ರಾಯಚೂರು: ವಿಜಯಪುರದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಖಂಡಿಸಿ, ಸಂವಿಧಾನದ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಚಿವ ಅವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಲಿತಸೇನೆ ಜಿಲ್ಲಾ ಘಟಕದ ಸದಸ್ಯರು ಒತ್ತಾಯಿಸಿ ಜಿಲ್ಲಾಡಳಿತ ಕಚೇರಿ ಮೂಲಕ ಮುಖ್ಯಮಂತ್ರಿಗೆ ಈಚೆಗೆ ಮನವಿ ಸಲ್ಲಿಸಿದರು.
ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕಾನೂನು ಕ್ರಮ ಜರುಗಿಸಬೇಕು. ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ‘ಸಂವಿಧಾನ ಬದಲಾವಣೆ ಮಾಡಲು ನಾವು ಬಂದಿರುವುದಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವರು ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಬದಲಾವಣೆ ಮಾಡಿ ತೋರಿಸಲಿ. ದಾನಮ್ಮ ಕೊಲೆಯ ಬಗ್ಗೆ ಮಾತನಾಡದ ಬಿಜೆಪಿಯವರು ವ್ಯಾಘ್ರ ಮುಖ ಹೊಂದಿದ್ದಾರೆ. ಕೇವಲ ಓಟಿಗಾಗಿ ದಲಿತರನ್ನು ಓಲೈಕೆ ಮಾಡುತ್ತಾರೆ’ ಎಂದು ದೂರಿದರು.
ಅನಂತಕುಮಾರ ಹೆಗಡೆ ರಾಜೀನಾಮೆಗೆ ಒತ್ತಾಯಿಸಿ ಜನವರಿ 3ರಂದು ನಡೆಯಲಿರುವ ಸಿಂಧನೂರು ಬಂದ್ಗೆ ಬೆಂಬಲಿಸಲಾಗುವುದು ಎಂದರು. ಪದಾಧಿಕಾರಿಗಳಾದ ಭೀಮೇಶ ನಾಯಕ್, ಜಿ.ಬಿ.ಆಂಜನೇಯ, ಕೃಷ್ಣ ಮಾಚರ್ಲ, ರಾಮಪ್ಪ ನಾಯಕ, ನರಸಿಂಹನಾಯಕ, ಶ್ರೀನಿವಾಸ, ಶಂಕರ, ಪ್ರಾಣೇಶ ನಾಯಕ, ಗೋವಿಂದ ಇದ್ದರು.