ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹580 ಕೋಟಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ

ಸಿಎಂ ಭೇಟಿಗೆ ಅಫಜಲಪುರ ಸಜ್ಜು: ‌ಶಾಸಕ ಮಾಲೀಕಯ್ಯ ಗುತ್ತೇದಾರ ಸ್ಥಳ ಪರಿಶೀಲನೆ
Last Updated 1 ಜನವರಿ 2018, 8:21 IST
ಅಕ್ಷರ ಗಾತ್ರ

ಅಫಜಲಪುರ: ‘ಮುಖ್ಯಮಂತ್ರಿ ಅವರು ಶನಿವಾರ ಅಫಜಲಪುರ ಪಟ್ಟಣಕ್ಕೆ ಆಗಮಿಸಲಿದ್ದು, ಸುಮಾರು ₹580 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.

ತಾಲ್ಲೂಕಿನ ಬಳೂರ್ಗಿ ರಸ್ತೆ ಬದಿಯಲ್ಲಿ ಹೆಲಿಕಾಪ್ಟರ್‌ ಇಳಿಸಲು ನಿರ್ಮಿಸಿರುವ ಸ್ಥಳವನ್ನು ಶುಕ್ರವಾರ ಪರಿಶೀಲನೆ ಮಾಡಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಒಟ್ಟು 25 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೆಯೇ, ಉಡಚಾಣ ಗ್ರಾಮದ ಹತ್ತಿರ ಭೀಮಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕಾಗಿ ₹70 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು, ಹಸರಗುಂಡಗಿ, ಕವಲಗಾ, ಘತ್ತರಗಾ ಗ್ರಾಮಗಳಲ್ಲಿ 110 ಮತ್ತು 33ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಜೋಡಣೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ’ ಎಂದರು.

‘ಕಲಬುರ್ಗಿ ತಾಲ್ಲೂಕಿನ ಖಣದಾಳ, ಕಿರಣಗಿ, ಇಟಗಾ ಗ್ರಾಮದ ಹತ್ತಿರ ಭೀಮಾನದಿಗೆ ₹ 4 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಹಾಗೂ ಅಫಜಲಪುರ ತಾಲ್ಲೂಕಿನ ತೆಲ್ಲೂರ ಗ್ರಾಮದಲ್ಲಿ ₹4.50 ಕೋಟಿ ಹಾಗೂ ಚವಡಾಪುರ, ಚಿನ್ಮಳ್ಳಿ, ಬಂದರವಾಡ ಹತ್ತಿರ ₹2 ಕೋಟಿ ವೆಚ್ಚದ ಸೇತುವೆಗಳು ಉದ್ಘಾಟನೆ ಮಾಡುವರು’ ಎಂದು ತಿಳಿಸಿದರು.

‘ಸೊನ್ನ ಭೀಮಾ ಬ್ಯಾರೇಜ್‌ನಿಂದ ತಾಲ್ಲೂಕಿನ 10 ಕೆರೆಗಳಿಗೆ ನೀರು ತುಂಬುವ ಕಾರ್ಯಕ್ರಮಕ್ಕೆ ಸರ್ಕಾರದಿಂದ ₹568 ಕೋಟಿ ಮಂಜೂರಾಗಿದ್ದು, ಆಡಳಿತಾತ್ಮಕ ಅನುಮತಿ ಪಡೆದು ಅಡಿಗಲ್ಲು ನೆರವೇರಿಸಲಾಗುವುದು. ಬಂದರವಾಡ ಹತ್ತಿರ ಬ್ಯಾರೇಜ್‌ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅದನ್ನು ಸಹ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲಾಗುವುದು’ ಎಂದರು.

ಬಸವ ವಸತಿ ಯೋಜನೆ: ‘ಕಳೆದ 5 ವರ್ಷದಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ 5 ಸಾವಿರ ಮತ್ತು ಅಂಬೇಡ್ಕರ ವಸತಿ ಯೋಜನೆ ಅಡಿ 1,500ಮನೆ ಮಂಜೂರು ಮಾಡಲಾಗಿದೆ’ ಎಂದು ಅವರು ಹೇಳಿದರು.

‘ಈಗಾಗಲೇ ತಾಲ್ಲೂಕಿಗೆ ನೀರಾವರಿಗಾಗಿ ₹310, ರಸ್ತೆ ನಿರ್ಮಾಣಕ್ಕಾಗಿ ₹300 ಕೋಟಿ ಖರ್ಚು ಮಾಡಲಾಗಿದೆ. ಅಲ್ಲದೆ, ಪಟ್ಟಣದ ಒಳಚರಂಡಿ ನಿರ್ಮಾಣಕ್ಕಾಗಿ ಕರ್ನಾಟಕ ನಗರ ಒಳಚರಂಡಿ ಮಂಡಳಿಯಿಂದ ₹53 ಕೋಟಿ ಮಂಜೂರು ಮಾಡಿಸಲಾಗಿದೆ. ಪಟ್ಟಣಕ್ಕೆ ಶಾಶ್ವತ ಶುದ್ಧ ಕುಡಿಯುವ ನೀರಿಗಾಗಿ ಸೊನ್ನ ಭೀಮಾ ಜಲಾಶಯದಿಂದ ₹20 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ’ ಎಂದು ವಿವರಿಸಿದರು.

ರಾಷ್ಟ್ರೀಯ ಹೆದ್ದಾರಿ: ಸೋಲಾಪುರ ದಿಂದ ಕಲಬುರ್ಗಿವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಕಲಬುರ್ಗಿಯಿಂದ ಹೊಸೂರವರೆಗೆ 100 ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. ಕುಲಾಲಿಯಿಂದ ಮಲ್ಲಾಬಾದವರೆಗೆ ಹಾಗೂ ಘತ್ತರಗಿಯಿಂದ ಅಫಜಲಪುರವರೆಗೆ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. ಗ್ರಾಮೀಣ ರಸ್ತೆಗಳು ಸಹ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಮಾಜಿ ಅಧ್ಯಕ್ಷ ಬಸವಣ್ಣಪ್ಪ ಪಾಟೀಲ ಅಂಕಲಗಿ, ಜೆಸ್ಕಾಂ ನಿರ್ದೇಶಕ ಪಪ್ಪು ಪಟೇಲ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ, ಟಿಎಪಿಸಿಎಂ ಅಧ್ಯಕ್ಷ ನಬಿಲಾಲ ಪಟೇಲ ಮಾಶಾಳಕರ, ತಾಲ್ಲೂಕು ಅಲ್ಪ ಸಂಖ್ಯಾತರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ತನವೀರ ಮಣೂರ, ಸಹಾಯಕ ಎಂಜಿನಿಯರ್‌ ಬಸವರಾಜ ಗುತ್ತೇದಾರ ಬಳೂರ್ಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT