ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳ ವೀಕ್ಷಣೆಗೆ ಜನಸಾಗರ

Last Updated 6 ಜನವರಿ 2018, 9:26 IST
ಅಕ್ಷರ ಗಾತ್ರ

ಅರಕಲಗೂಡು: ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪಶುಮೇಳದ ವೀಕ್ಷಣೆಗೆ ಶುಕ್ರವಾರ ಜನಸಾಗರ ಹರಿದು ಬಂತು. ವಾರದ ಸಂತೆಗೆ ಬಂದ ತಾಲ್ಲೂಕಿನ ವಿವಿಧ ಭಾಗಗಳ ರೈತರಲ್ಲದೆ ರಾಜ್ಯದ ಇತರೆಡೆಯಿಂದಲೂ ಜನರು ಬಂದು ಮೇಳ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳನ್ನು ಮೇಳ ವೀಕ್ಷಿಸಲು ಕರೆತಂದ ಕಾರಣ ಕ್ರೀಡಾಂಗಣದಲ್ಲಿ ಎಲ್ಲೆಲ್ಲಿ ನೋಡಿದರೂ ಜನಸಂದಣಿ ಏರ್ಪಟ್ಟಿತ್ತು.

ಎರಡನೆ ದಿನವೂ ವಿವಿಧೆಡೆಯಿಂದ ಪಶುಗಳು ಮೇಳಕ್ಕೆ ಆಗಮಿಸಿದ್ದು, ಎಲ್ಲ 129 ಸ್ಟಾಲ್‌ಗಳು ಭರ್ತಿಯಾಗಿದ್ದವು. ವಿವಿಧ ತಳಿಯ 128 ಹಸು ಮತ್ತು ಹೋರಿ, 10 ಎಮ್ಮೆ ಮತ್ತು ಕೋಣ, ಕುರಿಗಳು,ಆಡುಗಳು, ಕೋಳಿ, ಮೊಲ, ಹಂದಿ ಸೇರಿ 589ಜಾನುವಾರು ನೋಂದಣಿ ಆಗಿದ್ದವು.

ಬೆಳಿಗ್ಗೆ ಹಾಲು ಕರೆಯುವ ಸ್ಪರ್ಧೆ ಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಂದ ಬಂದಿದ್ದ 13 ಮಿಶ್ರತಳಿ ರಾಸುಗಳು ಪಾಲ್ಗೊಂಡಿದ್ದವು.

ಮಂಡ್ಯ ಜಿಲ್ಲೆಯ ಮಾಯಣ್ಣನಕೊಪ್ಪಲು ಗ್ರಾಮದ ವೀರೇಶ್ ಅವರ ರಾಸು 21.800 ಕೆಜಿ, ಬೆಂಗಳೂರಿನ ಮುದ್ದಿನ ಪಾಳ್ಯದ ಹರ್ಷಿತ್ ಗೌಡ ಅವರ ಹಸು 20.385 ಹಾಗೂ ಹೊಳೆನರಸೀಪುರ ತಾಲ್ಲೂಕು ಸೂರನಹಳ್ಳಿ ಗ್ರಾಮದ ರಘು ಅವರ ಹಸು 20.220 ಕೆಜಿ ಹಾಲು ಕರೆದವು.

ನಾಟಿ ತಳಿಯ ಎರಡು ಹಸುಗಳೂ ಮೇಳದಲ್ಲಿ ಗಮನಸೆಳೆದವು. ತಾಲ್ಲೂಕಿನ ನಿಲುಕುಂದ ಗ್ರಾಮದ ಪುಟ್ಟಪ್ಪ ಅವರ ಹಸು 3.285 ಕೆಜಿ ಹಾಗೂ ಅರೇಮಾದನಹಳ್ಳಿ ಕುಮಾರಸ್ವಾಮಿ ಅವರ ರಾಸು 2.390 ಕೆ.ಜಿ ಹಾಲುಕರೆದವು. ಮೇಳದಲ್ಲಿ ಏರ್ಪಡಿಸಿದ್ದ ಕರುಗಳ ಪ್ರದರ್ಶನದಲ್ಲಿ ಮಿಶ್ರ ತಳಿ, ಹಳ್ಳಿಕಾರ್‌ ತಳಿ, ಇನ್ನತರ ತಳಿಗಳ 80 ಕರುಗಳು ಇದ್ದವು. ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಕುಸ್ತಿಪಂದ್ಯ: ಮಧ್ಯಾಹ್ನ ರಾಜ್ಯ ಮಟ್ಟದ ಕುಸ್ತಿ ಪಂದ್ಯಕ್ಕೆ ಸಚಿವ ಎ.ಮಂಜು ಚಾಲನೆ ನೀಡಿದರು. ವಿವಿಧ ಜಿಲ್ಲೆಗಳ 240 ಕುಸ್ತಿಪಟುಗಳು ಭಾಗವಹಿಸಿದ್ದರು. 57, 61, 71, 74, 81 ಮತ್ತು 86 ಕೆ.ಜಿ ವಿಭಾಗದಲ್ಲಿ ಪಂದ್ಯಗಳು ನಡೆದವು. ಕನ್ನಡ ಮತ್ತು ಸಂಸದ್ಕೃತಿ ಇಲಾಖೆ ವತಿಯಿಂದ ಜನಪದ ಉತ್ಸವ ಏರ್ಪಾಟಾಗಿತ್ತು. ಗುರುವಾರ ರಾತ್ರಿ ಚಿತ್ರನಟರು ನಡೆಸಿಕೊಟ್ಟ ಹಾಸ್ಯ ಕಾರ್ಯ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT