ಶನಿವಾರಸಂತೆ: ಗ್ರಾಮೀಣ ಮಟ್ಟದ ಕ್ರೀಡಾಪ್ರತಿಭೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ನಡೆದಿಲ್ಲ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್ ಪೂವಯ್ಯ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಜಿ.ಎಂ.ಪಿ.ಶಾಲಾ ಮೈದಾನದಲ್ಲಿ ಜಿ.ಎಫ್.ಸಿ. ಸ್ನೇಹ ಬಳಗ ಈಚೆಗೆ ಆಯೋಜಿಸಿದ್ದ ಫುಟ್ಬಾಲ್ ಟೂರ್ನಿಯ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈವಿಧ್ಯಮಯ ಸಂಸ್ಕೃತಿ ಹೊಂದಿದ ದೇಶದಲ್ಲಿ ಸಂಸ್ಕೃತಿಯೇ ಸಂಪತ್ತಾಗಿದೆ. ಗ್ರಾಮೀಣ ಸೊಗಡೇ ಆಸ್ತಿಯಾಗಿದೆ. ಗ್ರಾಮೀಣ ಪ್ರದೇಶದ ಕ್ರೀಡಾಪ್ರತಿಭೆಗಳನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಂಪನ್ಮೂಲ ಗಳ ಕೊರತೆ ಇದ್ದರೂ ಖಾಸಗಿ ಸಂಘ ಸಂಸ್ಥೆಗಳು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಕ್ರೀಡೆಯಲ್ಲಿ ಭಾರತ 105ನೇ ಸ್ಥಾನದಲ್ಲಿದೆ. 10ನೇ ಸ್ಥಾನದಲ್ಲಿ ನಿಲ್ಲುವ ಸಾಮರ್ಥ್ಯ ದೇಶ ಕ್ರೀಡಾಪಟುಗಳಿಗಿದ್ದರೂ ಕ್ಷೇತ್ರಕ್ಕೆ ಸಂಬಂಧಪಟ್ಟ ಸೌಲಭ್ಯಗಳನ್ನು ಒದಗಿಸುವ ಕೆಲಸ ನಡೆಯುತ್ತಿಲ್ಲ ಎಂದೂ ಸಂಕೇತ್ ಪೂವಯ್ಯ ಹೇಳಿದರು. ಜೆಡಿಎಸ್ ಜಿಲ್ಲಾ ವಕ್ತಾರ ಎಂ.ಎ. ಆದಿಲ್ ಪಾಶ ಹಾಗೂ ಎನ್.ಕೆ.ಅಪ್ಪಸ್ವಾಮಿ ಮಾತನಾಡಿದರು.
ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಡಿಕೇರಿ ಬಾಯ್ಸ್ ತಂಡಕ್ಕೆ ₹10 ಸಾವಿರ ನಗದು ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಗೌಡಳ್ಳಿ ಸಿ.ಜೆ.ಎಫ್.ಸಿ.ತಂಡಕ್ಕೆ ₹5 ಸಾವಿರ ನಗದು ಮತ್ತು ಟ್ರೋಫಿ ವಿತರಿಸಲಾಯಿತು.
ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಿ.ಪಿ.ಭೋಜಪ್ಪ, ಮುಖಂಡರಾದ ಮುತ್ತೇಗೌಡ, ಪಾಪಣ್ಣ, ನಾಝಿಮ್ ಪಾಶ, ಚೆನ್ನಬಸಪ್ಪ, ರೆನ್ನಿ, ಮತ್ತೀಶ್, ಜಿ.ಎಫ್.ಸಿ. ಸ್ನೇಹ ಬಳಗದ ಪದಾಧಿಕಾರಿಗಳಾದ ರವಿ, ಮಹೇಶ್, ಜಗ್ಗಿ, ಜಾನಿ ಹಾಗೂ ತಸ್ಲಿಂ ಇತರರು ಇದ್ದರು.