ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಉದ್ಯೋಗಿ ಸೀತಾರಾಂ ತಾಂಬೆ ನಿವೃತ್ತರಾದರು.
ತಾಂಬೆ ಅವರು ಬಿಸಿಸಿಐನಲ್ಲಿ ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ್ದರು. ತಾಂಬೆ ಅವರು 16ನೇ ವಯಸ್ಸಿನಲ್ಲಿಯೇ ಬಿಸಿಸಿಐಗೆ ಕೆಲಸಕ್ಕೆ ಸೇರಿದ್ದರು.
1989ರಲ್ಲಿ ಸಚಿನ್ ತೆಂಡೂಲ್ಕರ್ ಭಾರತ ತಂಡಕ್ಕೆ ಆಯ್ಕೆಯಾದಾಗ, ಬಾಂದ್ರಾದಲ್ಲಿದ್ದ ಆವರ ಮನೆಗೆ ತೆರಳಿ ಸಚಿನ್ ತಂದೆಗೆ ಅಧಿಕೃತ ಆಯ್ಕೆ ಪತ್ರ ನೀಡಿದ್ದರು. ಜೊತೆಗೆ ತಂಡಕ್ಕೆ ಆಯ್ಕೆಯಾದ ಎಲ್ಲ ಆಟಗಾರರ ಮನೆಗೆ ಟೆಲಿಗ್ರಾಮ್ ಕಳುಹಿಸುವ ಕೆಲಸವನ್ನೂ ನಿಭಾಯಿಸಿದ್ದರು.
ಭಾರತದಲ್ಲಿ ಅಂತರರಾಷ್ಟ್ರೀಯ ಸರಣಿಗಳು ನಡೆದಾಗ ಚಾಂಪಿಯನ್ನರಿಗೆ ನೀಡುವ ಟ್ರೋಫಿಯನ್ನು ಫೈನಲ್ ಪಂದ್ಯ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ತಾಂಬೆ ನಿರ್ವಹಿಸಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದ ಕಚೇರಿಯಲ್ಲಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.