ಹುಣಸಗಿ: ಸಮೀಪದ ನಾರಾಯಣಪುರ ಗ್ರಾಮದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಯತಿಕುಲತಿಲಕ ರಘೂತ್ತಮ ತೀರ್ಥರ 444ನೇ ಆರಾಧನಾ ಮಹೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ 3 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುಪ್ರಭಾತ, ಅಷ್ಟೋತ್ತರ, ರಾಘವೇಂದ್ರಸ್ವಾಮಿ ಮತ್ತು ರಘೂತ್ತಮ ತೀರ್ಥರ ವೃಂದಾವನಗಳಿಗೆ ಪಂಚಾ ಮೃತ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದವು. ನಂತರ ಮಠದ ಪ್ರಾಂಗಣದಲ್ಲಿ ಭಕ್ತರ ಮಧ್ಯೆ ರಥೋತ್ಸವ ಹಾಗೂ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ಉತ್ಸವ ಜರುಗಿತು.
ವಿವಿಧ ಪುಷ್ಪಗಳಿಂದ ಅಲಂಕೃತ ವಾದ ಯತಿಗಳ ವೃಂದಾವನಗಳಿಗೆ ಮಹಾ ಮಂಗಳಾರುತಿ, ಹಸ್ತೋದಕದ ಬಳಿಕ ಭಕ್ತರಿಗೆ ಪ್ರಸಾದ ವಿತರಿಸ ಲಾಯಿತು. ಪೂರ್ವಾರಾಧನೆಯ ಅಂಗ ವಾಗಿ ಶುಕ್ರವಾರ ರಾತ್ರಿ ಕಲಬುರ್ಗಿಯ ಸತ್ಯಾತ್ಮ ಸೇನೆ, ಹಾಗೂ ಹಟ್ಟಿ, ವಿಜಯಪುರ ಭಜನಾ ಮಂಡಳಿಯವರು ನಡೆಸಿಕೊಟ್ಟ ಭಜನಾ ಕಾರ್ಯಕ್ರಮ ಕೇಳುಗರನ್ನು ಮಂತ್ರಮುಗ್ದರನ್ನಾಗಿಸಿತು.
ನಾರಾಯಣಪುರ, ಹುಣಸಗಿ, ಲಿಂಗಸುಗೂರು, ಬಾಗಲಕೋಟೆ, ಕಲಬುರ್ಗಿ, ಸಿಂಧನೂರು, ರೋಡಲ ಬಂಡಾ, ಮುದ್ದೇಬಿಹಾಳ, ಆಲಮಟ್ಟಿ, ಕೊಡೇಕಲ್, ಬರದೇವನಾಳ ಸೇರಿದಂತೆ ವಿವಿಧೆಡೆಯ ಭಕ್ತರು ಆರಾಧನೆಯಲ್ಲಿ ಪಾಲ್ಗೊಂಡಿದ್ದರು.