ಚಿತ್ತಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜ.5ರಂದು ತಾಲ್ಲೂಕು ಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಭರದಿಂದ ನಡೆದಿದೆ ಎಂದು ಪರಿಷತ್ತಿನ ಅಧ್ಯಕ್ಷ ಕಾಶೀನಾಥ ಗುತ್ತೇದಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ನಡೆಯುವ ಸಮ್ಮೇಳನಕ್ಕೆ ಶಹಾಬಾದನ ಸಾಹಿತಿ ಡಾ.ನೀಲಮ್ಮ ಕತ್ನಳ್ಳಿ ಅವರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸಕ ಹಾಗೂ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸಮ್ಮೇಳನ ಉದ್ಘಾಟಿಸುವರು ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಮ್ಮೇಳನದ ಮೆರವಣಿಗೆಯನ್ನು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಭೀಮರಾಯ ಹೋತಿನಮಡಿ ಉದ್ಘಾಟಿಸುವರು. 62 ಅಡಿ ಉದ್ದಳತೆ ಯ ಕನ್ನಡ ಧ್ವಜ ಪ್ರದರ್ಶಿಸಲಾಗುವುದು. ವಿವಿಧ ಕಲಾ ತಂಡಗಳು ಕಲೆಗಳನ್ನು ಪ್ರದರ್ಶಿಸಲಿವೆ. ರಾವೂರಿನ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಮಕ್ಕಳಿಂದ ಮಲ್ಲಕಂಭ ಪ್ರದರ್ಶನ ನಡೆಯಲಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸ್ಮರಣ ಸಂಚಿಕೆ ಮತ್ತು ಗಡಿನಾಡು ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಕವನ ಸಂಕಲನ ಬಿಡುಗಡೆ ಮಾಡುವರು. ಲೇಖಕ ಡಾ.ಮಲ್ಲಿನಾಥ ತಳವಾರ ರಚಿತ 'ಕಾರಂತ ಲೋಕ' ಪುಸ್ತಕವನ್ನು ಶಾಸಕ ಡಾ.ಉಮೇಶ ಜಾಧವ ಬಿಡುಗಡೆಗೊಳಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ ಪೋತೆ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು. ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾಸಿಲಾಗುವುದು’ ಎಂದರು.