ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರದನಗಳ ಕುರಿತ ನೂರೆಂಟು ನೆನಪುಗಳು

ಭೂಮಿಕಾ ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ – 2018ರ ಫಲಿತಾಂಶ
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ನಮ್ಮ ಊರಿನಲ್ಲಿ ನಾಟಿ ಹಸುವಿಗೆ ಊರದನ ಎಂದು ಕರೆಯುತ್ತೇವೆ. ತೊಂಬತ್ತರ ದಶಕದ ಮಾತು. ಆಗ ನನ್ನ ಮನೆಯಲ್ಲಿ ಮತ್ತು ನಮ್ಮ ಊರಿನಲ್ಲಿ ಊರದನಗಳು ಮಾತ್ರ ಇದ್ದವು. ಎಲ್ಲವೂ ಮಲೆನಾಡು ಗಿಡ್ಡ ಜಾತಿಯವು. ಆಗಿನ್ನೂ ಅಧಿಕ ಹಾಲು ಕೊಡುವ ಜರ್ಸಿ, ಎಚ್.ಎಫ್. ತಳಿಗಳ ಪ್ರವೇಶ ಆಗಿರಲಿಲ್ಲ. ಅವುಗಳಿಗೆ ಈಗಿನ ಹಸುಗಳಿಗೆ ಕೊಡುವಂತೆ ಬಕೆಟ್ ಬಕೆಟ್ ಹಿಂಡಿ ತಿನ್ನಿಸುವ ಕ್ರಮವೂ ಇರಲಿಲ್ಲ. ಅಕ್ಕಚ್ಚು ಕೊಟ್ಟರೆ ಮುಗಿಯಿತು. ಅದೇ ದೊಡ್ಡ ಪೌಷ್ಠಿಕಾಂಶವುಳ್ಳ ಆಹಾರ. ಅಕ್ಕಚ್ಚು ಎಂದರೆ ಮತ್ತೇನಲ್ಲ ಅಕ್ಕಿ-ಬೆಣ್ಣೆ ತೊಳೆದ ನೀರು, ಅನ್ನ ಬಸಿದ ಗಂಜಿ, ನಿನ್ನೆಯ ಸಾರು-ಸಾಂಬಾರು-ಅನ್ನ, ಹೆಚ್ಚಾಗಿ ಉಳಿದ ಮಜ್ಜಿಗೆ ಇವುಗಳನ್ನೆಲ್ಲ ಎಸೆಯದೆ ಒಂದು ದೊಡ್ಡ ಬಾಲ್ದಿಗೆ ಹಾಕಿಟ್ಟು ಹಸುವಿಗೆ ಕುಡಿಯಲು ಕೊಡುವ ಸಮಯದಲ್ಲಿ ಅದಕ್ಕೆ ಸ್ವಲ್ಪ ತೌಡು, ನೀರು, ಉಪ್ಪು ಸೇರಿಸುವುದು. ತೆಳ್ಳಗೆಯೂ ಅಲ್ಲದ ಗಟ್ಟಿಯೂ ಅಲ್ಲದ ಈ ಪಾಕವನ್ನು ಹಸುಗಳು ಇಷ್ಟಪಟ್ಟು ಚಪ್ಪರಿಸಿ ಕುಡಿಯುತ್ತಿದ್ದವು. ಬಾಲ್ದಿ ಸದ್ದು ಮಾಡಿದರೆ ಸಾಕು ಓಡೋಡಿ ಬರುತ್ತಿದ್ದವು. ಆಮೇಲೆ ಒಂದು ಸೂಡಿ ಬೈಹುಲ್ಲನ್ನೋ, ಸ್ವಲ್ಪ ಹಸಿರು ಹುಲ್ಲನ್ನೋ ಹಾಕಿದರೆ ಸಾಕಿತ್ತು. ಅವು ಸಂತೃಪ್ತಿಯಿಂದ ಮೆಲುಕಾಡುತ್ತಾ ಮಲಗಿಕೊಳ್ಳುತ್ತಿದ್ದವು.

ಆಗ ಊರದನಗಳನ್ನು ಯಾರೂ ಕಟ್ಟಿ ಹಾಕಿ ಸಾಕುತ್ತಿರಲಿಲ್ಲ. ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲೇ ಹಾಲು ಕರೆದುಕೊಂಡಾದ ಮೇಲೆ ಹಟ್ಟಿ ಬಾಗಿಲು ತೆರೆದರೆ ಸಾಕು, ಸಾಲಾಗಿ ಶಿಸ್ತಿನ ಸಿಪಾಯಿಗಳ ಹಾಗೆ ಅವೇ ಕಾಡಿನ ದಾರಿ ಹಿಡಿದು ನಡೆಯುತ್ತಿದ್ದವು. ಮತ್ತೆ ಅವು ಬರುತ್ತಿದ್ದದ್ದು ಗೋಧೂಳಿ ಸಮಯಕ್ಕೆ. ಕೆಲವೊಮ್ಮೆ ಚಂದ್ರ ಕಾಣಿಸಿಕೊಂಡ ನಂತರ. ಎಷ್ಟೇ ಹೊತ್ತಿಗೆ ಬರಲಿ ಅವುಗಳ ಹಾಲು ಹಿಂಡುವ ಕೆಲಸವನ್ನು ಅತ್ತೆ ಗೊಣಗದೆ ಶ್ರದ್ಧೆಯಿಂದ ಮಾಡುತ್ತಿದ್ದರು. ಒಮ್ಮೊಮ್ಮೆ ನಡುರಾತ್ರಿ ಹಸುಗಳು ಬಂದು ಹಟ್ಟಿ ಬಾಗಿಲಲ್ಲಿ ನಿಂತು `ಅಂಬಾ' ಎನ್ನುತ್ತಿದ್ದವು. ಹಸುಗಳ ಹಾದಿ ಕಾದುಕಾದು ಆಗಷ್ಟೇ ದಿಂಬಿಗೆ ತಲೆ ಕೊಟ್ಟ ಅತ್ತೆ `ಬಂದೇ' ಎಂದು ಹಸುಗಳಿಗಿಂತ ದೊಡ್ಡ ದನಿಯಲ್ಲಿ ಕೂಗಿಕೊಳ್ಳುತ್ತ ಒಂದು ಕೈಯಲ್ಲಿ ನೀರು ತುಂಬಿದ ಚೆಂಬು, ಇನ್ನೊಂದು ಕೈಯಲ್ಲಿ ಚಿಮಣಿ ದೀಪ ಹಿಡಿದು ಹಾಲು ಕರೆಯಲು ಹೊರಡುತ್ತಿದ್ದರು. ನಿದ್ದೆಯ ಮಂಪರಿನಲ್ಲೇ ಮಾವ `ಜಾಗ್ರತೆ, ಚಿಮಣಿ ದೀಪ ಒಣಗಿದ ಹುಲ್ಲಿಗೆ ತಾಗಿ ಮಾಡಿಗೆ ಬೆಂಕಿ ಹಿಡಿಯುವ ಸಾಧ್ಯತೆ ಇದೆ' ಎಂದು ಪ್ರತಿಬಾರಿ ಹೊಸದೆಂಬಂತೆ ಹೇಳುತ್ತಿದ್ದರು. ಆಗ ಇದ್ದದ್ದು ಒಂದೆರಡು ಹಸುಗಳಲ್ಲ. 25-30 ಇತ್ತು. ಎಲ್ಲದಕ್ಕೂ ಒಂದೊಂದು ಚಂದದ ಹೆಸರು. ಗಂಗೆ, ಗೌರಿ, ಕಾವೇರಿ, ಯಮುನೆ, ಕಪಿಲೆ, ಬೆಳ್ಳಿ, ಕೆಂಪಿ, ಕಾಳಿ, ಜಾನಕಿ, ಭಾಗ್ಯ, ಸೀತೆ... ಹೀಗೆ. ನಾವು ಕಾಳಿ ಎಂದು ಕರೆದರೆ ಆ ಹೆಸರಿನ ದನ ಏನು ಎಂಬಂತೆ ಕಿವಿ ನೆಟ್ಟಗೆ ಮಾಡಿ ನಮ್ಮನ್ನು ನೋಡುವುದೇ ಒಂದು ಸೊಗಸು. ಅವುಗಳನ್ನು ಸ್ವಲ್ಪವೇ ಗಾಳಿ, ಬೆಳಕು ಬರುವ ದೊಡ್ಡ ಗೂಡಿನಂಥ ಕೋಣೆಯೊಳಗೆ ಕೂಡಿ ಹಾಕುತ್ತಿದ್ದೆವು. ಕರುಗಳಿಗೆ ಬೇರೊಂದು ಕೋಣೆ. ನಾನು ಅತ್ತೆಗೆ ನನ್ನ ತವರು ಮನೆಯಲ್ಲಿರುವಂತೆ ತೆರೆದ ಹಟ್ಟಿ ಮಾಡಲು ಮದುವೆಯಾದ ಹೊಸದರಲ್ಲಿ ಹೇಳಿದ್ದೆ. ಅದಕ್ಕೆ ಅವರು `ನಿನ್ನ ಅಮ್ಮನ ಊರಾದರೆ ಪಟ್ಟಣ. ನಮ್ಮ ಊರು ದಟ್ಟ ಕಾಡು ಅಲ್ಲವಾ? ಮೊನ್ನೆ ಮೇಯಲು ಹೋದ ಬಾಣಂತಿ ಗಿರಿಜೆಯನ್ನು ಹುಲಿ ತಿಂದದ್ದು ನೆನಪಿಲ್ಲವಾ? ಅದರ ಕರು ಈಗಲೂ ತಾಯನ್ನು ನೆನೆಸಿಕೊಂಡು ಹೇಗೆ ಬೊಬ್ಬಿರಿಯುತ್ತದೆ ನೋಡು. ಇಲ್ಲಿ ಕೆಲವೊಮ್ಮೆ ರಾತ್ರಿ ಹಟ್ಟಿಗೇ ಬಂದು ಹುಲಿ ಹಸುವನ್ನು ಹಿಡಿದುಕೊಂಡು ಹೋಗುವುದೂ ಉಂಟು. ಹಾಗಾಗಿ ಮಾವ ಈ ತರದ ಹಟ್ಟಿ ಕಟ್ಟಿಸಿದ್ದಾರೆ' ಎಂದಿದ್ದರು.

ಒಂದು ಸಾರಿ ಅತ್ತೆ, ಮಾವ, ಗಂಡ ಜೊತೆಯಲ್ಲಿ ಏನೋ ಕಾರ್ಯದ ನಿಮಿತ್ತ ಬಂಧುಗಳ ಮನೆಗೆ ಹೋಗಿದ್ದರು. ಹಟ್ಟಿ ತುಂಬ ಕೆಸರಾಗಿತ್ತು. ಕೂಲಿಯವರ ಹತ್ತಿರ ಮನೆ ಎದುರು ದಟ್ಟವಾಗಿ ಬೆಳೆದಿದ್ದ ಬಸರಿ ಮರದ ಸೊಪ್ಪು ಕಡಿದು ತಂದು ಹಟ್ಟಿಗೆ ಹಾಕಲು ಹೇಳಿದೆ. ಕೆಲಸ ಮುಗಿಸಿ ಅವರು ಮನೆಗೆ ಹೋದರು. ಹೇಗೆಲ್ಲ ಸೊಪ್ಪು ಹಾಕಿದ್ದಾರೆ ಎಂದು ನೋಡಲು ನಾನು ಹಟ್ಟಿಗೆ ಹೋದೆ. ಮೂರ್ನಾಕು ಹಸುಗಳು ಅಡ್ಡ ಬಿದ್ದು ಹೊರಳಾಡುತ್ತಿದ್ದವು. ಬಾಯಲ್ಲಿ ನೊರೆ ಬರುತ್ತಿತ್ತು. ಇಲ್ಲಿವರೆಗೂ ಚೆನ್ನಾಗಿದ್ದ ಹಸುಗಳಿಗೆ ಇದ್ದಕ್ಕಿದ್ದ ಹಾಗೆ ಏನಾಯ್ತು? ಹುಚ್ಚುಗಿಚ್ಚು ಹಿಡಿಯಿತಾ? ಎಂದು ಗಾಬರಿ ಬಿದ್ದೆ. ಮನೆಯಲ್ಲಿ ನಾನೊಬ್ಬಳೆ. ಯಾರಲ್ಲಿ ಹೇಳುವುದು? ಏನು ಮಾಡುವುದು? ಒಂದೂ ತಿಳಿಯಲಿಲ್ಲ. ಆಗ ಈಗಿನಂತೆ ಫೋನ್, ಮೊಬೈಲ್ ಸೌಕರ್ಯ ಇರಲಿಲ್ಲ. ಗಂಡ ಬರುವುದನ್ನು ಕಾಯದ ಹೊರತು ಬೇರೆ ದಾರಿ ಇರಲಿಲ್ಲ. ಬಂದ ಮೇಲೆ ಅತ್ತೆ ನನಗೆ ಬಸರಿ ಮರದ ಸೊಪ್ಪು ಹಾಕಿಸಿದ್ದಕ್ಕೆ ಜೋರು ಮಾಡಿದರು. `ಅದನ್ನು ಹಸುಗಳು ತಿಂದರೆ ಅದರ ಮೇಣ ಹೊಟ್ಟೆಯಲ್ಲಿ ಗಟ್ಟಿಯಾಗಿ ಮೆಲುಕು ಹಾಕಲು ಆಗದೆ ಸಾಯುತ್ತವೆ. ಕೂಡಲೇ ಡಾಕ್ಟರನ್ನು ಕರೆದು ತಾ' ಎಂದು ಗಂಡನನ್ನು ಗೋಡಾಕ್ಟರ್ ಇರುವಲ್ಲಿಗೆ ಅಟ್ಟಿದರು. ಡಾಕ್ಟರೇನೋ ಬಂದರು. ಆದರೆ ಆ ಹಸುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ನೋವು ಇವತ್ತಿಗೂ ನನ್ನನ್ನು ಬಾಧಿಸುತ್ತದೆ.

ಹೀಗಿರಲು ಒಂದು ಮಳೆಗಾಲದಲ್ಲಿ ಲಚ್ಚುಮಿ ಎಂಬ ಹೆಸರಿನ ಗಬ್ಬದ ಹಸು ಬೆಳಗ್ಗೆ ಮೇಯಲು ಹೋದದ್ದು ರಾತ್ರಿಯಾದರೂ ಬರಲೇ ಇಲ್ಲ. ಒಂದು ದಿನವಾಯಿತು; ಎರಡು ದಿನವಾಯಿತು; ವಾರವಾಯಿತು ಪತ್ತೆಯೇ ಇಲ್ಲ. ಅದರ ಜೊತೆ ಹೋದ ದನಗಳೆಲ್ಲವೂ ಹಿಂತಿರುಗಿದ್ದವು. ಅತ್ತೆ ಕೆಲಸದ ಕರಿಯನನ್ನು ಹುಡುಕಲು ಕಳಿಸಿದರು. ಅವನು ಬೆಳಗ್ಗೆಯಿಂದ ಸಂಜೆವರೆಗೆ ಹುಡುಕಿದರೂ ಹಸು ಸಿಕ್ಕಲಿಲ್ಲ. ನಾನು ಹುಡುಕಲು ಹೊರಟೆ. ಜೋರು ಮಳೆಯನ್ನೂ ಲೆಕ್ಕಿಸದೆ `ಲಚ್ಚುಮೀ' ಎಂದು ಕರೆಯುತ್ತಾ ಕಾಡಲ್ಲಿ ಅಲೆಯತೊಡಗಿದೆ. ದೂರದಿಂದ `ಅಂಬಾ' ಎಂಬ ಧ್ವನಿ ಕೇಳಿಸಿತು. ಶಬ್ದ ಬಂದ ದಿಕ್ಕಿನತ್ತ ನಡೆದೆ. ಲಚ್ಚುಮಿ ಒಂದು ದೊಡ್ಡ ಮರದ ಅಡಿಯಲ್ಲಿ ಚಳಿಗೆ ನಡುಗುತ್ತ ಮುದುರಿ ನಿಂತಿತ್ತು. ಅದು ಒಂದೇ ಅಲ್ಲ ಜೊತೆಯಲ್ಲಿ ಚಿಗರೆ ಮರಿಯಂತಿರುವ ಮುದ್ದಾದ ಕರು. ಮೊಲೆ ತಿನ್ನುತ್ತಿತ್ತು. ಓಡುತ್ತಿತ್ತು. ಮತ್ತೆ ಬಂದು ಮೊಲೆ ತಿನ್ನುತ್ತಿತ್ತು. ಅದುವರೆಗೂ ಹಸುವಿನಂತೆ ಇದ್ದ ಹಸು ಈಗ ನನಗೆ `ಹೂಂ, ಹೂಂ' ಎಂದು ಹೂಂಕರಿಸುತ್ತ್ತ ಹಾಯಲು ಬಂದಿತು. ನಾನೆಲ್ಲಾದರು ಕರುವಿಗೆ ತೊಂದರೆ ಕೊಟ್ಟರೆ ಎಂಬ ಯೋಚನೆ ಅದಕ್ಕೆ. ಅಲ್ಲೇ ಇದ್ದ ಒಂದು ಕೋಲು ಹಿಡಿದು ಹಸುವನ್ನು ಮನೆಗೆ ಹೊರಡಿಸಿದೆ. ಜಪ್ಪಯ್ಯ ಎನ್ನಲಿಲ್ಲ. ಮಾಡುತ್ತೇನೆ ಇದಕ್ಕೆ ಉಪಾಯ ಎಂದು ಕರುವನ್ನು ಅವುಚಿ ಹಿಡಿದುಕೊಂಡು ಮನೆ ಕಡೆ ಓಟಕ್ಕಿತ್ತೆ. ಈಗ ಹಸುವೂ ಓಡುತ್ತಾ ನನ್ನನ್ನು ಹಿಂಬಾಲಿಸತೊಡಗಿತು. ಮತ್ತೊಂದು ಸಾರಿ ಇನ್ನೊಂದು ಹಸು ಮನೆಗೆ ಎರಡು ದಿನವಾದರೂ ಬಂದಿಲ್ಲ ಎಂದು ಕಾಡಲ್ಲಿ ಹುಡುಕಲು ಹೊರಟ ನನಗೆ ಕಂಡದ್ದು ಹುಲಿ ಅರ್ಧಂಬರ್ಧ ತಿಂದು ಬಿಟ್ಟ ಹಸುವಿನ ಕಳೇಬರ.

ನನ್ನ ಮದುವೆಯಾಗಿ ಸುಮಾರು ಐದಾರು ವರ್ಷ ಆಗುವಲ್ಲಿವರೆಗೂ ಅತ್ತೆಯೇ ಹಟ್ಟಿಯ ಸರ್ವಾಧಿಕಾರಿಯಾಗಿದ್ದರು. ನನಗೆ ಹಾಲು ಹಿಂಡುವುದು ಬಿಡಿ ಕೆಚ್ಚಲಿನ ಹತ್ತಿರ ಕೈ ಕೊಂಡುಹೋಗಲೂ ಭಯವಾಗುತ್ತಿತ್ತು. ಒಮ್ಮೆ ಅತ್ತೆ ಮಗಳ ಮನೆಗೆ ಬಾಣಂತನಕ್ಕೆಂದು ಎರಡು ತಿಂಗಳ ಮಟ್ಟಿಗೆ ಹೋಗಲೇಬೇಕಾಯಿತು. ಈಗ ಹಾಲು ಕರೆಯುವ ಜವಾಬ್ದಾರಿ ನನಗೆ. ನಾನು ಹೆದರಿ ಹೆದರಿ ಚೆಂಬು ಹಿಡಿದು ಕೆಚ್ಚಲಿಗೆ ನೀರು ಹಾಕಿ ತೊಳೆದು ಕರುವನ್ನೊಮ್ಮೆ ಅಗಿಯಲು ಬಿಟ್ಟು ಪುನ: ತೊಳೆದು ಇನ್ನೇನು ಹಾಲು ಹಿಂಡಲು ಶುರುಮಾಡಬೇಕು ಹಸು ಮುಖವನ್ನು ನನ್ನತ್ತ ತಿರುಗಿಸಿತು. ಹಾಂ, ಮುಗಿಯಿತು ನನ್ನ ಕತೆ. ಈಗ ಹಸು ಕೊಂಬಿನಿಂದ ನನ್ನನ್ನು ತಿವಿಯದೆ ಬಿಡುವುದಿಲ್ಲ ಅಂದುಕೊಂಡೆ. ಹೆದರಿಕೆಯಿಂದ ಎದೆ ಹೊಡೆದುಕೊಳ್ಳತೊಡಗಿತು. ಆದರೆ ಅದು ಹಾಗೇನೂ ಮಾಡದೆ ನನ್ನನ್ನು ಒಮ್ಮೆ ಮೂಸಿ ನೋಡಿ ತಲೆ ನೆಕ್ಕಿ ಮತ್ತೆ ಅಲುಗಾಡದೆ ನಿಂತಿತು. ನಾನು ಹಾಲು ಕರೆದಾದ ಮೇಲೆಯೇ ಅದು ಸ್ಥಾನಪಲ್ಲಟ ಮಾಡಿದ್ದು. ಆಮೇಲೆ ನನಗೆ ಹಸುಗಳ ಹೆದರಿಕೆ ಸಂಪೂರ್ಣವಾಗಿ ಹೋಯಿತು. ಅವುಗಳು ನನಗೆ ಮನೆ ಮಕ್ಕಳಂತಾದವು. ಅತ್ತೆ ಮಗಳ ಮನೆಯಿಂದೇನೋ ಬಂದರು. ಆದರೆ ಅಂದಿನಿಂದ ನಾನೇ ಹಟ್ಟಿಯ ಯಜಮಾನಿಯಾದೆ.

ಆ ಕಾಲದಲ್ಲಿ ಬಾಳಿ ಬದುಕಿದ ಬಂಗಾರಿ ಎಂಬ ಹೆಸರಿನ ಊರದನವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಹೆಸರಿಗೆ ತಕ್ಕಂತೆ ಬಂಗಾರದ ಬಣ್ಣದಿಂದ ಹೊಳೆವ ಅದಕ್ಕೆ ವಿಪರೀತ ಬುದ್ಧಿ. ಬಾಳೆಹಣ್ಣು ಎಂದರೆ ಪ್ರಾಣ. ಬಾಳೆಹಣ್ಣು ಎಂಬ ಹೆಸರು ಅದರ ಕಿವಿಗೆ ಬಿದ್ದರೆ ಸಾಕು `ಅಂಬಾ' ಎಂದು ಕೂಗುತ್ತಿತ್ತು. ಹಾಗೆಂದು ನಾವು ಬಾಳೆಹಣ್ಣು ಕೊಡಲು ಹೋದರೆ ತಿನ್ನುತ್ತಿರಲಿಲ್ಲ. ಅಲ್ಲಿರುವ ಎಲ್ಲ ಹಸುಗಳಿಗೆ ಮೊದಲು ಒಂದೊಂದು ಕೊಡಬೇಕಿತ್ತು. ಕೊನೆಗೆ ಅದಕ್ಕೆ. ಆಗ ಅದು ಇಡೀ ಗೊನೆ ತಿನ್ನಲೂ ತಯಾರು! ಅದಕ್ಕೆಂದೇ ಬಾಳೆಗೊನೆ ಕಡಿದು ಇಡುತ್ತಿದ್ದೆವು. ಹಲಸಿನ ಹಣ್ಣೆಂದರೆ ಎಲ್ಲ ಹಸುಗಳಿಗೂ ಇಷ್ಟ. ಹಟ್ಟಿಯಿಂದ ಎಷ್ಟೇ ದೂರ ಹಲಸಿನಹಣ್ಣು ತುಂಡುಮಾಡಿದರೂ ಅವುಗಳಿಗೆ ಗೊತ್ತಾಗಿಬಿಡುತ್ತಿತ್ತು. ತಮಗೂ ಕೊಡಬೇಕು ಎಂಬಂತೆ ಹಟ್ಟಿಯ ಮಾಡು ಹಾರಿಹೋಗುವಂತೆ ಕಿರುಚಾಡುತ್ತಿದ್ದವು. ಸೊಳೆಯನ್ನು ನಾವು ತಿಂದು ಎಲ್ಲದಕ್ಕೂ ಉಳಿದ ರಚ್ಚೆ, ಗೂಂಜು, ಬೀಜ ಕೊಟ್ಟ ಮೇಲೆಯೇ ಅವುಗಳ ಅರಚಾಟ ನಿಲ್ಲುತ್ತಿದ್ದದ್ದು.

ಹೋರಿ ಕರು ಹುಟ್ಟಿದ್ದನ್ನು ಸ್ವಲ್ಪ ದೊಡ್ಡದಾದ ಕೂಡಲೇ ಗದ್ದೆ ಬೇಸಾಯ ಮಾಡುವವರಿಗೆ ಕೊಡುತ್ತಿದ್ದೆವು. ಒಮ್ಮೆ ಹೀಗಾಯಿತು. ಸರ್ವಾಂಗ ಸುಂದರ ಗಂಡು ಕರುವೊಂದು ಹಟ್ಟಿಯಲ್ಲಿ ಹುಟ್ಟಿತು. ಅಂಥ ಚಂದದ ಕರುವನ್ನು ಎಂದಿನಂತೆ ಬೇರೆಯವರಿಗೆ ಕೊಡಲು ಮನಸ್ಸಾಗಲಿಲ್ಲ. ಕರು ಬೆಳೆದು ದೊಡ್ಡ ಹೋರಿಯಾಯಿತು. ಸಾಕಲು ಕಷ್ಟ ಎನಿಸತೊಡಗಿತು. ನನ್ನ ಸ್ನೇಹಿತರೊಬ್ಬರು ಹೇಳಿದರು `ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆಯಲ್ಲಿ ಶ್ರೀ ಕಾಲಭೈರವೇಶ್ವರ ಎಂಬ ಪುಣ್ಯಕ್ಷೇತ್ರವಿದೆ. ಅಲ್ಲಿ ಹೋರಿಗಳನ್ನು ಸಾಕುತ್ತಾರೆ. ದೈವೀ ಅಂಶವಿದ್ದ ಹೋರಿಗೆ ಸ್ವಾಮೀಜಿ ಪಟ್ಟ ಸಿಗುತ್ತದೆ'. ಇದನ್ನು ಕೇಳಿ ನನಗೆ ಸಕ್ಕರೆ ಹಾಲು ಕುಡಿದಂತಾಯಿತು. ನನ್ನ ಈ ಹೋರಿಗೆ ಸ್ವಾಮೀಜಿ ಪಟ್ಟ ಸಿಕ್ಕೇ ಸಿಗುತ್ತದೆ ಅಂದುಕೊಂಡೆ. ಏಕೆಂದರೆ ಅದಕ್ಕೆ ಹೋರಿಗಳ ತುಂಟಾಟ ಯಾವುದೂ ಇರಲಿಲ್ಲ. ಸದಾ ಶ್ರೀಮದ್ಗಾಂಭೀರ್ಯದಿಂದ ಇರುತ್ತಿತ್ತು. ಹಸುಗಳ ಹತ್ತಿರ ಹೋಗುವುದಿರಲಿ ಅವುಗಳನ್ನು ಕಂಡರೆ ಸಾಕು ಮಾರು ದೂರ ಓಡುತ್ತಿತ್ತು. ಹಿಂಡಿ, ಹುಲ್ಲು ತಿನ್ನುವ ಹಪಹಪಿಯೂ ಇರಲಿಲ್ಲ. ಚೂರು ಹಸಿ ಹುಲ್ಲು, ಒಂದು ಚೆಂಬು ನೀರು ಇಷ್ಟೇ ಅದರ ಆಹಾರವಾಗಿತ್ತು. ನಾನು `ಜಗದ್ಗುರು' ಎಂದೇ ಅದನ್ನು ಕರೆಯುತ್ತಿದ್ದೆ. ಎಷ್ಟು ಕಷ್ಟವಾದರೂ ಸರಿ ಅದನ್ನು ಕಾಲಭೈರವೇಶ್ವರನಿಗೇ ಸಮರ್ಪಿಸಬೇಕು ಎಂದು ನಿರ್ಧರಿಸಿದೆ. ಒಂದು ಮುಂಜಾವ ನನ್ನ ತಮ್ಮನೊಡಗೂಡಿ ಒಂದು ಗಾಡಿ ಮಾಡಿಕೊಂಡು ಅಲ್ಲಿಗೆ ಹೋದೆ. ತಲುಪುವಾಗ ಮುಸ್ಸಂಜೆಯಾಗಿತ್ತು. ಅಲ್ಲಿ ಒಂದು ಕಡೆ ಕ್ಷೇತ್ರಕ್ಕೆ ಕೊಟ್ಟ ಹಲವು ಹೋರಿಗಳಿದ್ದವು. ಉಕ್ಕಿ ಬರುವ ದು:ಖವನ್ನು ಅದುಮಿ ಹಿಡಿದು ನನ್ನ ಹೋರಿಯನ್ನು ಕಾರ್ಯಕರ್ತರಿಗೆ ಒಪ್ಪಿಸಿದೆ. ಅದು ಸ್ವಾಮೀಜಿ ಪಟ್ಟ ಅಲಂಕರಿಸುವ ಕನಸು ಕಾಣುತ್ತ ಸಾಕಲು ಕಾಣಿಕೆ ಡಬ್ಬಿಗೆ ಕಿಂಚಿತ್ ಹಣವನ್ನೂ ಹಾಕಿದೆ. ನನ್ನ ಕನಸು ಅವರಿಗೆ ಗೊತ್ತಾಗಿರಬೇಕು. ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಹೀಗೆ ಹೇಳಿದರು `ನೀವು ಇನ್ನೊಂದು ಸಾರಿ ಬರುವಾಗ ಇದನ್ನು ನೋಡಬೇಕೆಂದರೆ ನಿಮಗೆ ಸಿಗಲಾರದು. ನಾವು ಅದನ್ನು ಹೊಲ ಉಳುವವರಿಗೆ ಕೊಟ್ಟುಬಿಡುತ್ತೇವೆ. ಇಲ್ಲಿ ನಾಳೆ ಇರುವುದೆಂಬ ಗ್ಯಾರಂಟಿಯೂ ಇಲ್ಲ'. ನನಗೆ ತುಂಬ ನಿರಾಸೆಯಾಯಿತು. ಹಾಗಿದ್ದರೆ ಇಷ್ಟು ದೂರ ಬರಬೇಕಿತ್ತೇ, ಊರಲ್ಲೇ ಯಾರಿಗಾದರೂ ಗದ್ದೆ ಬೇಸಾಯ ಮಾಡುವವರಿಗೆ ಕೊಡಬಹುದಿತ್ತಲ್ಲ ಎಂದು ಮನ ಹೇಳಿತು. ಆದರೆ ನಾನು ಏನೂ ಮಾಡುವ ಹಾಗೆ ಇರಲಿಲ್ಲ. ಎಲ್ಲಾ ಆ ಕಾಲಭೈರವೇಶ್ವರನ ಮಹಿಮೆ ಅಂದುಕೊಂಡು ಸುಮ್ಮನಾದೆ.

ವರ್ಷಗಳುರುಳಿದವು. ಊರದನಗಳ ಸಂಖ್ಯೆ ಹಟ್ಟಿಯಲ್ಲಿ ಕಮ್ಮಿಯಾಗುತ್ತಾ ಬಂತು. ಇದಕ್ಕೆ ಕಾರಣ ಅವಕ್ಕೆ ಗಬ್ಬ ಧರಿಸಲು ಬೇಕಾದ ಹೋರಿಗಳು ಊರಿನಲ್ಲಿ ಇಲ್ಲದೆ ಆದದ್ದು. ಸಂಬಳದಲ್ಲಿ ಏರಿಕೆ, ಕೂಲಿಯಾಳುಗಳ ಅಲಭ್ಯತೆಯ ಪರಿಣಾಮ ಎಲ್ಲರೂ ಗದ್ದೆ ಬೇಸಾಯ ನಿಲ್ಲಿಸಿದ್ದರಿಂದ ಯಾರಿಗೂ ಹೋರಿಯ ಅಗತ್ಯ ಇರಲಿಲ್ಲ. ಅಷ್ಟು ಮಾತ್ರವಲ್ಲ; ಅವುಗಳು ಮೇಯುವ ಕಾಡನ್ನೂ ಜನಗಳು ಆಕ್ರಮಿಸಿ ಕೃಷಿಭೂಮಿಯನ್ನಾಗಿ ಪರಿವರ್ತಿಸಿ ಬೇಲಿ ಹಾಕಿದ್ದರು. ಈಗ ಹಸುಗಳನ್ನು ಕಟ್ಟಿ ಹಾಕಿಯೇ ಸಾಕಬೇಕಾದ ಅನಿವಾರ್ಯತೆ. ಊರದನಗಳನ್ನು ಕಟ್ಟಿ ಹಾಕಿ ಸಾಕಿದರೆ ಹಾಲು ಕಡಿಮೆ. ಅದು ಗಿಂಡಿ ತುಂಬ ಹಾಲು ಕೊಡಬೇಕಾದರೆ ಮೇಯಬೇಕು. ಮೇಯಲು ಮೊದಲಿನಂತೆ ಜಾಗ ಇಲ್ಲ. ಅದರ ಬದಲು ಜರ್ಸಿ ಅಥವಾ ಎಚ್. ಎಫ್. ಹಸುವನ್ನು ಸಾಕಿದರೆ ಕೊಡಗಟ್ಟಲೆ ಹಾಲು ಕರೆಯಬಹುದು ಎಂದು ನಾನು ಲೆಕ್ಕಾಚಾರ ಹಾಕಿ ಪಕ್ಕದ ಊರಿನಿಂದ ಎರಡು ಮಿಶ್ರತಳಿ ಹಸುವನ್ನು ತಂದು ಕಟ್ಟಿದೆ.

ಈಗ ಹಟ್ಟಿಯಲ್ಲಿ ಊರದನ ಇಲ್ಲ. ಅವುಗಳ ಕೊರಳ ಗೆಜ್ಜೆಯ ಕಿಣಿಕಿಣಿ ನಾದ ಇಲ್ಲ. ಬರೀ ನೆನಪುಗಳಷ್ಟೇ ನನ್ನ ಬಳಿ ಉಳಿದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT