ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕ್ರೀಡಾಂಗಣಕ್ಕೆ ₹ 6 ಕೋಟಿ ಮಂಜೂರು

ನಮ್ಮ ಓಟ ನಮ್ಮೆಲ್ಲರ ವಿಕಸನಕ್ಕಾಗಿ 4 ಕಿ.ಮೀ ಮ್ಯಾರಥಾನ್
Last Updated 1 ಜನವರಿ 2018, 4:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ವ್ಯಕ್ತಿ ವಿಕಸನ ಚಾರಿಟೆಬಲ್ ಮತ್ತು ಎಜುಕೇಷನ್ ಟ್ರಸ್ಟ್ ವತಿಯಿಂದ ನಗರದಲ್ಲಿ ನಮ್ಮ ಓಟ ನಮ್ಮೆಲ್ಲರ ವಿಕಸನಕ್ಕಾಗಿ 4 ಕಿ.ಮೀ ಮ್ಯಾರಥಾನ್ ಭಾನುವಾರ ಬೆಳಿಗ್ಗೆ ನಡೆಯಿತು.

ನಗರದ ಹಳೆ ಬಸ್ ನಿಲ್ದಾಣದಿಂದ ಆರಂಭವಾದ ಮ್ಯಾರಥಾನ್ ಡಿ.ಕ್ರಾಸ್, ನಗರ ಪೊಲೀಸ್ ಠಾಣೆ, ಕೋರ್ಟ್ ರಸ್ತೆ, ರುಮಾಲೆ ವೃತ್ತದ ಮೂಲಕ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಅಂತ್ಯವಾಯಿತು.

ಮ್ಯಾರಥಾನ್‌ನಲ್ಲಿ ಪುರುಷರು, ಮಹಿಳೆಯರು ಹಾಗೂ 15 ವರ್ಷದ ಒಳಗಿನವರ ಮೂರು ವಿಭಾಗಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವಿಜೇತರಿಗೆ ಟ್ರೋಫಿ ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಪ್ರಥಮ ಬಹುಮಾನವಾಗಿ ಶಾಸಕರಿಂದ ₹ 5,000 ವಿಶೇಷ ನಗದು ಬಹುಮಾನ ನೀಡಲಾಯಿತು.

ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ತಾಲ್ಲೂಕಿನಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ₹6 ಕೋಟಿ ಮಂಜೂರಾಗಿದ್ದು, ಜನವರಿ 23 ರಂದು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಇಂದು ಒತ್ತಡದಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಈ ನಿಟ್ಟಿನಲ್ಲಿ ನಡಿಗೆ, ವ್ಯಾಯಾಮ ಮೊದಲಾಗಿ ದೈಹಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವಲ್ಲಿ ಇಂತಹ ಕಾರ್ಯಯಕ್ರಮಗಳು ಇಂಬು ನೀಡುತ್ತವೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಬಹಳಷ್ಟು ಯುವಕರು ಚಟಗಳಿಗೆ ದಾಸರಾಗಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ದೇಶಕ್ಕೆ ಸದೃಢ ಯುವಶಕ್ತಿಯ ಅಗತ್ಯವಿದೆ ಎಂದರು.

ಯುವಕರು ಕ್ರಿಯಾಶೀಲರಾಗಬೇಕಿದೆ. ದೊಡ್ಡಬಳ್ಳಾಪುರದಲ್ಲಿ ಎಲ್ಲ ವಯೋಮಾನದವರಿಗೂ ಮ್ಯಾರಥಾನ್ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಹಿರಿಯ ಮುಖಂಡ ತಿ.ರಂಗರಾಜು, ನಗರಸಭೆ ಸದಸ್ಯ ಕೆ.ಬಿ.ಮುದ್ದಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಹಸನ್‌ಘಟ್ಟ ರವಿ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಿ.ಜಿ.ಅಮರನಾಥ್, ಕೊಂಗಾಡಿಯಪ್ಪ ಕಾಲೇಜಿನ ಕ್ರೀಡಾ ವಿಭಾಗದ ಮುಖ್ಯಸ್ಥ ಸಂಜೀವ್‌ಕುಮಾರ್, ಎಪಿಎಂಸಿ ನಿರ್ದೇಶಕ ಬಿ.ವಿ.ಲೋಕೇಶ್ ಭಾಗವಹಿಸಿದ್ದರು.

ಓಟದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವ್ಯಕ್ತಿತ್ವ ವಿಕಸನ ಸಂಸ್ಥೆಯ ಟ್ರಸ್ಟಿ ಸುನೀಲ್‌ ವೆಂಕಟಸ್ವಾಮಿ, ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಭಾನುವಾರ ನಡೆದ ಮ್ಯಾರಥಾನ್‌ನಲ್ಲಿ ಹಿರಿಯರ ಬಾಲಕರ ವಿಭಾಗದಲ್ಲಿ ಕಿರಣ್ ಪ್ರಥಮ ಬಹುಮಾನ, ಮಹಿಳಾ ವಿಭಾಗದಲ್ಲಿ ಚೈತ್ರ ಪ್ರಥಮ ಬಹುಮಾನ ಪಡೆದಿದ್ದಾರೆ ಎಂದರು.

ಕಿರಿಯರ ವಿಭಾಗದಲ್ಲಿ ನಾವು ವಿಧಿಸಿದ್ದ ನಿಯಮಗಳು ಪಾಲನೆಯಾಗದ ಕಾರಣದಿಂದಾಗಿ ಯಾವುದೇ ಬಹುಮಾನಗಳನ್ನು ನೀಡಿಲ್ಲ ಎಂದು ತಿಳಿಸಿದ್ದರು. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದವರಿಗೆ ನಗದು ಬಹುಮಾನಗಳನ್ನು ನೀಡುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಲಾಗಿತ್ತು. ಆದರೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರು ವೈಯಕ್ತಿಕವಾಗಿ ವಿಜೇತರಿಗೆ ₹5,000 ನಗದು ಬಹುಮಾನ ನೀಡಿದ್ದಾರೆ ಎಂದು ತಿಳಿಸಿದರು.

ಶ್ರೀಜನಸೇವಾ ಕಲ್ಯಾಣ ಟ್ರಸ್ಟ್ ವೆಂಕಟಸ್ವಾಮಿ, ವ್ಯಕ್ತಿತ್ವ ವಿಕಾಸ ಟ್ರಸ್ಟ್‌ನ ಬಿ.ವಿ.ಲೋಕೇಶ್,ಮಂಜುನಾಥ್ ಹಾಜರಿದ್ದರು.

**

ಒತ್ತಡ ರಹಿತ ಕಲಿಕೆಗಾಗಿ ನಮ್ಮ ಓಟ ನಮ್ಮೆಲ್ಲರ ವಿಕಸನಕ್ಕಾಗಿ ಮ್ಯಾರಥಾನ್ ಭಾನುವಾರ ಯಶಸ್ವಿಯಾಗಿ ನಡೆದಿದೆ .

-ಸುನೀಲ್‌ವೆಂಕಟಸ್ವಾಮಿ ವ್ಯಕ್ತಿತ್ವ ವಿಕಸನ ಸಂಸ್ಥೆ ಟ್ರಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT