ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌–ಬಿಜೆಪಿ ನಡುವೆ ವ್ಯತ್ಯಾಸವಿಲ್ಲ’

Last Updated 31 ಡಿಸೆಂಬರ್ 2017, 8:31 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕಾಂಗ್ರೆಸ್‌ ಮತ್ತು ಬಿಜೆಪಿಗಳ ನಡುವೆ ವ್ಯತ್ಯಾಸವಿಲ್ಲ. ಎರಡರದ್ದೂ ಝಂಡಾ ಬೇರೆಯಾದರೂ ಅಜೆಂಡಾ ಒಂದೇ. ಒಂದು ಒಳಚಡ್ಡಿಯಾದರೆ, ಇನ್ನೊಂದು ಹೊರಚಡ್ಡಿ’ ಎಂದು ಹಿರಿಯ ವಕೀಲ ಡಾ. ಸಿ.ಎಸ್‌. ದ್ವಾರಕಾನಾಥ್‌ ಲೇವಡಿ ಮಾಡಿದರು.

ನಗರದ ಜೆ.ಎಚ್‌. ಪಟೇಲ್ ಸಭಾಂಗಣದಲ್ಲಿ ಶನಿವಾರ ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ‘ಕೋರೆಗಾಂವ್‌ ವಿಜಯೋತ್ಸವ–200 ವರ್ಷಗಳು. ಮುಂದೇನು?’ ಜಿಲ್ಲಾಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಒಂದೇ. ಬಾಬ್ರಿ ಮಸೀದಿಯನ್ನು ಜಂಟಿ ಸಹಭಾಗಿತ್ವದಲ್ಲಿ ಕೆಡವಿದವು. ನಾವು ‘ಜೆ.ಸಿ.ಬಿ’ಯನ್ನು (ಜನತಾದಳ, ಕಾಂಗ್ರೆಸ್‌ ಮತ್ತು ಬಿಜೆಪಿ) ತಿರಸ್ಕರಿಸಬೇಕು. ಇವರಾರೂ ನಮ್ಮ ಪ್ರತಿನಿಧಿಗಳಲ್ಲ. ನೀವು ನಿಮ್ಮ ಮತಗಳನ್ನು ಯಾರಿಗೂ ಮಾರಿಕೊಳ್ಳಬೇಡಿ’ ಎಂದರು.

ಸಂವಿಧಾನದ ಕುರಿತು ಹೇಳಿಕೆ ನೀಡಿ ವಿವಾದಕ್ಕೀಡಾದ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರು ಸಂಸತ್‌ನಲ್ಲಿ ಕ್ಷಮೆ ಕೇಳಿದ ಮಾತ್ರಕ್ಕೆ ಬಿಟ್ಟುಬಿಡಬೇಕೆ? ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಪವಿತ್ರವಾದ ಸಂಸತ್‌ನಲ್ಲಿ ಇರಲು ಅವರಿಗೆ ಅರ್ಹತೆ ಇಲ್ಲ ಎಂದರು.

ಹೆಗಡೆ ಇಂದು ಸಂಸದರಾಗಲು ಅಂಬೇಡ್ಕರ್‌ ಬರೆದ ಸಂವಿಧಾನ ಕಾರಣ. ಇಲ್ಲದಿದ್ದರೆ ಅವರು ಕಾರವಾರದಲ್ಲೋ, ಎಲ್ಲಿಯೋ ಪೌರೋಹಿತ್ಯ ಮಾಡಿಕೊಂಡು ಇರುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಅನುತ್ಪಾದಕ ಸಮುದಾಯಗಳಾಗಿವೆ. ಶೂದ್ರ, ಅತಿಶೂದ್ರ ಮತ್ತು ಅಸ್ಪೃಶ್ಯರು ಉತ್ಪಾದಕ ಸಮುದಾಯಗಳು. ಆದರೆ, ಆಳುವ ಸ್ಥಾನದಲ್ಲಿ ಅವರಿದ್ದಾರೆ. ನಾವು ಅವರ ಸೇವೆ ಮಾಡುತ್ತಿದ್ದೇವೆ. ನಾವು ನಿಜವಾಗಿ ಆಳುವ ಸ್ಥಾನದಲ್ಲಿದ್ದು, ಅವರು ನಮ್ಮ ಸೇವೆ ಮಾಡಬೇಕಿತ್ತು ಎಂದರು.

ಈ ಹಿಂದೆ ಮನುಸ್ಮೃತಿ, ಪರಾಶರ ಸ್ಮೃತಿಗಳಿದ್ದವು. ಕಾಲ ಬದಲಾದಂತೆ ಅವು ಮರೆಯಾಗಿ ಬೇರೆ ನಿಯಮಗಳು ಬಂದವು. ಸಂವಿಧಾನ ಕೂಡ ಬದಲಾಗಬೇಕಲ್ಲವೇ ಎಂದು ಕೆಲವರು ವಾದಿಸುತ್ತಾರೆ. ಆದರೆ, ಸಂವಿಧಾನ ಕೇವಲ ನೆನಪಿನಲ್ಲಿ ಇಟ್ಟುಕೊಳ್ಳುವಂಥದ್ದಲ್ಲ. ಅದು ಲಿಖಿತ ದಾಖಲೆ ಎಂದು ಹೇಳಿದರು.

ಸ್ಮೃತಿಗಳಲ್ಲಿ ಇದ್ದದ್ದು ಜಾತಿಗಳ ಶ್ರೇಷ್ಠತೆ, ವ್ಯಸನ ಮತ್ತು ವಿಜೃಂಭಣೆ. ಬಾಬಾ ಸಾಹೇಬರು ಸಹೋದರತೆ, ಸಹಬಾಳ್ವೆ ಕುರಿತ ಸಂವಿಧಾನ ನೀಡಿದರು ಎಂದರು.

‘ನಾನು ನೋಡುತ್ತಿರುವ ರಾಮನೇ ಬೇರೆ. ನೀವು ಹೇಳುತ್ತಿರುವ ರಾಮನೇ ಬೇರೆ. ನಾವು ವಾಲ್ಮೀಕಿ, ಲೋಹಿಯಾ, ಕಾನ್ಶಿರಾಂ ಗ್ರಹಿಸಿದ ರಾಮನನ್ನು ಅನುಸರಿಸುತ್ತೇವೆ’ ಎಂದರು.

ವಿಚಾರವಾದಿ ಕೃಷ್ಣಮೂರ್ತಿ ಚಮರಂ ಮಾತನಾಡಿ, ಕೋರೆಗಾಂವ್‌ ವಿಜಯೋತ್ಸವವನ್ನು ದೇಶಕ್ಕೆ ಪರಿಚಯಿಸಿದವರು ಬಾಬಾ ಸಾಹೇಬ್‌ ಅಂಬೇಡ್ಕರ್‌. 500 ಮಹರ್‌ ಸೈನಿಕರು ಮತ್ತು 30,000 ಪೇಶ್ವೆ ಸೈನಿಕರನ್ನು ಒಂದೇ ರಾತ್ರಿಯಲ್ಲಿ ಹಿಮ್ಮೆಟ್ಟಿಸಿದ ದಿನವನ್ನು ಕೋರೆಗಾಂವ್‌ ವಿಜಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ದೇಶವು ಇಂದಿಗೂ ಮನುವಾದಿಗಳ ಹಿಡಿತದಲ್ಲಿದೆ. ಹಿಂದುತ್ವದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಂದ್ರ ಎನ್‌. ಮೌರ್ಯ, ಬಿವಿಎಸ್‌ ಮೈಸೂರು ಘಟಕದ ಮೋಹನ್ ಜಿ.ಕೆ., ವಿಚಾರವಾದಿ ಅರಕಲವಾಡಿ ನಾಗೇಂದ್ರ, ನಗರಸಭೆ ಸದಸ್ಯ ಆರ್‌.ಪಿ. ನಂಜುಂಡಸ್ವಾಮಿ, ಬಿಎಸ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಸುಭಾಷ್‌ ಮಾಡ್ರಳ್ಳಿ, ಕೆ.ಎಂ. ನಾಗರಾಜು, ಪರ್ವತರಾಜ್‌, ಜಯಲಕ್ಷ್ಮಿ, ನೇತ್ರಾವತಿ, ಶಕುಂತಲಾ, ಮಹದೇವಸ್ವಾಮಿ, ಡಾ. ಶರತ್‌ಕುಮಾರ್‌ ಜೈಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT