ರೋಣ: ನೂತನವಾಗಿ ರಚನೆಯಾಗಿರುವ ಗಜೇಂದ್ರಗಡ ತಾಲ್ಲೂಕಿಗೆ ಇಟಗಿ ಗ್ರಾಮವನ್ನು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ರೋಣ ಘಟಕದಿಂದ ಶನಿವಾರ ಉಪ ತಹಶೀಲ್ದಾರ್ ಎಸ್.ಎನ್. ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೀಲಾ ಚಿತ್ರಗಾರ, ಹೊಸ ತಾಲ್ಲೂಕು ರಚನೆಗೆ ಈ ಮೊದಲು ಘೋಷಿಸಿದ ಗಜೇಂದ್ರಗಡ ತಾಲ್ಲೂಕನ್ನು ನೂತನ ತಾಲ್ಲೂಕಾಗಿ ರಚಿಸಿ ಅದರ ವ್ಯಾಪ್ತಿಗೆ ಒಳಪಡುವ ಗ್ರಾಮಗಳನ್ನು ಪ್ರಕಟಿಸಲಾಗಿತ್ತು’ ಎಂದರು.
‘ಆ ಪೈಕಿ ಇಟಗಿ ಗ್ರಾಮವನ್ನು ಗಜೇಂದ್ರಗಡ ತಾಲ್ಲೂಕಿಗೆ ಸೇರ್ಪಡೆ ಮಾಡಿ ಪತ್ರಿಕೆಯಲ್ಲಿ ಮಾಹಿತಿ ಪ್ರಕಟಿಸಲಾಗಿತ್ತು. ಇಲ್ಲಿಯವರೆಗೂ ಗ್ರಾಮದಿಂದ ಯಾವುದೇ ಆಕ್ಷೇಪಣೆ ಇಲ್ಲದೆ, ಸರ್ಕಾರದ ಮಾಹಿತಿಯನ್ನು ಸಮ್ಮತಿಸಿ ಇಟಗಿ ಗ್ರಾಮಸ್ಥರು ಹರ್ಷಗೊಂಡಿದ್ದರು. ಆದರೆ, ಏಕಾಏಕಿ ತಾಲ್ಲೂಕು ವಿಂಗಡನೆಯ ವರದಿಯಲ್ಲಿ ಇಟಗಿ ಗ್ರಾಮವನ್ನು ಗಜೇಂದ್ರಗಡ ಹೊಸ ತಾಲ್ಲೂಕು ರಚನೆಯ ಹಳ್ಳಿಗಳ ಪಟ್ಟಿಯಿಂದ ತೆಗೆದು ಹಾಕಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.