ಆರ್ಥಿಕ ಪರಿಸ್ಥಿತಿಯಲ್ಲಿ ತೀವ್ರ ಸುಧಾರಣೆ (ಜಯಶೀಲರಾವ್ ಅವರಿಂದ)
ಲಾಲ್ಬಹಾದುರ್ನಗರ, ಜ. 9– ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಶುಭ ಸೂಚನೆಗಳು ಕಂಡು ಬರುತ್ತಿವೆಯೆಂದು ಉಪ ಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿಯವರು ಇಂದು ಇಲ್ಲಿ ತಿಳಿಸಿದರು.
ಚೀನ ಪಾಕಿಸ್ತಾನದ ದಾಳಿ ಮತ್ತು ಕಳೆದ ಎರಡು ವರ್ಷದಿಂದ ಅನುಭವಿಸಿದ ಕ್ಷಾಮದ ಬವಣೆಯಿಂದ ಸೊರಗಿ ಹೋಗಿದ್ದ ಆರ್ಥಿಕ ಪರಿಸ್ಥಿತಿ ಈಗ ಚೇತರಿಸಿಕೊಳ್ಳುತ್ತಿದೆ ಎಂದು ಶ್ರೀ ಮುರಾರಜಿ ದೇಸಾಯಿಯವರು ಕಾಂಗ್ರೆಸ್ ವಿಷಯ ನಿಯಾಮಕ ಸಮಿತಿಗೆ ತಿಳಿಸಿದರು.
ಎಸ್.ಎನ್. ಹರಕೆ ಬೆಂಬಲ ಪಡೆದವರೇ ಮುಖ್ಯಮಂತ್ರಿ?
ಲಾಲ್ಬಹಾದುರ್ನಗರ, ಜ. 9– ಮೈಸೂರು ಕಾಂಗ್ರೆಸ್ ಶಾಸನ ಪಕ್ಷದ ನಾಯಕತ್ವದ ಪ್ರಶ್ನೆಯನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಯಶಸ್ವಿಯಾಗಿ ಇತ್ಯರ್ಥಪಡಿಸುತ್ತಾರೆಂದು ಮೈಸೂರು ಕಾಂಗ್ರೆಸ್ ಸದಸ್ಯರು ತಮ್ಮ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಶ್ರೀ ನಿಜಲಿಂಗಪ್ಪನವರ ಹರಕೆ ಮತ್ತು ಬೆಂಬಲವನ್ನು ಪಡೆದ ವ್ಯಕ್ತಿ ಮಾತ್ರವೇ ಅವರ ಉತ್ತರಾಧಿಕಾರಿಯಾಗಲು ಸಾಧ್ಯ ಎಂದು ಪಕ್ಷದೊಳಗೆ ಭಾವಿಸಿರುವುದೇ ಅವರ ಆತ್ಮ ವಿಶ್ವಾಸಕ್ಕೆ ಆಧಾರ.
ಬೇಲೂರಿನಲ್ಲಿ ಅಂಗಡಿಗಳ ಮೇಲೆ ದಾಳಿ: ಲಾಠಿ ಪ್ರಹಾರ (ಪ್ರಜಾವಾಣಿ ಪ್ರತಿನಿಧಿಯಿಂದ)
ಬೇಲೂರು, ಜ. 9– ಸೋಮವಾರ ರಾತ್ರಿ ಇಲ್ಲಿನ ಒಂದು ಹೋಟೆಲ್, ಒಂದು ರೇಡಿಯೋ ಅಂಗಡಿ ಮತ್ತು ಇನ್ನೊಂದು ಸಣ್ಣ ಅಂಗಡಿಗೆ ಒಂದು ಕೋಮಿಗೆ ಸೇರಿದ ಜನರ ಗುಂಪೊಂದು ನುಗ್ಗಿ ಅಂಗಡಿಗಳಲ್ಲಿದ್ದ ಸಾಮಾನುಗಳನ್ನು ಪುಡಿಪುಡಿ ಮಾಡಿತೆಂದು ವರದಿಯಾಗಿದೆ.
ಕುದುರೆಮುಖ ಪ್ರಾಯೋಗಿಕ ಯೋಜನೆಗೆ ಕೇಂದ್ರದ ಒಪ್ಪಿಗೆ
ಬೆಂಗಳೂರು, ಜ. 9– ಬಹುದಿನಗಳಿಂದ ಮಾತುಗಳಲ್ಲೇ ಉಳಿದಿರುವ 90 ಕೋಟಿ ರೂಪಾಯಿಗಳ ಕುದುರೆಮುಖ ಅದುರು ಅಭಿವೃದ್ಧಿ ಯೋಜನೆಯ ಭವಿಷ್ಯವನ್ನು ನಿರ್ಧರಿಸುವ ಒಂದು ಕೋಟಿ ರೂಪಾಯಿಗಳ ಪ್ರಾಯೋಗಿಕ ಕಾರ್ಯ ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಇಂದಿರಾ ಗಾಂಧಿಗೆ ಇಡೀ ರಾಷ್ಟ್ರದ ಬೆಂಬಲವಿದೆ: ಎಸ್ಸೆನ್
ಹೈದರಾಬಾದ್, ಜ. 9– ಇಡೀ ರಾಷ್ಟ್ರವೇ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಬೆಂಬಲವಾಗಿ ನಿಂತಿದೆಯೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಘೋಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.