ಕಲಬುರ್ಗಿ: ‘ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ತಿದ್ದುಪಡಿ ಮಾಡಲಾಗಿದ್ದು, ಇದರಿಂದ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಆಗಲಿದೆ’ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ–2ರಲ್ಲಿ ಶೇ 50 ಮತ್ತು ಪಶ್ನೆಪತ್ರಿಕೆ–3ರಲ್ಲಿ ಶೇ 60ರಷ್ಟು ಅಂಕ ಕಡ್ಡಾಯವಾಗಿ ಅಭ್ಯರ್ಥಿ ಪಡೆಯಬೇಕು ಎಂದು ಹೊಸ ನಿಯಮ ರೂಪಿಸಲಾಗಿದೆ. ಈ ಭಾಗದಲ್ಲಿ ಟಿಇಟಿ ಪಾಸಾದವರ ಸಂಖ್ಯೆ ಕಡಿಮೆ ಇದೆ. ಹೊಸ ಅರ್ಹತೆ ಅನ್ವಯ ಶೇ 10ರಿಂದ ಶೇ20ರಷ್ಟು ವಿದ್ಯಾರ್ಥಿಗಳು ಮಾತ್ರ ಅರ್ಹತೆ ಗಿಟ್ಟಿಸುವ ಸಾಧ್ಯತೆ ಇದೆ. ಇದರಿಂದ ಹುದ್ದೆಗಳು ಖಾಲಿ ಉಳಿಯಲಿವೆ’ ಎಂದು ಅವರು ತಿಳಿಸಿದ್ದಾರೆ.
‘3,966 ಹುದ್ದೆಗಳು ಹೈದರಾಬಾದ್ ಕರ್ನಾಟಕ ಭಾಗದವರಿಗೆ ಮೀಸಲಾಗಿವೆ. ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗಳು ಹೆಚ್ಚಾಗಿವೆ ಎಂಬ ಮಾಹಿತಿ ಅಧಿಸೂಚನೆಯಲ್ಲಿದೆ. ಈ ವಿಷಯಗಳಲ್ಲಿ ಟಿಇಟಿ ಪಾಸಾದವರ ಸಂಖ್ಯೆ ಕಡಿಮೆಯಿದ್ದು, ಹೊಸ ನಿಯಮ ನೇಮಕಾತಿಗೆ ತೊಡಕಾಗಲಿದೆ’ ಎಂದು ತಿಳಿಸಿದ್ದಾರೆ.