ಕೆ.ಆರ್.ನಗರ: ಪಕ್ಷಾತೀತ, ಜ್ಯಾತ್ಯತೀತವಾಗಿ ಪ್ರತಿಯೊಬ್ಬರಿಗೂ ಸರ್ಕಾರಿ ಸವಲತ್ತು ತಲುಪಬೇಕು. ಅದರಂತೆ ನಾನು ಕೂಡ ಕೊಡಲು ಬದ್ಧನಾಗಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ತಾಲ್ಲೂಕಿನ ಚೌಕಹಳ್ಳಿ ಪರಿಶಿಷ್ಟರ ಕಾಲೊನಿಯಲ್ಲಿ ₹ 10 ಲಕ್ಷ ಮೊತ್ತದ ಎಸ್.ಸಿ.ಪಿ ಯೋಜನೆಯಡಿ ರಸ್ತೆ, ಚರಂಡಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಚೌಕಹಳ್ಳಿ ಪರಿಶಿಷ್ಟರ ಕಾಲೊನಿಯಲ್ಲಿ ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಅರ್ಹ 52 ಕುಟುಂಬಗಳಿಗೂ ಮನೆ ನೀಡಲಾಗುತ್ತದೆ. ಈ ಹಿಂದೆ ಭರವಸೆ ನೀಡಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಉಳಿಕೆ ರಸ್ತೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಲ ಪಡೆಯದೇ ಬ್ಯಾಂಕುಗಳಲ್ಲಿ ಹಣ ಉಳಿತಾಯ ಮಾಡಿದ ಖಾತೆ ದಾರರಿಗೆ ಬಡ್ಡಿರಹಿತ ಸಾಲ ಕೊಡಲು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ದ್ದೇನೆ. ಗ್ಯಾಸ್ ಸಂಪರ್ಕ ಹೊಂದದ ಕುಟುಂಬಗಳು ಇದ್ದರೆ ಅರ್ಜಿ ಸಲ್ಲಿಸಿದರೆ ಅದನ್ನೂ ಸಹ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಿಳಿಕೆರೆ– ಬೇಲೂರು ರಾಜ್ಯ ಹೆದ್ದಾರಿಯ ಚೌಕಹಳ್ಳಿ ಬಳಿ ಅಪಘಾತ ಗಳು ಹೆಚ್ಚಾಗುತ್ತಿವೆ. ತಿರುವಿನಲ್ಲಿ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಎಂದು ಭರವಸೆ ನೀಡಿದರು.
ತಾ.ಪಂ ಸದಸ್ಯ ಮಹದೇವ್, ಗ್ರಾ.ಪಂ ಸದಸ್ಯರಾದ ಚೌಕಹಳ್ಳಿ ರಾಜಣ್ಣ, ಅರಕೆರೆ ಕೃಷ್ಣಾನಂದ, ಶ್ವೇತಾ ಮಹದೇವ್, ಮುಖಂಡರಾದ ಚಂದಗಾಲು ನಂಜುಂಡಸ್ವಾಮಿ, ವಕೀಲ ಯೋಗೀಶ್, ಕಾಳೇನಹಳ್ಳಿ ಮಾಯಣ್ಣಗೌಡ, ಶಿವಣ್ಣ, ಅಣ್ಣಯ್ಯ, ಆನಂದ, ಗುತ್ತಿಗೆದಾರ ಮಂಜುನಾಥ್, ಎಂಜಿನಿಯರ್ ಟಿ.ಡಿ.ಪ್ರಸಾದ್ ಇತರರು ಇದ್ದರು.