ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಜತೆ ಪ್ರಿಯಕರನ ಕಂಡು ಆಘಾತ: ವಾಗ್ವಾದ ನಡೆಸುತ್ತಲೇ ಮೆಟ್ಟಿಲುಗಳ ಮೇಲಿಂದ ಬಿದ್ದು ಮೃತಪಟ್ಟ ತಂದೆ

Last Updated 9 ಜನವರಿ 2018, 15:24 IST
ಅಕ್ಷರ ಗಾತ್ರ

ನೋಯ್ಡಾ: ಮಗಳು ಮತ್ತು ಆತನ ಪ್ರಿಯಕರನೊಂದಿಗೆ ವಾಗ್ವಾದ ನಡೆಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮೂರನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದ ವ್ಯಕ್ತಿಯೊಬ್ಬರು ಸೋಮವಾರ ತಡರಾತ್ರಿ ಮೃತಪಟ್ಟಿರುವ ಘಟನೆ ಸಮೀಪದ ಅಟ್ಟಾ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ ಸಾಹು(45) ಸಾವಿಗೀಡಾದವರು. ಘಟನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಅವರ ಪತ್ನಿ ಗಾಯತ್ರಿ ಇಲ್ಲಿನ 20ನೇ ವಲಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಗಾಯತ್ರಿ ಅವರ ಹೇಳಿಕೆಯ ಆಧಾರದಲ್ಲಿ ಸಾಹು ಪುತ್ರಿ ಪೂಜಾ ಸಾಹುವನ್ನು(21) ಬಂಧಿಸಿದ್ದೇವೆ. ಸದ್ಯ ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ಧರ್ಮೇಂದ್ರನಿಗಾಗಿ(24) ಹುಡುಕಾಟ ಮುಂದುವರಿಸಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಠಾಣಾಧಿಕಾರಿ ಅನಿಲ್‌ ಕುಮಾರ್‌ ಶಾಯ್‌ ತಿಳಿಸಿದ್ದಾರೆ.

ವಿಶ್ವನಾಥ ಅವರ ಕುಟುಂಬ ವಾಸವಿದ್ದ ಕಟ್ಟಡದಲ್ಲೇ ಧರ್ಮೇಂದ್ರ ವಾಸವಿದ್ದ. ಪೂಜಾ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಧರ್ಮೇಂದ್ರ ಸ್ಥಳೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

ಘಟನೆ ವಿವರ: ಭಾನುವಾರ ರಾತ್ರಿ ಮನೆಯವರೆಲ್ಲ ಮಲಗಿದ ಬಳಿಕ ಧರ್ಮೇಂದ್ರ, ಪೂಜಾ ಕೊಠಡಿ ಸೇರಿಕೊಂಡಿದ್ದ. ಮುಂಜಾನೆ 4 ಗಂಟೆ ಸುಮಾರಿಗೆ ನೈಸರ್ಗಿಕ ಕರೆಗಾಗಿ ವಿಶ್ವನಾಥ ಅವರು ಕೊಠಡಿಯಿಂದ ಹೊರಬಂದಾಗ ಮಗಳ ಕೊಠಡಿಯಲ್ಲಿ ಯಾರೋ ಇದ್ದಾರೆ ಎಂದು ಅನುಮಾನಗೊಂಡಿದ್ದರು.

ಕೊಠಡಿ ಪ್ರವೇಶಿಸಿದಾಗ ಧರ್ಮೇಂದ್ರ ಕೊಠಡಿಯಲ್ಲಿರುವುದು ಗೊತ್ತಾಗಿದೆ. ಆತನಿಗೆ ಕೊಠಡಿಯಿಂದ ಹೊರನಡೆಯುವಂತೆ ಸೂಚಿಸಿದ್ದಾರೆ. ಇದರಿಂದ ಮೂವರ ನಡುವೆ ವಸತಿ ಕಟ್ಟಡದ ಮೂರನೇ ಅಂತಸ್ತಿನ ಮೆಟ್ಟಿಲುಗಳ ಮೇಲೆ ಭಾರಿ ವಾಗ್ವಾದ ನಡೆದಿದೆ. ವಾಗ್ವಾದ ನಡೆಯುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ವಿಶ್ವನಾಥ ಕೆಳಗೆ ಬಿದ್ದಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಇಲ್ಲಿನ 30ನೇ ವಲಯದಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ದೆಹಲಿಯ ಸಫ್ದಾರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ತಡರಾತ್ರಿ 2.30ರ ಸುಮಾರಿಗೆ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT