ಇಸ್ಲಾಮಾಬಾದ್: 2008ರ ಮುಂಬೈ ದಾಳಿಯ ರೂವಾರಿ ಹಫೀಸ್ ಸಯೀದ್ಗೆ ಸೇರಿದ ಸಂಘ–ಸಂಸ್ಥೆಗಳು, ಆಸ್ತಿ ಮತ್ತು ಹಣಕಾಸಿನ ಮೂಲಗಳನ್ನು ತನ್ನ ವಶಕ್ಕೆ ಪಡೆಯಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.
ಹಫೀಸ್ ಸಯೀದ್ನನ್ನು ಅಮೆರಿಕ ಭಯೋತ್ಪಾದಕ ಎಂದು ಘೋಷಿಸಿದ ಬಳಿ ಪಾಕಿಸ್ತಾನ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಉನ್ನತಮಟ್ಟದ ಸಭೆಗಳು ನಡೆದಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಹಫೀಸ್ ಸಯೀದ್ಗೆ ಸೇರಿದ ಜಮಾತ್ ಉದ್ ದವಾ (ಜೆಯುಡಿ) ಮತ್ತು ಫಲಾಹ್–ಎ–ಇನ್ಸಾನಿಯತ್ ಸಂಘಟನೆಗಳು ಲಷ್ಕರ್–ಎ–ತಯಬಾ (ಎಲ್ಇಟಿ) ಉಗ್ರ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿರುವಂಥವು ಎಂದು ಅಮೆರಿಕ ಹೇಳಿತ್ತು.
2008 ಮುಂಬೈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. ಈ ಕೃತ್ಯದ ಸಂಚು ರೂಪಿಸಿದ್ದ ಆರೋಪ ಹಫೀಸ್ ಸಯೀದ್ ಮೇಲಿದೆ. ಆದರೆ, ಹಫೀಸ್ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದಾನೆ.