ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರಳುವ್ವಿನ ಆಟ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಇದೆಲ್ಲಾ ದಿನವೂ ಇದ್ದದ್ದೆ. ಎಲ್ರೂ ಮಲಗೇಳಿ… ಮಲಗೇಳಿ… ಲೈಟ್ ಆಫ್ ಮಾಡ್ರಿ… ಕತ್ತಲಾದರೆ ತಂತಾನೇ ಮಲಗ್ತಾರೆ’ ಎಲ್ಲರೂ ಎದ್ದು ತಮ್ಮ ತಮ್ಮ ಕೋಣೆಗಳ ಕಡೆಗೆ ಹೊರಟರು.

ಮುನೀಂದ್ರನಿಗೆ ತಾನು ಖಾಲಿ ಖಾಲಿಯಾದ ಭಾವನೆ ಆವರಿಸಿ ಹಾಗೆಯೇ ಸೋಫಾಗೆ ಒರಗಿ ಕುಳಿತಿದ್ದ. ಇದು ಒಂದಿಷ್ಟು ಹೊತ್ತು ನಡೆಯುವ ಹೊತ್ತಿಗೆ ಹಾಸಿಗೆ ಹಿಡಿದವರ ದಿಕ್ಕಿಂದ ಸಣ್ಣಗೆ ಗೊರಕೆಯ ಸದ್ದುಗಳು ಶುರುವಾಗಿದ್ದವು. ಮನಸ್ಸಿನ ಅಂಗಳ ಮಳೆ ಸುರಿದು ನಿಂತ ಆಕಾಶದಂತೆ ಆಗಿತ್ತು. ನಿರುದ್ದೇಶದ ಕ್ರಿಯೆ ಎಂಬಂತೆ ಬಾಯಲ್ಲಿ ಹಾಕಿಕೊಂಡಿದ್ದ ಅಡಿಕೆ ತಂಬಾಕನ್ನು ನೆನಪಾದಾಗ ಒಮ್ಮೆ ಅಗಿಯುತ್ತಿದ್ದ. ಲೈಟು ಆರಿಸಿ ಹಾಸಿಗೆಗೆ ತೆರಳಲು ಕುಂತವನಿಗೆ ನೆರಳ ಹೂವಿನ ವಿನ್ಯಾಸಗಳು ತಡೆಯನ್ನು ಒಡ್ಡಿದ್ದವು.

‘ಲೈಟಿರ್ಲಿ… ಲೈಟಿರ್ಲಿ… ನಾನು ನನ್ನ ಬೆಳ್ನಾಗೆ ನೆರಳುವ್ವಾನ ಬೆಳ್ದು ದೇವ್ರಿಗೆ ಕೊಡಬೇಕು’ ಎಂದು ಹೇಳಿದ ತಾಯಮ್ಮ ಲೈಟಿನ ಕಿರಣಗಳ ಕೆಳಬದಿಗೆ ಕೈಗಳನ್ನು ಹಿಡಿದು ಬೆರಳುಗಳನ್ನು ಆಡಿಸುತ್ತಾ ಮಲ್ಲಿಗೆ, ಸಂಪಿಗೆ, ಚೆಂಡುವ್ವಿನ ಆಕೃತಿಯಂತೆ ನೆರಳನ್ನು ಏರ್ಪಡಿಸುತ್ತಿದ್ದಳು. ಈ ನೆರಳುವ್ವಿನ ಆಟ ಇದೇ ಮೊದಲು. ಸಾವಿರಾರು ದಿನಗಳಿಗೂ ಹಿಂದಿನಿಂದ ತಾಯಮ್ಮನ ರೋಸು, ರಂಪಾಟಕ್ಕೆ ಗದರಿ, ರೇಗಿ ಮಲಗಿಸುತ್ತಿದ್ದ ಮುನೀಂದ್ರ, ‘ಬೆಳ್ನಾಗೆ ನೆರಳುವ್ವಾನ ಬೆಳ್ದು’ ಎಂಬ ಶಬ್ದಗಳನ್ನು ಕೇಳಿ ಲೈಟಾರಿಸದೆ ಸುಮ್ಮನೆ ಕುಳಿತಿದ್ದ. ಇಷ್ಟೇಳಿದ ತಾಯಮ್ಮ, ಲೋಕವನ್ನೇ ಮರೆತವಳಂತೆ ತನ್ನ ನೆರಳುವ್ವಿನ ಆಟದಲ್ಲಿ ಮುಳುಗಿದ್ದಳು. ಯಾವುದೋ ಅನ್ಯಲೋಕದ ಜೀವಿಗಳೊಂದಿಗೆ ಸೆಣಸುವವಳಂತೆ, ಸಂಧಾನ ಮಾಡುವವಳಂತೆ, ದುಃಖವನ್ನು ತೋಡಿಕೊಳ್ಳುವವಳಂತೆ ಧ್ವನಿಯನ್ನು ಏರಿಳಿತದಲ್ಲಿ ಹೊರಹಾಕುತ್ತಾ, ಅಳುತ್ತಾ, ಗದರಿ ಚಾಲೆಂಜ್ ಮಾಡುತ್ತಾ ಒಂದು ಆಕೃತಿಗೆ ತಿರುಗಿದ ಬೆರಳ ನೆರಳನ್ನು ಆ ಜೀವಿಗಳಿಗೆ ತೋರಿಸಲೆಂಬಂತೆ ಕಣ್ಣುಬ್ಬನ್ನು ಎಗರಿಸುತ್ತಾ, ‘ಈ ಹೂವ್ವಾನ ದೇವ್ರಿಗೆ ಕೊಡ್ತಿದ್ದೀನಿ. ದೇವ್ರು ನನ್ನ ಪಾಲ್ಗವ್ನೆ. ಇನ್ಮ್ಯಾಲೆ ನೀವು ನನ್ನ ಏನೂ ಮಾಡಕ್ಕಾಗಲ್ಲ’ ಎನ್ನುತ್ತಾ ತನ್ನೊಳಹೊರಗೆ ತಾನು ಮುಳುಗಿದ್ದಳು.

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅಮ್ಮ ಎದುರಿದ್ದಾಗಲೆಲ್ಲಾ ಮುನೀಂದ್ರನನ್ನು ಹಲವಾರು ವಿಚಾರಗಳು ಧುಮ್ಮಿಕ್ಕಿ ಕಾಡುತ್ತಿದ್ದವು. ಮನುಷ್ಯರ ಹುಟ್ಟು, ಬದುಕು, ಮುಪ್ಪು ಮತ್ತು ಸಾವಿನ ಘನತೆಯ ವಿಚಾರಗಳು ಮತ್ತೆ ಮತ್ತೆ ಬಂದು ತಲೆಗೆ ಮೆತ್ತಿಕೊಂಡು ಚಕ್ಕರ್ ಹೊಡೆಸುತ್ತಿದ್ದವು. ತನ್ನದಲ್ಲದ ತಾನಾಗಿ ಮನುಷ್ಯರು ಕಾಲದ ಹೊಟ್ಟೆಯೊಳಗೆ ರೂಪಾಂತರಗೊಳ್ಳುವ ಬಗೆ ಆಗಾಗ್ಗೆ ಅವನಲ್ಲಿ ದಿಗಿಲನ್ನೂ ಹುಟ್ಟಿಸುತ್ತಿತ್ತು.

ತನ್ನ ಹಾಗೂ ತನ್ನೊಂದಿಗೆ ಹುಟ್ಟಿದವರ ಹುಟ್ಟು- ಬೆಳವಣಿಗೆಗೆ ಘನತೆಯನ್ನು ತರದ ಅಪ್ಪ ಈ ನೆರಳುವ್ವಿನ ಆಟದಲ್ಲಿ ಉದ್ದಕ್ಕೂ ಯಾವ ಪರಿಣಾಮವನ್ನೂ ಒಳಗೆ ಬಿಟ್ಟುಕೊಂಡವನಲ್ಲ. ಈಗಲೂ ಅಷ್ಟೆ; ಯಾವುದಕ್ಕೂ ತನ್ನ ತಲೆಯೊಳಗೆ ಪ್ರವೇಶ ಕೊಡದೆ ಪಡಸಾಲೆಯ ಕಬ್ಬಿಣದ ಕಾಟ್ ಮೇಲೆ ಮಲಗಿರುವುದು ಮುನೀಂದ್ರನನ್ನು ಹಿಚುಕುತ್ತಿತ್ತು. ತನ್ನಪ್ಪ ತೊಂಬತ್ತು ದಾಟಿದ ದೇಹ ಬಯಸುವ ಲಯಕ್ಕೆ ತಕ್ಕಂತೆ ಸಾದ್ಯಂತವಾದ ಸದ್ದುಗಳಲ್ಲಿ ಗೊರಕೆ ಹೊಡೆಯುತ್ತಾ ಸುಖನಿದ್ರೆಗೆ ಜಾರಿದ್ದನ್ನು ಕಂಡು ಮುನೀಂದ್ರ ಕುದಿಯಲಾರಂಭಿಸಿದ್ದ. ಎಂಬತ್ತೈದು ದಾಟಿದ ಅಮ್ಮ ತಾಯಮ್ಮನ ನೆರಳುವ್ವಿನ ಆಟದ ಕಡೆಗೆ ಕಣ್ಣು ತಿರುಗಿಸಿದ ಕೂಡಲೇ ಅವನ ಕುದಿಕೋಪವೆಲ್ಲಾ ಛಲ್ಲಂತ ಅವನನ್ನೇ ಸುಡುವ ದ್ರವದಂತೆ ಆವರಿಸಿ ಕಂಪಿಸಿದ. ಹೊಟ್ಟೆಯೊಳಗೆ ಸಣ್ಣದಾದ ಉರಿಯೊಂದು ಹುಟ್ಟಿಕೊಂಡು ತನ್ನೆಲ್ಲ ದೇಹ - ಮನಸ್ಸನ್ನು ಆವರಿಸಿ ಧಗಧಗಿಸುತ್ತಿದೆ ಅನ್ನಿಸಿತು ಮುನೀಂದ್ರನಿಗೆ.

ಮೊದಲಿಂದ ಮೊದಲಾಗಿ ಈಗ ನಡುವಯಸ್ಸಿಗೆ ಬಂದರೂ ಮುಗಿಯದೆ ತನಗೇ ಬೆನ್ನತ್ತಿರುವ ಸಂಕಟಗಳು, ತನ್ನ ಅರಿವಿನ ದಿನಗಳಿಂದಲೂ ಅಮ್ಮ ಬಿಟ್ಟ ನಿಟ್ಟುಸಿರಿನ ಸಂದರ್ಭಗಳು-ಇವೆಲ್ಲ ಸರಣಿಯಂತೆ ಮನದಲ್ಲಿ ಹರಿದು ಮುನೀಂದ್ರನಿಗೆ ಅರಿವಿಲ್ಲದಂತೆ ಕಣ್ಣಲ್ಲಿ ನಾಲ್ಕಾರು ಹನಿಗಳು ಉದುರಿ ರಾತ್ರಿ ಮುಂದೆ ಸಾಗಿ ಬಲಿತ ಕತ್ತಲಿಗೆ ಸೇರಿಕೊಂಡವು. ಅಷ್ಟರಲ್ಲೇ ಎದ್ದ ಅಪ್ಪನ ದೊಡ್ಡ ಗೊರಕೆಯು ಅವನ ಗಮನವನ್ನು ತನ್ನತ್ತ ಸೆಳೆಯಿತು. ‘ಅಪ್ಪನ ಸಲ್ಲದ ನೆವಗಳ ಸೋಮಾರಿತನಕ್ಕೆ ಅಮ್ಮನ ನೆರಳುವ್ವಿನಾಟ ಸೃಷ್ಟಿಯಾಗಿದೆ’ ಎಂದು ತನ್ನಲ್ಲೆ ತಾನು ಅಂದುಕೊಳ್ಳುವಾಗ ಮುನೀಂದ್ರನ ಇಡೀ ದೇಹಕ್ಕೆ ಯಾರೊ ಸುಟ್ಟಿಗೆಗಳನ್ನಿಟ್ಟಂತೆ ಭಾಸವಾಗಿ ಶಬ್ದವಿಲ್ಲದ ನರಳಿಕೆಯೊಂದು ಅವನ ಮುಖದಿಂದ ಹೊರಬಿತ್ತು.

ಪೈಪೋಟಿ, ಸಿಟ್ಟು, ಅಸೂಯೆ, ಆಸ್ತಿ ಲೆಕ್ಕಾಚಾರ, ವಿಚಿತ್ರ ದ್ವೇಷಗಳ ಬಿರುಮಳೆಯನ್ನು ಸದಾ ಸುರಿಯುತ್ತಾ ಯಾವಾಗಲೋ ಒಮ್ಮೊಮ್ಮೆ ಪ್ರೀತಿಯೆಂಬ ತುಂತುರು ಉದುರುತ್ತಿದ್ದ ಹಿಂಡು ಜನರಿದ್ದ ಕೂಡು ಕುಟುಂಬದ ಸೈಡ್ ಎಫೆಕ್ಟ್ ಈ ಅಪ್ಪ. ಇಂಥ ಗಂಡನನ್ನು ಪಡೆದು ಒಂಬತ್ತನ್ನು ಹೆತ್ತು, ಉಳಿದುಕೊಂಡ ಏಳನ್ನು ಕರಡಿಯಂತೆ ಸೆಣಸಾಡಿ ಬೆಳೆಸಿದವಳು ತಾಯಮ್ಮ. ಆಕೆಯ ಪಾಲಿಗೆ ಇದು ಪ್ರಯಾಸದ ನಡಿಗೆಯೇ ಆಗಿತ್ತು. ಹೆತ್ತ ಒಂಬತ್ತರಲ್ಲಿ ಎಂಟನೆಯವನಾಗಿಯೂ, ಬದುಕುಳಿದವರಲ್ಲಿ ಆರನೆಯವನೂ ಆಗಿದ್ದ ಮುನೀಂದ್ರ, ತಾಯಮ್ಮ ತನ್ನ ಮಕ್ಕಳನ್ನು ಜೋಪಾನ ಮಾಡಲು ಎದುರುಗೊಂಡ ನೂರಾರು ವಿದ್ರಾವಕ ಸಂದರ್ಭಗಳಿಗೆ ಸಾಕ್ಷಿಯೂ ಆಗಿದ್ದ.

ಅಮ್ಮನ ನೆರಳುವ್ವಿನ ಆಟದ ಜೊತೆ ಜೊತೆಗೆ ಮುನೀಂದ್ರನ ಮನದಲ್ಲಿ ನೆನಪುಗಳ ನದಿಯೂ ಹರಿಯತೊಡಗಿತ್ತು. ಈಗ ತಾಯಮ್ಮನ ತುದಿಗಾಲದಲ್ಲಿ ಆಕೆಯ ಬಸಿರ ಉತ್ಪನ್ನಗಳಾದ ಎಲ್ಲರೂ ತಮ್ ತಮ್ಮ ಬದುಕಿನ, ಸಂಸಾರಗಳ ಅನುಕೂಲ, ಅವಕಾಶಗಳ ದಾರಿ ಹಿಡಿದು ಹೊರಟು ಬಹಳ ಕಾಲವೇ ಸಂದಿದೆ. ಹೀಗೆ ಹೊರಟವರು ಏರ್ಪಡಿಸಿ ಹೋದ ವಾಸಿಯಾಗದ ಗಾಯಗಳೆಲ್ಲಾ ಗಾಯಗಳೇ ಅಲ್ಲ ಎಂಬ ಹೊಸ ರೂಪಾಂತರವನ್ನು ಆಕೆಯಲ್ಲಿ ಪಡೆದಿವೆ. ಆದರೆ, ಇವೆಲ್ಲ ಮುನೀಂದ್ರನಲ್ಲಿ ಮಾತ್ರ ಸದಾ ನೋವನ್ನು ಒಸರುವ ವ್ರಣಗಳೆಂಬಂತೆ ಅಮ್ಮನಿಂದ ವರ್ಗಾವಣೆಗೊಂಡು ಬಂದು ಗಪ್ಪಂತ ಕುಳಿತಿವೆ. ಗಂಡನ ನಿರಂತರ ಹಿಂಸೆ, ಬೇಜವಾಬ್ದಾರಿಗೆ ಬೇಸತ್ತು ಹಿಂದೆಯೂ, ಈಗಲೂ ಭೂಮಿಯ ಎರಡು ಧ್ರುವಗಳಂತೆ ಆಗಿದ್ದವರು ಅಪ್ಪ- ಅಮ್ಮ. ಇವರಿಬ್ಬರನ್ನೂ ಒಂದೇ ಮನೆಯಲ್ಲಿ ನಿಭಾಯಿಸುವುದೆಂದರೆ ಇವನಿಗೂ, ಇವನನ್ನು ನೆಚ್ಚಿ ಸಂಸಾರ ಮಾಡಲು ಬಂದವರಿಗೂ ದಿನನಿತ್ಯವೂ ರಣರಂಗವೊಂದನ್ನು ತಟಾಯಿಸಿ ಮುಂದಡಿ ಇಡುವಂತಹ ಸಂಗತಿಯೇ ಆಗಿತ್ತು.

ಇನ್ನು ಗಂಡನ ಮುಖವನ್ನು ಕಂಡರೆ ಸಾಕು, ತನ್ನ ಗತದ ಬದುಕಿಗೆ ಜಾರಿಬಿಡುತ್ತಿದ್ದ ತಾಯಮ್ಮ, ಗಾಳಿ, ಬೆಳಕು, ಬಯಲನ್ನು ನೋಡುತ್ತಾ, ಬೈಗುಳ ಮತ್ತು ಕಣ್ಣೀರಿನ ಜಡಿಮಳೆ ಸುರಿಸುತ್ತಾ ಇಡೀ ದಿನವನ್ನು ಮುಗಿಸುತ್ತಿದ್ದಳು. ಗಂಡ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ಕಣ್ಣು, ಕಿವಿ, ಹೃದಯ ಮಂದವಾದಂತೆ, ಒಮ್ಮೊಮ್ಮೆ ತಿಳಿದರೂ ಎಲ್ಲವೂ ಸರಿಯಾಗಿಯೇ ಇದ್ದ ದಿನಗಳಲ್ಲಿ ಇದ್ದಕ್ಕಿದ್ದಂತೆ ಗಾಳಿ ಮೆಟ್ಟಿದ ನೆಪದಲ್ಲಿ ವರ್ಷಗಟ್ಟಲೆ ಉಂಡು ಎಮ್ಮೆ ಮನೆಯ ಅಟ್ಟಣಿಗೆ ತಲುಪಿ ತಪಸ್ಸಿನಂಥ ವರಸೆಯಲ್ಲಿ ಇದ್ದುಬಿಡುತ್ತಿದ್ದಂಥ ರೀತಿಯಲ್ಲೂ ಇದ್ದುಬಿಡುತ್ತಿದ್ದ. ತುಮುಲವೇಳುತ್ತಿದ್ದದ್ದು ಇವರಿಬ್ಬರ ಸುತ್ತಲಿದ್ದವರಿಗೆ ಮಾತ್ರ. ಇಂಥ ಭಾರದಲ್ಲಿ ಒಂದಿಷ್ಟು ಪಾಲನ್ನೂ ಹಂಚಿಕೊಳ್ಳದ ತನ್ನೊಂದಿಗೆ ಹುಟ್ಟಿದವರು, ಅಮ್ಮ - ಅಪ್ಪನ ಪಾಲು ಎಂದು ಅವನ ಪಾಲಿನ ಆಸ್ತಿಯನ್ನೇ ಕಿತ್ತುಕೊಂಡು ಹೋಗಿದ್ದರು. ಇದರಿಂದಾದ ಲುಕ್ಸಾನಿಗಲ್ಲ; ಅವರ ಭಂಡತನಕ್ಕೆ ಮುನೀಂದ್ರ ಘಾಸಿಗೊಂಡಿದ್ದ. ‘ಛೇ..’ ಎಂಬ ತಿರಸ್ಕಾರವನ್ನೂ ಬೆಳೆಸಿಕೊಂಡಿದ್ದ.

‘‘ಇದನ್ನೆಲ್ಲ ‘ಛೇ’ ಎಂದು ಎಷ್ಟು ದೂರಕ್ಕೆ ಒಗೆದರೂ ಕಾಡುವ ನೋವಾಗಿಯೇ ನನ್ನೊಳಗೆ ಉಳಿದಿದೆಯಲ್ಲ…” ಎಂದು ಕಣ್ಣುಜ್ಜಿಕೊಂಡು ಮುನೀಂದ್ರ ವಾಸ್ತವಕ್ಕೆ ಮರಳಿದ. ಅಷ್ಟೊತ್ತಿಗೆ ನೆರಳುವ್ವಿನಾಟ ಮುಗಿದಿತ್ತು. ತಾಯಮ್ಮ ತನ್ನ ಗತಚರಿತ್ರೆಯ ಸಂಘರ್ಷದ ನೆಲೆಗೆ ಹೊರಳಿಕೊಂಡು ರೋದನೆ ಮತ್ತು ಬೈಗುಳದ ಘಟ್ಟವನ್ನು ತಲುಪಿದ್ದಳು. ಕಣ್ಣುಗಳಲ್ಲಿ ಧಾರಾಕಾರ ನೀರನ್ನು ಸುರಿಸುತ್ತಾ, ಅಂದಿನ ಬದುಕನ್ನು ಈ ಕ್ಷಣದಲ್ಲಿ ಬದುಕುತ್ತಿದ್ದಳು. ತನ್ನ ಸಂಕಟವನ್ನು ಎದುರು ಸೆಣಸಲು ನಿಂತ ಅಗೋಚರ ಪಾತ್ರಗಳಿಗೆ ನಿವೇದಿಸುವವಳಂತೆ, ಇನ್ನೊಮ್ಮೊಮ್ಮೆ ಸ್ವಾಭಿಮಾನ ಕೆರಳಿ ಸರ್ಪದ ಹೆಡೆಯನ್ನು ಮೆಟ್ಟಿ ನಿಂತು ಗರ್ಜಿಸುವವಳಂತೆ ಅಬ್ಬರಿಸುತ್ತಿದ್ದಳು. ಮೂರ್ನಾಲ್ಕು ವರ್ಷಗಳಿಂದಲೂ ಮನೆಯಲ್ಲಿ ನಡುರಾತ್ರಿಯ ತನಕ ಆಗಾಗ್ಗೆ ಅಲೆಗಳಂತೆ ಏಳುತ್ತಿದ್ದ ಇಂಥ ಸದ್ದಿನ ಪ್ರವಾಹ ಸಾಮಾನ್ಯದ್ದೇ ಆಗಿತ್ತು. ಅದು ಎಷ್ಟೇ ಸಾಮಾನ್ಯದ್ದು ಆಗಿದ್ದರೂ ರಾತ್ರಿಯ ಸದ್ದಿನಿಂದ ಉಂಟಾಗುವ ಕಿರಿಕಿರಿಗಂತೂ ಕೊರತೆ ಇರಲಿಲ್ಲ.

‘‘ಇದಕ್ಕೆ ಯಾವ ಪರಿಹಾರವೂ ಇಲ್ಲಾರೀ ಮುನೀಂದ್ರ. ಇದನ್ನು ಮೆಡಿಕಲ್ ಟರ್ಮ್ಸ್‌ನಲ್ಲಿ ‘ಡಿಮೆನ್ಷಿಯಾ’ ಅಂತಾರೆ. ಈ ದಿನಗಳ; ಅಂದರೆ ಶಾರ್ಟ್ ಟೈಂ ಮೆಮೋರಿ ಲಾಸ್ ಆಗುವ ಕಾಯಿಲೆಯಿದು. ಜೀವನದಲ್ಲಿ ಹೆಚ್ಚು ಮಾನಸಿಕ ಒತ್ತಡ ಅನುಭವಿಸಿದವರಿಗೆ, ಹೆಚ್ಚು ಮಕ್ಕಳನ್ನು ಹೆತ್ತು ಆಗ ಸರಿಯಾದ ಆರೈಕೆ ಇಲ್ಲದವರಿಗೆ ಇದು ವಯಸ್ಸಾದ ಮೇಲೆ ಬರುತ್ತೆ. ಇಂಥವರನ್ನು ಒಂಟಿಯಾಗಿ ಬಿಡಬಾರದು. ಕಣ್ಣಳತೆಯಿಂದ ದೂರಕ್ಕೆ ಒಬ್ಬರನ್ನೇ ಕಳಿಸಬಾರದು. ಊಟ, ಸ್ನಾನ, ಬಟ್ಟೆ, ಶೌಚ ಎಲ್ಲವೂ ಮಕ್ಕಳಿಗೆ ಮಾಡಿಸಿದಂತೆ ಮಾಡಿಸಬೇಕಾದ ದಿನಗಳು ಇವರಿಗೆ ಈಗ ಶುರುವಾಗಿವೆ. ಅವರು ನಿಮ್ಮ ತಾಯಿಯಾಗಿದ್ದವರು. ಈಗ ತಾಯ್ತನದ ಫೋಕಸ್ ಕಳೆದುಕೊಂಡಿದ್ದಾರೆ. ಈಗ ನೀವೇ ಅವರಿಗೆ ತಾಯಿ ಆಗಬೇಕು.” ಎರಡು ವರ್ಷಗಳ ಹಿಂದೆ ಡಾಕ್ಟರ್ ಹೇಳಿದ ಮಾತುಗಳು ಈ ನಡುರಾತ್ರಿಯಲ್ಲಿ ಮುನೀಂದ್ರನ ಮನದ ಪರದೆಯ ಮೇಲೆ ಹರಿದು ಹೋದವು. ತಾಯಮ್ಮನನ್ನೇ ನೋಡುತ್ತಾ ಕುಳಿತವನ ಬಾಯಲ್ಲಿ, ‘ತನ್ನ ದೇಹದ ರಕ್ತಸಮುದ್ರವನ್ನೇ ಸೋಸಿ ಜೀವ ತುಂಬಿದ ಒಂಬತ್ತು ಆಕೃತಿಗಳನ್ನು ಭೂಮಿಗೆ ಬಸಿದ ತಾಯಿ ಈ ಕ್ಷಣ ಎಂಬುದಿಲ್ಲದೆ ಗತಕ್ಕೆ ಮಾತ್ರ ಮುಖಾಮುಖಿಯಾಗುವ ಆಕೃತಿಯಾಗಿಬಿಟ್ಟಳಲ್ಲಾ…’ ಶಬ್ದಗಳು ತಾವಾಗಿಯೇ ಉದ್ಗಾರಗೊಂಡು ಉದುರಿದ್ದವು. ಇದೇ ಮಾತುಗಳು ಮುನೀಂದ್ರನ ಬಾಯಲ್ಲಿ ಮರುಮಂತ್ರದಂತೆ ಹೊರಟಾಗ ಇನ್ನಿಲ್ಲದ ಸಂಕಟ ಅವನನ್ನು ಆವರಿಸಿತು. ಈಗ ಅಮ್ಮನ ರೂಪದಲ್ಲಿ ಇರುವುದು ತಾಯ್ತನವಲ್ಲ; ಮಗುವಾಗಿ ಪರಿವರ್ತನೆಯಾದ ಆಕಾರ ರೂಪ! ಆಗಲೇ ರಾತ್ರಿ ಎರಡು ಗಂಟೆ ಮೀರಿತ್ತು. ಆ ದಿನದ ಮಟ್ಟಿಗೆ ಒಳಗೆ ಇದ್ದುದೆಲ್ಲವೂ ಹೊರಬಿದ್ದಂತೆ ಬಸವಳಿದಿತ್ತು ತಾಯವ್ವನ ದೇಹ. ಆಕೆಯ ಕಣ್ಣುಗಳು ನಿದ್ರೆಯ ಬಟ್ಟಲಲ್ಲಿ ತೇಲಲಾರಂಭಿಸಿದ್ದವು.

‘ನೆರಳುವ್ವಿನ ಆಟ, ತಾಯಿ ಆಕೃತಿಯಾಗಿ ಮಗುವಾದ ಬಗೆ, ಹುಟ್ಟು- ಬದುಕು- ಮುಪ್ಪು- ಸಾವಿನ ಘನತೆ, ಈಗ ತಾಯಿಗೆ ತಾಯಾಗುವ ಜವಾಬ್ದಾರಿ ಹಾಗೂ ಹಾಗಾಗುವ ದಾರಿ…!’ ಮುನೀಂದ್ರನ ಮೈ ನಡುಗಿತು. ತುಮುಲಗಳು ತನ್ನೊಳಗೆ ವರ್ತುಲಾಕಾರದಲ್ಲಿ ಓಡುತ್ತಿದ್ದ ಓಟಕ್ಕೆ ತಲೆ ಗಿರ್‍ರನೆ ತಿರುಗಿದಂತಾಯಿತು. ತತ್ತರಿಸಿ ಎದ್ದು ನಿಂತವನಿಗೆ ಅಮ್ಮನ ಹಾಸಿಗೆಯ ಕಡೆಯಿಂದ ನರಳಿಕೆಯಂಥ ಸಣ್ಣ ಗೊರಕೆಯ ಸದ್ದು ಹೊರಡುತ್ತಿದ್ದದ್ದು ಕೇಳಿಸಿತು. ಹೀಗೆ ಎದ್ದವನು ತಲೆಬಾಗಿಲು ತೆರೆದು ಹೊರಬರುವ ಹೊತ್ತಿಗೆ ಆಗಲೇ ಸೂರ್ಯ ತನ್ನ ಕೆಂಪನ್ನು ಕಳೆದುಕೊಂಡು ಬಿಳಿಯ ಬಣ್ಣಕ್ಕೆ ತಿರುಗುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT