ಬೆಂಗಳೂರು: ಪಶುಸಂಗೋಪನಾ ಇಲಾಖೆ ಇದೇ 4ರಿಂದ ಮೂರು ದಿನ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ರಾಜ್ಯ ಮಟ್ಟದ ಪಶು ಮೇಳ ಆಯೋಜಿಸಿದೆ.
ರಾಜ್ಯ ಹಾಗೂ ಹೊರ ರಾಜ್ಯಗಳ ಜಾನುವಾರುಗಳು ಮತ್ತು ಕೋಳಿ ತಳಿಗಳು, ರೇಷ್ಮೆ ಸಾಕಾಣಿಕೆ ಬಗ್ಗೆ ಪ್ರದರ್ಶನ ಹಾಗೂ ತಾಂತ್ರಿಕ ಮಾಹಿತಿ ನೀಡಲಾಗುತ್ತದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ. ಎಂ.ಟಿ. ಮಂಜುನಾಥ್ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪಶುಸಂಗೋಪನೆ ಕ್ಷೇತ್ರದ ನೂತನ ಸಂಶೋಧನೆಗಳನ್ನು ರೈತರಿಗೆ ಪರಿಚಯಿಸಲಾಗುತ್ತದೆ. ಪ್ರಗತಿಪರ ರೈತರು ಹಾಗೂ ವಿಶ್ವವಿದ್ಯಾಲಯಗಳ ತಜ್ಞರೊಂದಿಗೆ ಹೊಸ ಅನ್ವೇಷಣೆ, ಸಮಸ್ಯೆ ಹಾಗೂ ವೈಜ್ಞಾನಿಕ ವಿಚಾರಗಳ ಬಗ್ಗೆ ಸಂವಾದ ನಡೆಸಲಾಗುತ್ತದೆ’ ಎಂದರು.
200 ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಹಾಲು ಕರೆಯುವ ಸ್ಪರ್ಧೆ ಇರಲಿದೆ. ಕಂಬಳ ಕೋಣಗಳ ಪ್ರದರ್ಶನವಿರಲಿದೆ ಎಂದರು.