ಬೇಲೂರು: ‘ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲವೂ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವುದು ವಿಷಾದದ ಸಂಗತಿ, ಜಾತಿಗಳ ಆಧಾರದ ಮೇಲೆ ತಾರ ತಮ್ಯ ಆಗುತ್ತಿದೆ’ ಎಂದು ಹೊಸ ದುರ್ಗ ಭಗೀರಥ ಪೀಠದ ಪುರುಷೋತ್ತ ಮಾನಂದ ಸ್ವಾಮೀಜಿ ಹೇಳಿದರು.
ಬೇಲೂರು ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟ ಭಾನುವಾರ ಇಲ್ಲಿನ ಚನ್ನಕೇಶವ ದೇಗುಲದ ಮುಂಭಾಗ ಏರ್ಪಡಿಸಿದ್ದ ಹಿಂದುಳಿದ ಜಾತಿಗಳ ಜನಜಾಗೃತಿ ಸಮಾವೇಶ, ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಜಾತಿ ಅನಿವಾರ್ಯವಾಗಿದೆ. ಜಾತಿ ವ್ಯವಸ್ಥೆಯಲ್ಲಿ ಜೀವನ ನಡೆಸುತ್ತಿದ್ದೇವೆ. ಆದರೆ ಸಮಾಜದಲ್ಲಿ ಜಾತಿಗಳ ಹೆಸರೇಳಿದರೆ ಕೀಳಾಗಿ, ನಿಕೃಷ್ಟವಾಗಿ ಕಾಣಲಾಗುತ್ತಿದೆ. ಪ್ರತಿ ಜಾತಿಗೂ ಇತಿಹಾಸ, ಪರಂಪರೆ ಇದೆ. ಹಿಂದುಳಿದ ಜಾತಿಗಳ ಜನರು ಕೀಳರಿಮೆಯನ್ನು ತೊಡೆದು ಹಾಕಬೇಕು’ ಎಂದು ಸಲಹೆ ಮಾಡಿದರು.
ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರಯಮ ‘ಸರ್ಕಾರಗಳು ವಿವಿಧ ಯೋಜನೆ ಜಾರಿಗೊಳಿಸುತ್ತವೆ ಎಂಬ ಕಾರಣಕ್ಕೇ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಎಂದು ಎಷ್ಟು ದಿನ ಕರೆಸಿಕೊಳ್ಳಲು ಸಾಧ್ಯ?’ ಎಂದರು.
ಸರ್ಕಾರದ ಯೋಜನೆಗಳು ಜಾತಿ ಆಧಾರದಲ್ಲೇ ರೂಪುಗೊಳ್ಳುತ್ತಿರುವುದು ಸರಿಯಲ್ಲ. ಹಿಂದುಳಿದವರಲ್ಲಿ ಏಕತೆ ಮೂಡಿದರೆ, ಬೇಲೂರು ತಾಲ್ಲೂಕಿನ ಚಿತ್ರಣವೇ ಬದಲಾಗುತ್ತದೆ. ರಾಜಕೀಯ ವ್ಯಕ್ತಿಗಳು ಮತ್ತು ಜನಪ್ರತಿನಿಧಿಗಳು ನೀಡುವ ಆಶ್ವಾಸನೆಗಳಿಗೆ ಜನ ಬಲಿ ಯಾಗ ಬಾರದು ಎಂದು ಹೇಳಿದರು.
ಜನಪ್ರತಿನಿಧಿಗಳು ಬೇಲೂರು ತಾಲ್ಲೂಕಿನ ನೀರಾವರಿ ವಿಚಾರದಲ್ಲಿ ಸುಳ್ಳು ಆಶ್ವಾಸನೆ ನೀಡಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಅವಕ್ಕೆ ಕಿವಿಗೊಡಬಾರದು’ ಎಂದು ನುಡಿದರು.
ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನಮೂರ್ತಿ ಸ್ವಾಮೀಜಿ, ಕಾಗಿನೆಲೆ ಶಾಖಾಮಠದ ಶಿವಾನಂದಪುರ ಸ್ವಾಮೀಜಿ, ಮಡಿವಾಳ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿ, ಸವಿತ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಎಚ್.ಡಿ.ರೇವಣ್ಣ, ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಇ.ಎಚ್.ಲಕ್ಷ್ಮಣ್, ಚಿಕ್ಕಮಗಳೂರು ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಎಚ್ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ. ನಾಗರಾಜ್, ತಾ.ಪಂ. ಅಧ್ಯಕ್ಷ ಪಿ.ಎಸ್.ಹರೀಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಬಿಜೆಪಿ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್, ತಾ.ಪಂ. ಸದಸ್ಯ ನವಿಲಹಳ್ಳಿ ಕಿಟ್ಟಿ, ಬಾಣಸವಳ್ಳಿ ಅಶ್ವತ್ಥ್, ಹಿಂದುಳಿದ ಸಮಾಜದ ಮುಖಂಡರಾದ ಎಸ್.ನಾಗೇಶ್, ಬಿ.ಎಲ್.ಧರ್ಮೇಗೌಡ, ಬಿ.ಸಿ.ಮಂಜುನಾಥ್, ಎಂ.ವಿ.ಹೇಮಾವತಿ, ನಾಗೇಶ್ ಯಾದವ್, ಮಂಜುನಾಥಶೆಟ್ಟಿ, ಬಿ.ಆರ್.ರುದ್ರಶೆಟ್ಟಿ ಇದ್ದರು.
ಸಮಾವೇಶದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಹಿಳೆ ಯರಿಗೆ ಸೀರೆ ನೀಡಿ ಉಡಿ ತುಂಬಲಾಯಿತು.
22 ಜಾತಿಗಳನ್ನು ಒಳಗೊಂಡ ಒಕ್ಕೂಟ ರಚನೆ
ಬೇಲೂರು: ‘ಸುಮಾರು 22 ಹಿಂದುಳಿದ ಜಾತಿಗಳನ್ನು ಸೇರಿಸಿ ಒಕ್ಕೂಟ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಹಿಂದುಳಿದ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆದಿಲ್ಲ’ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಇ.ಎಚ್.ಲಕ್ಷ್ಮಣ್ ಆರೋಪಿಸಿದರು.
‘ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗದ ಜನರಿಗೆ ಜೀವ ಕೊಡುವ ಕೆಲಸ ಮಾಡಿದರು. ಈ ಅವಧಿಯಲ್ಲಿ 72 ಶಾಸಕರು ಆರಿಸಿ ಬಂದಿದ್ದರು. ಮುಂದಿನ ಚುನಾವಣೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ 80 ಜನರಿಗೆ ರಾಜಕೀಯ ಪಕ್ಷಗಳು ಟಿಕೇಟ್ ನೀಡಬೇಕು’ ಎಂದು ಆಗ್ರಹಪಡಿಸಿದರು.
‘ಈ ವರ್ಗದ ಜನರ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಮೀಸಲಿಟ್ಟರೂ ಖರ್ಚು ಮಾಡುತ್ತಿರುವುದು ನೂರಾರು ಕೋಟಿ ಮಾತ್ರ. ರಾಜಕೀಯ ಪಕ್ಷಗಳು ಹಿಂದುಳಿದ ವರ್ಗದ ಜನರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿವೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.