ಮಂಗಳೂರು: ‘ರಾಜ್ಯದಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಯನ್ನು ನಿಷೇಧ ಗೊಳಿಸುವಂತೆ ಬಿಜೆಪಿ ಬೊಬ್ಬೆ ಹಾಕು ತ್ತಿದೆ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ನೀವೇ ಅದನ್ನು ನಿಷೇಧ ಮಾಡಿ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾ ಮಯ್ಯ ಸರ್ಕಾರ ಅಧಿಕಾರಕ್ಕೇರಿ 4 ವರ್ಷ 9 ತಿಂಗಳು ಮುಗಿದಿದೆ. ಇನ್ನು ಕೇವಲ 100 ದಿನಗಳು ಬಾಕಿ ಇವೆ. ನಮ್ಮ ಅವಧಿಯಲ್ಲಿ ಹಗರಣ ರಹಿತ, ಸ್ಥಿರ ಸರ್ಕಾರವನ್ನು ನೀಡಿದ್ದೇವೆ. ಯಾವುದೇ ಜನವಿರೋಧಿ ನೀತಿಗಳನ್ನು ಜಾರಿಗೊಳಿಸದೇ ಜನಸ್ನೇಹಿ ಸರ್ಕಾರ ವನ್ನು ನೀಡಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸನ್ನು ಮುಕ್ತ ಮಾಡುತ್ತೇವೆ ಎಂಬ ಅಭಿಯಾನ ಆರಂಭಿಸಿದ್ದು, ಜನರು ಅದಕ್ಕೆ ಬೆಂಬಲ ನೀಡಲಿಲ್ಲ ಎಂದರು.
ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂ ರಪ್ಪ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯದ ಇತರ ನಾಯಕರು ಭಾಗವಹಿಸದಿರು ವುದಕ್ಕೆ ಕೇಂದ್ರದ ನಾಯಕರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅದೊಂದು ದೊಡ್ಡ ಫ್ಲಾಪ್ ಷೋ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಬಂದು ರಸ್ತೆ ತಡೆ ಮಾಡಿ, ಕೋಮು ಗಲಭೆ ಮಾಡಿ ಎನ್ನುವ ಮೂಲಕ ಧರ್ಮಧರ್ಮಗಳ
ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಿ ಕೊಲೆ ನಡೆದರೂ ಅದನ್ನು ರಾಜಕೀಯ, ಧಾರ್ಮಿಕ, ಜಾತೀಯ ಬಣ್ಣ ಹಚ್ಚಿ ಅಶಾಂತಿಗೆ ಕಾರಣವಾಗುತ್ತಾರೆ. ಸಿದ್ದರಾಮಯ್ಯ ಸರ್ಕಾರವನ್ನು ಹಿಂದೂ ವಿರೋಧಿ ಸರ್ಕಾರ ಎಂದು ಹೇಳುತ್ತಾರೆ. ಸರ್ಕಾರದಡಿಯಲ್ಲಿ ಶೇಕಡಾ 95ರಷ್ಟು ಜನ ಹಿಂದೂಗಳು ಕೆಲಸ ಮಾಡುತ್ತಿದ್ದಾರೆ. ಅದು ಹೇಗೆ ಹಿಂದೂ ವಿರೋಧಿ ಸರ್ಕಾರವಾಗುತ್ತದೆ ಎಂದು ಪ್ರಶ್ನಿಸಿದರು.
‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 3 ಲಕ್ಷ ಕೋಟಿ ನೀಡಿದ್ದೇವೆ ಅದನ್ನು ಏನು ಮಾಡಿದ್ದೀರಾ ಎಂದು ಕೇಳಲು ನೀವು ಯಾರು. ನಮ್ಮ ಸರ್ಕಾರದ ತೆರಿಗೆ ಹಣದ ಪಾಲನ್ನು ಕೇಳಿದ್ದೇವೆ. ಅದು ನಮ್ಮ ಹಕ್ಕು. ನೀವು ನಮ್ಮ ರಾಜ್ಯ ಬಿಟ್ಟು ಉಳಿದ ರಾಜ್ಯಗಳಿಗೆ ಎಷ್ಟೆಷ್ಟು ಹಣ ನೀಡಿದ್ದೀರಿ ಎಂಬುದರ ಬಗ್ಗೆ ದಾಖಲೆಯೊಂದಿಗೆ ಬನ್ನಿ. ಆಗ ನಿಮ್ಮ ಬಂಡವಾಳ ತಿಳಿಯುತ್ತದೆ’ ಎಂದು ಹೇಳಿದರು.
ಇದೇ ವೇಳೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ 5 ಜನರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹4 ಲಕ್ಷದ 15 ಸಾವಿರ ಪರಿಹಾರದ ಚೆಕ್ ನೀಡಿದರು. ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೋಡಿಜಾಲ್, ಸಂಜೀವ್ ಪಾಂಡೇಶ್ವರ್, ಪುನೀತ್ ಶೆಟ್ಟಿ, ಸಿರಿಲ್ ಡಿ’ಸೋಜ, ಆರೀಫ್, ಸದಾಶಿವ ಬಂಗೇರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.