ಮಲೆಮಹದೇಶ್ವರ ಬೆಟ್ಟ: ಹೊಸ ವರ್ಷದ ಪ್ರಯುಕ್ತ ಮಲೆಮಹದೇಶ್ವರ ಸ್ವಾಮಿ ದರ್ಶನಕ್ಕಾಗಿ ಸೋಮವಾರ ಅಪಾರ ಸಂಖ್ಯೆಯ ಭಕ್ತರ ದಂಡು ಹರಿದು ಬಂದಿತ್ತು. ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಮುಂಜಾನೆ ನಾಲ್ಕು ಗಂಟೆಯಿಂದಲೇ ದೇವರ ದರ್ಶನಕ್ಕೆ ಅನುವುಮಾಡಿಕೊಡಲಾಗಿತ್ತು.
ದೇವರ ದರ್ಶನಕ್ಕಾಗಿ ವಿಶೇಷ ದರ್ಶನವಲ್ಲದೆ ₹300 ಹಾಗೂ ₹100, ₹50 ಟಿಕೆಟ್ ಸೌಲಭ್ಯ ಕಲ್ಪಿಸಲಾಗಿತ್ತು. ಅಲ್ಲದೆ ನಿರಂತರವಾಗಿ ಅನ್ನ ದಾಸೋಹದ ವ್ಯವಸ್ಥೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿತ್ತು.
ಧರ್ಮದರ್ಶನ ಹಾಗೂ ವಿಶೇಷ ದೇವರ ದರ್ಶನದ ಸಾಲು ದೇವಾಲಯದ ಹೊರಭಾಗದಲ್ಲಿ ಒಂದು ಸುತ್ತು ಬಂದಿದ್ದಲ್ಲದೆ, ರಸ್ತೆಯ ಮಧ್ಯಭಾಗದಲ್ಲೇ ಎರಡು ಸಾಲುಗಳಲ್ಲಿ ಇತ್ತು. ಸುಡು ಬಿಸಿಲನ್ನೂ ಲೆಕ್ಕಿಸದೆ ಹೆಂಗಸರು, ಮಕ್ಕಳು ಮಾದಪ್ಪನ ದರ್ಶನ ಪಡೆಯಲು ನಿಂತಿದ್ದ ದೃಶ್ಯಗಳು ಕಂಡುಬಂದವು.
ಉತ್ಸವಕ್ಕೆ ತೊಂದರೆ: ಅಲ್ಲದೆ ರಸ್ತೆ ಮಧ್ಯಭಾಗದಲ್ಲೇ ಭಕ್ತಾದಿಗಳು ನಿಂತಿದ್ದ ಕಾರಣ ಬಸವ ವಾಹನ, ಹುಲಿವಾಹನ ಸೇವೆಗಳನ್ನು ನೆರವೇರಿಸಲು ಹರ ಸಹಾಸ ಪಡಬೇಕಾದ ಪರಿಸ್ಥಿತಿ ಎದುರಾಯಿತು.
ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿರುವ ಮಂಡಳಿ, ಅದನ್ನು ಪಾಲನೆ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸಿಲ್ಲ. ಸರತಿ ಸಾಲು ಅಡ್ಡದಿಡ್ಡಿಯಾಗಿ ನಿಂತಿದ್ದರಿಂದ ಉರುಳು ಸೇವೆ ಹಾಗೂ ಪಂಜಿನ ಸೇವೆ ಮಾಡುವ ಭಕ್ತರಿಗೆ ಕಿರಿಕಿರಿಯಾಗುತಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಬೇಕು ಎಂದು ಬೆಂಗಳೂರಿನ ಭಕ್ತರೊಬ್ಬರು ಸಮಸ್ಯೆ ಹೇಳಿಕೊಂಡರು.
ಬಿಗಿ ಪೊಲೀಸ್ ಬಂದೋಬಸ್ತ್: ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಭಾನುವಾರ ಮಧ್ಯಾಹ್ನ 2ಗಂಟೆಯಿಂದಲೇ ಪಾಲಾರ್ ಹಾಗೂ ಕೊಳ್ಳೇಗಾಲದ ಗೇಟ್ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿತ್ತು. ಭದ್ರತೆ ದೃಷ್ಟಿಯಿಂದ ವಾಹನ ತಪಾಸಣೆ ಮಾಡಲಾಗುತ್ತಿತ್ತು.