last Updated 30 ಡಿಸೆಂಬರ್ 2017, 20:41 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಕೃತಿ ಎಲ್ಲರ ಆರಾಧ್ಯದೈವ. ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಬೇಕು. ಇದು  ಈ ಹೊತ್ತಿನ ತುರ್ತು ಅವಶ್ಯ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದರು.

ನಗರದಲ್ಲಿ ಶನಿವಾರ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಶತಮಾನೋತ್ಸವ ಹಾಗೂ ಅದಮ್ಯಚೇತನ ಸೇವಾಉತ್ಸವ ಉದ್ಘಾಟಿಸಿ ಅವರು ಮಾತನಾಡಿ, ಕರ್ನಾಟಕವು ಜ್ಞಾನ ಮತ್ತು ಸಂಸ್ಕೃತಿಯಲ್ಲಿ ಅತ್ಯಂತ ಶ್ರೀಮಂತ ರಾಜ್ಯ.  ಪರಸ್ಪರರನ್ನು ಗೌರಿಸುವ ಇಲ್ಲಿನ ಸಂಸ್ಕಾರ ಕೂಡ
ಅನುಕರಣೀಯ. ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಮತ್ತು ಅದಮ್ಯಚೇತನ ಪ್ರತಿಷ್ಠಾನ ಗಮನಾರ್ಹ ಕೆಲಸ ಮಾಡುತ್ತಿವೆ ಎಂದರು.

‘ಅನಿಬೆಸೆಂಟ್‌ ನೂರು ವರ್ಷಗಳ ಹಿಂದೆ ಸ್ಥಾಪಿಸಿದ ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಇಂದು ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಸಂಸ್ಥೆ
ಇಂದು ನೂರಾರು ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಇದರಲ್ಲಿ ನ್ಯಾಷನಲ್‌ ಹೈಸ್ಕೂಲ್‌ ಕೂಡ ಒಂದು. ಇದನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಕೊಡುಗೆಯೂ ಅನನ್ಯ’ ಎಂದು ಹೇಳಿದರು.

‘ಇಲ್ಲಿ ಶಿಕ್ಷಣ ಪಡೆದವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ್ದಾರೆ. ಇಸ್ರೊ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಡಾ.ಎಂ.ಎನ್‌.ವೆಂಕಟಾಚಲಯ್ಯ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಚಿತ್ರನಟ ವಿಷ್ಣುವರ್ಧನ್‌ ಕೂಡ ಈ ಶಾಲೆ ವಿದ್ಯಾರ್ಥಿಗಳಾಗಿದ್ದರು ಎನ್ನುವುದನ್ನು ಕೇಳಿದ್ದೇನೆ’ ಎಂದರು.

ಅನ್ನಪೂರ್ಣ ಯೋಜನೆಯಡಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಬಡ ಮಕ್ಕಳಿಗೆ ಬಿಸಿಯೂಟ ನೀಡುವ ಅದಮ್ಯಚೇತನ ಪ್ರತಿಷ್ಠಾನದ ಕಾರ್ಯಕ್ರಮದ ಬಗ್ಗೆಯೂ ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌, ‘ಪ್ರತಿಷ್ಠಾನ ಆರಂಭಿಸಲು ನನ್ನ ತಾಯಿ ಗಿರಿಜಾ ಶಾಸ್ತ್ರಿ ಅವರೇ ಮೂಲ ಪ್ರೇರಣೆ. ಅವರು ‌21 ವರ್ಷ ಕ್ಯಾನ್ಸರ್‌ ಜತೆಗೆ ಹೋರಾಡುತ್ತಲೇ, ಬಡಮಕ್ಕಳು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಪ್ರತಿಷ್ಠಾನವು ‘ಅನ್ನಪೂರ್ಣ’ ಯೋಜನೆಯಡಿ ಈಗ 1.50 ಲಕ್ಷ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತಿದೆ. ಡಾ.ಬಾಲಗಂಗಧಾರನಾಥ ಸ್ವಾಮೀಜಿ ಪ್ರೇರಣೆ ಕೊಟ್ಟಿ
ದ್ದರು. ಶ್ರೀಗಳು ನೀಡಿದ ‘ಅನ್ನ, ಅಕ್ಷರ, ಆರೋಗ್ಯ’ ಘೋಷವಾಕ್ಯದಡಿಯೇ ಸಾಮಾಜಿಕ ಕೆಲಸ ಮುಂದುವರಿಸಿದ್ದೇವೆ’ ಎಂದರು.

(‘ಪ್ರಕೃತಿ ಸಂಸ್ಕೃತಿ’ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಸಿರು ಪರಿಸರದ ಮಾದರಿ ಬಗ್ಗೆ ಮಾಹಿತಿ ನೀಡಿದರು -ಪ್ರಜಾವಾಣಿ ಚಿತ್ರ)

ಗಮನ ಸೆಳೆದ ವಸ್ತು ಪ್ರದರ್ಶನ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರ ಸಹಯೋಗದಲ್ಲಿ ಅದಮ್ಯಚೇತನ ಸಂಸ್ಥೆಯು ಪರಿಸರ ವಿಜ್ಞಾನ ತರಬೇತಿ ಆಯೋಜಿಸಿತ್ತು. ಎರಡು ತಿಂಗಳ ಕ್ಷೇತ್ರ ಕಾರ್ಯ ಒಳಗೊಂಡ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ಮತ್ತು ಪರಿಸರ ಕುರಿತ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಶಾಲಾ ಮಕ್ಕಳು ರೂಪಿಸಿದ್ದ ಹಸಿರು ಜೀವನ ಶೈಲಿ ಪ್ರತಿಪಾದಿಸುವ ಮಾದರಿಗಳು, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ರಾಕೆಟ್‌ಗಳ ಮಾದರಿಗಳು, ವೈಮಾನಿಕ ಮತ್ತು ರಕ್ಷಣಾ ಉಪಕರಣಗಳು ಪ್ರದರ್ಶನದಲ್ಲಿ ಗಮನ ಸೆಳೆದವು. 150ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳಿದ್ದವು.

ಯಕ್ಷಗಾನ, ಶಾಸ್ತ್ರೀಯ ನೃತ್ಯ, ವಚನ ಗಾಯನ, ಹಾಸ್ಯ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರಿಗೆ ರಸದೌತಣ ನೀಡಿದವು.

(ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಕಲಾವಿದರು ಯಕ್ಷಗಾನ ಪ್ರದರ್ಶಿಸಿದರು - ಪ್ರಜಾವಾಣಿ ಚಿತ್ರ)

* ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ ಕರ್ನಾಟಕಕ್ಕೆ ಇದು ನನ್ನ ಎರಡನೇ ಭೇಟಿ. ಇಲ್ಲಿಗೆ ಬಂದಿರುವುದು ಬಹಳ ಸಂತಸ ಉಂಟು ಮಾಡಿದೆ.
–ರಾಮನಾಥ ಕೋವಿಂದ್‌, ರಾಷ್ಟ್ರಪತಿ

* ಪ್ರಕೃತಿ ಮತ್ತು ಸಂಸ್ಕೃತಿ ಉಳಿಸುವುದು ಪ್ರತಿಷ್ಠಾನದ ಉದ್ದೇಶ. ಸಂಸ್ಕೃತಿ ಉಳಿಯಬೇಕಾದರೆ ಮಾತೃ ಭಾಷೆ ಕನ್ನಡವನ್ನು ಉಳಿಸಬೇಕು. ಕನ್ನಡವೇ ಪ್ರತಿಷ್ಠಾನದ ಜೀವಾಳ.
– ಅನಂತಕುಮಾರ್‌, ಕೇಂದ್ರ ಸಂಸದೀಯ ವ್ಯವಹಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT