ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ‘ಯಾದಗಿರಿ’ ಕ್ಷೇತ್ರ ಬೂದಿಮುಚ್ಚಿದ ಕೆಂಡ

ಪರಿವರ್ತನಾ ಯಾತ್ರೆಯಲ್ಲಿ ಅಭ್ಯರ್ಥಿಗಳ ಘೋಷಣೆ; ಯಡಿಯೂರಪ್ಪ ನಡೆಯಿಂದ ಹೆಚ್ಚಿದ ನಿರೀಕ್ಷೆ
Last Updated 1 ಜನವರಿ 2018, 13:05 IST
ಅಕ್ಷರ ಗಾತ್ರ

ಯಾದಗಿರಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯಲ್ಲೇ ಚುನಾವಣಾ ಕಣದ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸುತ್ತಾ ನಡೆದಿದ್ದಾರೆ. ಆದರೆ, ಜಿಲ್ಲೆಯಲ್ಲಿ ಒಂದು ಸುತ್ತಿನ ಪರಿವರ್ತನಾ ಯಾತ್ರೆ ನಡೆಸಿರುವ ಅವರು ಯಾದಗಿರಿ ಕ್ಷೇತ್ರದಲ್ಲಿನ ಅಭ್ಯರ್ಥಿ ಯಾರು? ಎಂಬುದರ ಬಗ್ಗೆ ಸ್ಪಷ್ಟ ನಿಲುವು ನೀಡಿಲ್ಲ. ಇದು ಜನರ, ಕಾರ್ಯಕರ್ತರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿದ್ದ ಡಾ. ವೀರಬಸಂತರಡ್ಡಿ, ಬಿಜೆಪಿ ಅಭ್ಯರ್ಥಿ ಚಂದ್ರಶೇಖರಗೌಡ ಮಾಗನೂರ, ಕಾಂಗ್ರೆಸ್‌ನ ಡಾ.ಎ.ಬಿ.ಮಾಲಕರಡ್ಡಿ ವಿರುದ್ಧ ಸೋತಿದ್ದರು. ಬಿಜೆಪಿಯ ಈ ಹಳೇ ಮುಖಗಳ ಜತೆಗೆ ಈಗ ಡಾ. ಶರಣಭೂಪಾಲರಡ್ಡಿ ನಾಯ್ಕಲ್‌, ಡಾ. ಭೀಮಣ್ಣ ಮೇಟಿ ಎಂಬ ಹೊಸ ಮುಖಗಳು ಯಾದಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿತರ ಪಟ್ಟಿಯಲ್ಲಿವೆ. ‘ವ್ಯಕ್ತಿತ್ವ, ಆರ್ಥಿಕ ಸ್ಥಿತಿ, ಜಾತಿಬಲ, ಸಾಮಾಜಿಕ ಕಾರ್ಯ, ಕ್ಷೇತ್ರದಲ್ಲಿನ ವರ್ಚಸ್ಸು ಕುರಿತು ಯಡಿಯೂರಪ್ಪ ಅವರಿಗೆ ನಾಲ್ವರೂ ವರದಿ ಒಪ್ಪಿಸಿದ್ದಾರೆ’ ಎಂಬುದಾಗಿ ಪಕ್ಷದ ಮೂಲಗಳು ಹೇಳುತ್ತವೆ. ‘ಕೆಲವರು ಟಿಕೆಟ್‌ಗಾಗಿ ತೆರೆಮರೆ ಕಸರತ್ತು ನಡೆಸಿದ್ದಾರೆ’ ಎಂದು ಬಿಜೆಪಿ ಎರಡನೇ ಸಾಲಿನ ನಾಯಕರು ಹೇಳುತ್ತಿದ್ದಾರೆ.

‘ಅಚ್ಚರಿ ಬೆಳವಣಿಗೆ ಘಟಿಸಿದರೆ ಕಾಂಗ್ರೆಸ್‌ನ ಡಾ. ಎ.ಬಿ.ಮಾಲಕರಡ್ಡಿ ಬಿಜೆಪಿ ಅಭ್ಯರ್ಥಿಯೂ ಆಗಬಹುದು ಎಂಬ ಸುದ್ದಿಯೂ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಮಾಲಕರಡ್ಡಿ ಅವರನ್ನು ಚುನಾವಣಾ ಕಣದಲ್ಲಿ ಮಣಿಸುವುದು ಕಷ್ಟ ಎಂಬುದನ್ನು ಅರಿತಿರುವ ಯಡಿಯೂರಪ್ಪ, ಮಾಲಕರಡ್ಡಿ ಅವರನ್ನು ಬಿಜೆಪಿಗೆ ಸೆಳೆದು ಬಹುಮತ ಬಂದರೆ ಉನ್ನತ ಸ್ಥಾನ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ’ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

‘ಮಾಲಕರಡ್ಡಿ ಬಿಜೆಪಿಗೆ ಬಾರದಿರುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿತರು ದೇವರಲ್ಲಿ ಮೊರೆ ಹೋಗಿದ್ದಾರೆ. ಆದರೆ, ಕಾಂಗ್ರೆಸ್‌ ಶಾಸಕ ಮಾಲಕರಡ್ಡಿ ಮಾತ್ರ ಸಿಎಂ ಸಿದ್ದರಾಮಯ್ಯ ಮನವೊಲಿಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಇದ್ದು ಸಚಿವ ಸ್ಥಾನ ಸಿಗುವ ಬಗ್ಗೆ ಭರವಸೆ ಇಲ್ಲದ್ದರಿಂದ ಕೊನೆ ಕ್ಷಣದಲ್ಲಿ ಅವರು ಎತ್ತ ವಾಲುತ್ತಾರೋ ಗೊತ್ತಿಲ್ಲ’ ಎಂಬುದಾಗಿ ಶಾಸಕರ ಆಪ್ತ ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT