ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಾಗಣೆ ತಡೆಗೆ ಹೋರಾಟ

Last Updated 8 ಜನವರಿ 2018, 6:20 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ನದಿ ಪಾತ್ರದಲ್ಲಿ ನಿಸರ್ಗದ ಸಂಪತ್ತು ಮರಳನ್ನು (ಉಸುಕು) ರಕ್ಷಿಸಲು ತಾಲ್ಲೂಕಿನ ಕೊಳ್ಳೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹಣಮಂತ ಭಂಗಿ ಕಾನೂನು ಹೋರಾಟ ನಡೆಸಿದ್ದಾರೆ.

‘ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಹಣ ಪಡೆದು ಮರಳು ತುಂಬಿದ ಲಾರಿಗಳನ್ನು ಚೆಕ್‌ಪೋಸ್ಟ್ ಮೂಲಕವೇ ಬಿಡುತ್ತಿದ್ದಾರೆ. ನಿಸರ್ಗದ ಸಂಪತ್ತು ಉಳಿಸುವಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವೆ.

ಈಚೆಗೆ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ ಅವರಿದ್ದ ವಿಭಾಗೀಯ ಪೀಠವು ಚೆಕ್‌ಪೋಸ್ಟ್‌ಗಳಲ್ಲಿ ಪ್ರಾಮಾ ಣಿಕ ಅಧಿಕಾರಿಗಳನ್ನು ನಿಯೋಜಿಸಿದರೆ ಮಾತ್ರ ರಾಜ್ಯದಲ್ಲಿ ಅಕ್ರಮ ಮರಳು ಸಾಗಣೆ ದಂಧೆ ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ’ ಎಂದು ಅರ್ಜಿದಾರ ಹಣಮಂತ ಭಂಗಿ ತಿಳಿಸಿದರು.

‘ಸುರಪುರ, ಶಹಾಪುರ ತಾಲ್ಲೂಕಿನಲ್ಲಿ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಆಯಾ ಗ್ರಾಮಸ್ಥರ ಜೊತೆಗೂಡಿ ಕೆಲ ವ್ಯಕ್ತಿಗಳು ಪೊಲೀಸರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಶಾಮೀಲಾಗಿ ನದಿಯಲ್ಲಿ ಜೆಸಿಬಿ ಬಳಸಿ ಮರಳನ್ನು ಲಾರಿಯಲ್ಲಿ ತುಂಬುತ್ತಿದ್ದಾರೆ.

ಇದರ ತಡೆಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡು ದಾಖಲೆಗಳನ್ನು ಸಂಗ್ರಹಿಸಿದೆ. ಜೀವದ ಹಂಗು ತೊರೆದು ನದಿಯಲ್ಲಿ ಮರಳು ತುಂಬುವ ಚಿತ್ರವನ್ನು ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದೆ. ಆದರೆ, ಪ್ರಯೋಜನವಾಗಲಿಲ್ಲ. ಬದಲಿಗೆ ನನಗೇ ಗದರಿಸಿ ಕಳುಹಿಸಿದರು. ಇದರಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತಾತ್ಕಾಲಿಕವಾಗಿ ಯಶಸ್ವಿಯಾಗಿರುವೆ’ ಎನ್ನುತ್ತಾರೆ ಅವರು.

2ನೇ ಅರ್ಜಿ: ‘2014ರಲ್ಲಿ ಹೈಕೋರ್ಟ್‌ನಲ್ಲಿ ಮರಳು ಗಣಿಗಾರಿಕೆ ತಡೆಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೆ. ಮರಳು ನಿರ್ವಹಣಾ ಸಮಿತಿ ಅಧ್ಯಕ್ಷರಾಗಿದ್ದ ಅಂದಿನ ಜಿಲ್ಲಾಧಿಕಾರಿ ಮನೋಜ್ ಜೈನ್ ಅವರು ಮರಳು ಸಾಗಣೆ ತಡೆಗಟ್ಟದಿದ್ದಾಗ ನ್ಯಾಯಾಂಗ ನಿಂದನಾ ಅರ್ಜಿಯನ್ನು ಸಲ್ಲಿಸಿದೆ. ಆಗ ಜಿಲ್ಲಾಧಿಕಾರಿ ಕ್ಷಮಾಪಣೆ ಕೋರಿಕೆಯ ಪತ್ರ ನೀಡಿದ್ದರು. ಕೆಲ ದಿನದಲ್ಲಿ ಅವರು ವರ್ಗವಾದರು’ ಎಂದು ನೆನಪಿಸುತ್ತಾರೆ ಹಣಮಂತ ಭಂಗಿ.

‘ಸಾರ್ವಜನಿಕ ಸ್ವತ್ತು ಹಾಗೂ ಹಿತಾಸಕ್ತಿಯನ್ನು ಕಾಪಾಡಲು ಪ್ರತಿಭಟನೆ, ರಸ್ತೆತಡೆ ಹಾಗೂ ಜನ ಸಂಘಟನೆಯ ಅಗತ್ಯವಿಲ್ಲ. ನಮ್ಮ ಹೋರಾಟ ಸತ್ಯ ಹಾಗೂ ನ್ಯಾಯದ ಹಾದಿಯಲ್ಲಿ ಇದ್ದರೆ ಎಂತಹ ಸಮಸ್ಯೆಯನ್ನೂ ಎದುರಿಸಲು ಸಾಧ್ಯ. ಹೋರಾಟಕ್ಕೆ ಹೆಚ್ಚು ಓದು ಅಗತ್ಯವಿಲ್ಲ. ನಾನು ಕೇವಲ 6ನೇ ತರಗತಿ ಅಭ್ಯಾಸ ಮಾಡಿದ್ದೇನೆ’ ಎನ್ನುತ್ತಾರೆ ಅವರು.

* * 

ಮರಳು ಗಣಿಗಾರಿಕೆ ತಡೆ ಹೋರಾಟಕ್ಕೆ ಕೆಲ ದುಷ್ಟಶಕ್ತಿಗಳು ಜೀವ ಬೆದರಿಕೆ <br/>ಹಾಕುತ್ತಿವೆ. ಬೆದರಿಕೆಗೆ ಬಗ್ಗದೆ ನಿರಂತರ ಹೋರಾಟ ಮುಂದುವರೆಸಿರುವೆ.
ಹಣಮಂತ ಭಂಗಿ
ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT