ತುಮಕೂರು ಮೂಲದ ‘ಧಾನ್ಯ’ ಸಂಸ್ಥೆಯು ಜಲಸಂಪತ್ತಿನ ಪುನಶ್ಚೇತನಕ್ಕೆ ಒತ್ತು ನೀಡುವ ‘ಜಲಸಿರಿ’ ಕ್ಯಾಲೆಂಡರ್ ಹೊರ ತಂದಿದೆ. ’ಜನ ಸಹಭಾಗಿತ್ವದ ಜಲ ಸಂರಕ್ಷಣೆ’ ಎಂಬ ಥೀಮ್ ಹೊಂದಿರುವ ಜಲಸಿರಿ ದಿನದರ್ಶಿಕೆಯಲ್ಲಿ ಜಲಸಂರಕ್ಷಣೆಯ ಯಶಸ್ವಿ ಕಾರ್ಯಗಳ ಫೋಟೊಗಳನ್ನು ಬಳಸಿ ರೂಪಿಸಲಾಗಿದೆ. ನೀರಿನ ಮೂಲಗಳ ಪುನಶ್ಚೇತನ ಕುರಿತ ಟಿಪ್ಪಣಿಗಳು ಪ್ರತಿ ತಿಂಗಳ ಪುಟದಲ್ಲಿಯೂ ಇದೆ.
ಕೊಪ್ಪಳ, ತಲ್ಲೂರು, ಮಹಾರಾಷ್ಟ್ರ, ಹಾಸನ, ವಿಜಯಪುರ, ಕೇರಳ, ಶಿವಮೊಗ್ಗಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಕೈಗೊಂಡಿರುವ ಯಶಸ್ವಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ, ಪ್ರತಿ ಊರಿನಲ್ಲಿ ಜಲಮೂಲಗಳ ರಕ್ಷಣೆಗೆ ಜನರ ಸ್ವಯಂ ಹಿತಾಸಕ್ತಿಯಿಂದ ಪ್ರಯತ್ನಿಸಬೇಕು ಎಂಬ ಆಶಯ ಸಂಸ್ಥೆಯದ್ದು.
ಸಮಾನ ಮನಸ್ಕ ಗೆಳೆಯರ ಬಳಗದೊಂದಿಗೆ ಡಾ. ಅನುಪಮಾ ಅವರು ಧಾನ್ಯ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಕಳೆದ 8 ವರ್ಷಗಳಿಂದ ಜಲ ಜಾಗೃತಿ ಕ್ಯಾಲೆಂಡರ್ ಪ್ರಕಟಿಸಲಾಗುತ್ತಿದೆ.
2018ರ ಜಲಸಿರಿ ಕ್ಯಾಲೆಂಡರ್ ಪಡೆಯಲು talaparige@gmail.comಗೆ ಇಮೇಲ್ ಮಾಡಿ.
***
ಸುಕೊ ಬ್ಯಾಂಕ್ ಕೃಷಿ ಪಾಠ
ಬಳ್ಳಾರಿಯ ಸುಕೋ ಬ್ಯಾಂಕ್ ಹೊಸ ಪರಿಕಲ್ಪನೆಯ ಕ್ಯಾಲೆಂಡರ್ ಹೊರತಂದಿದೆ.
ರಾಜ್ಯವಿಡಿ ಸಂಚರಿಸಿ, ಕೃಷಿಕರನ್ನು ನಿಯಮಿತವಾಗಿ ಭೇಟಿ ಮಾಡುವ ಪರಿಸರ ಆಸಕ್ತ ಶಿವಾನಂದ ಕಳವೆ ಈ ಕ್ಯಾಲೆಂಡರ್ ಮೂಲಕ ರೈತರ ಬದುಕು ಕಟ್ಟಿಕೊಡಲು ಶ್ರಮಿಸಿದ್ದಾರೆ. ಈ ವರ್ಷದ ಕ್ಯಾಲೆಂಡರ್ನ ಆಶಯ ‘ಸಣ್ಣ ಹಿಡುವಳಿದಾರನ ಯಶಸ್ವಿ ಕಥನ’.
‘ಕೃಷಿ ಮೂಲಕ ಬದುಕು ಕಟ್ಟಿಕೊಂಡ ರೈತರ ಕಥೆಗಳನ್ನು ಆಕರ್ಷಕವಾಗಿ ಬಿಂಬಿಸುವ ಮೂಲಕ ಹೊಸ ತಲೆಮಾರಿನಲ್ಲಿ ಕೃಷಿಪ್ರೀತಿ ಉಳಿಸುವುದು ಕ್ಯಾಲೆಂಡರ್ನ ಉದ್ದೇಶ’ ಎನ್ನುತ್ತಾರೆ ಕಳವೆ.