ಕೇಂದ್ರ ಸಂಸದೀಯ, ರಸಗೊಬ್ಬರ ಸಚಿವ ಎಚ್.ಎನ್. ಅನಂತಕುಮಾರ್ ಮಾತನಾಡಿ ‘ಈ ಭಾಗಕ್ಕೆ ಭೇಟಿ ಕೊಟ್ಟ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಕೋವಿಂದ್ ಪಾತ್ರರಾಗಿದ್ದಾರೆ. ಅವರನ್ನು ಭೇಟಿ ಮಾಡಿದ ಸಂದರ್ಭ ಹಳ್ಳಿಯೊಂದರಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದೆವು. ಅದಕ್ಕೆ ಅವರು ನಾನೂ ಮಣ್ಣಿನ ಮಗ, ಬಂದೇ ಬರುತ್ತೇನೆ ಎಂದು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡರು. ಬಡ ಕುಟುಂಬದಿಂದ ಬಂದ ಅವರು ಹಳ್ಳಿಯಿಂದ ದಿಲ್ಲಿಗೆ ತಲುಪಿದ ಅಸಮಾನ್ಯ ಪುರುಷ. ದಲಿತರು, ಶೋಷಿತರು, ವಂಚಿತರ ಪಾಲಿನ ಜ್ಯೋತಿಯಾಗಿ ಅವರು ಹೊರಹೊಮ್ಮಿದ್ದಾರೆ. ವಕೀಲರಾಗಿ, ರಾಜ್ಯಸಭಾ ಸದಸ್ಯರಾಗಿ ಅಪಾರ ಅನುಭವ ಹೊಂದಿದ್ದಾರೆ’ ಎಂದು ಬಣ್ಣಿಸಿದರು.