ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯ ಲೋಕದ ಅಂಗಳಕೇರಿ...

Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಆಗಸದ ತುತ್ತತುದಿಯಲ್ಲಿ ಪಕ್ಷಿಯೊಂದು ಹಾರುತ್ತಿದೆ. ಕೊನೆಮೊದಲಿಲ್ಲದ ಆ ತುದಿ ಶಾಂತಿಯ ಬಯಲಿನಂತೆಯೂ ಕಡಲಿನಂತೆಯೂ ಕಾಣಿಸುತ್ತದೆ. ಪಕ್ಷಿಯೊಂದು ತನ್ನ ರೆಕ್ಕೆಗಳಿಂದ ಆ ಬಯಲನ್ನು ಕಡೆಯುತ್ತದೆ. ಅದು ಶಾಂತಿಯನ್ನು ಪ್ರತಿನಿಧಿಸುವ ಪಕ್ಷಿಯೆಂದೂ, ಅದರ ರೆಕ್ಕೆಗಳ ಮಂಥನದಲ್ಲಿ ಶಾಂತಿ ಉದ್ಭವಿಸುತ್ತದೆಂದೂ ಕಲ್ಪಿಸಿಕೊಳ್ಳಬಹುದು. ಆ ಪಕ್ಷಿಗೆ ಎರಡು ರೆಕ್ಕೆಗಳಿವೆ. ಒಂದು ರೆಕ್ಕೆ ಭಾರತ ಧ್ವಜದ ಬಣ್ಣಗಳನ್ನು ಹೊಂದಿದ್ದರೆ, ಇನ್ನೊಂದು ಅಮೆರಿಕ ಬಾವುಟದ ಬಣ್ಣಗಳಲ್ಲಿ ಅಲಂಕೃತಗೊಂಡಿದೆ.

ಇದು ಬೆಂಗಳೂರಿನ ಕಲಾವಿದ ಬಿ.ಡಿ. ಜಗದೀಶ್‍ ಅವರ ಮಹತ್ವಾಕಾಂಕ್ಷೆಯ ಕಲಾಕೃತಿ. ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆಗೆ ಕಲಾವಿದನೊಬ್ಬನ ಸೃಜನಶೀಲ ಪ್ರತಿಕ್ರಿಯೆಯಿದು. ಭಯೋತ್ಪಾದನೆಯ ಕರಾಳ ಹಸ್ತಗಳಿಂದ ಭೂಮಂಡಲವನ್ನು ರಕ್ಷಿಸಬೇಕೆನ್ನುವ ಇರಾದೆಯ ಕಲಾಕೃತಿ, ವಿಶ್ವಶಾಂತಿ ರಕ್ಷಣೆಯ ಜವಾಬ್ದಾರಿಯನ್ನು ಭಾರತ ಹಾಗೂ ಅಮೆರಿಕ ವಹಿಸಿಕೊಳ್ಳಬೇಕೆಂದು ಆಶಿಸುತ್ತದೆ. ಈ ದೇಶಗಳು ವಿಶ್ವಸಂಸ್ಥೆಯನ್ನು ಮುನ್ನಡೆಸಬೇಕೆಂದು ಹಂಬಲಿಸುತ್ತದೆ.

ಒಂದು ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ಬಂಡವಾಳಶಾಹಿ ದೇಶ. ಮತ್ತೊಂದು ಜಗತ್ತಿಗೆ ಬುದ್ಧ, ಗಾಂಧಿ, ಬಸವ ಮಾದರಿಗಳನ್ನು ಪರಿಚಯಿಸಿದ ದೇಶ. ಈ ವೈರುಧ್ಯಗಳ ಮುಖಾಮುಖಿಯ ಮೂಲಕ ಶಾಂತಿಯ ಸಮತೋಲನವನ್ನು ಸಾಧಿಸಬೇಕೆನ್ನುವ ಅಪೇಕ್ಷೆ ಕಲಾಕೃತಿಯ ಹಿನ್ನೆಲೆಯಲ್ಲಿ ಇರುವಂತಿದೆ.

ಜಗದೀಶ್‍ರ ಈ ತೈಲವರ್ಣ ಕಲಾಕೃತಿ ರೂಪುಗೊಂಡು ದಶಕವೇ ಕಳೆದಿದೆ. ಆದರೆ ದಿನದಿಂದ ದಿನಕ್ಕೆ ತಮ್ಮ ಕಲಾಕೃತಿ ಹೆಚ್ಚು ಸಮಕಾಲೀನ ಎಂದು ಅವರಿಗೆ ತೋರಿದೆ. ತಮ್ಮ ಕನಸು ವೈಯಕ್ತಿಕವಾಗಿ ಉಳಿಯದೆ, ಸಾರ್ವತ್ರಿಕಗೊಳ್ಳಬೇಕು ಎಂದೂ ಅವರಿಗನ್ನಿಸಿದೆ. ಆ ಕಾರಣದಿಂದಲೇ ತಮ್ಮ ಕಲಾಕೃತಿಯ ಆಶಯವನ್ನು ಜನಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್‍ ಕಲಾಕೃತಿಯ ಆಶಯವನ್ನು ಮೆಚ್ಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೇಟಿ ಮಾಡಿಸುವುದಾಗಿ ಜಗದೀಶ್‍ರಿಗೆ ಭರವಸೆ ನೀಡಿದ್ದಾರಂತೆ.

(ಬಿ.ಡಿ. ಜಗದೀಶ್)

ಜಾಗತಿಕ ವಿದ್ಯಮಾನಗಳಿಗೆ ಜಗದೀಶ್‍ ಸ್ಪಂದನ ಇದು ಮೊದಲೇನಲ್ಲ. 1997ರಲ್ಲಿ ಅವರು ರಚಿಸಿದ್ದ ಕಲಾಕೃತಿಯೊಂದು ಸಾಕಷ್ಟು ಸುದ್ದಿ ಮಾಡಿತ್ತು. 1995ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಅವರು, ಅಲ್ಲಿನ ವಿಶ್ವವಾಣಿಜ್ಯ ಕೇಂದ್ರ ಕಟ್ಟಡಗಳನ್ನು ಕಂಡು ಬೆರಗಾಗಿದ್ದರು. ಗಗನಚುಂಬಿ ಅವಳಿ ಕಟ್ಟಡಗಳ ಆಸುಪಾಸಿನಲ್ಲೇ ವಿಮಾನಗಳು ಹಾರಾಟ ನಡೆಸುವುದನ್ನು ಕಂಡಾಗ, ಅವುಗಳ ಸುರಕ್ಷತೆಯ ಬಗ್ಗೆ ಆತಂಕದ ಎಳೆಯೊಂದು ಅವರಲ್ಲಿ ಮೂಡಿತ್ತು. 1983ರಲ್ಲಿ, ಬೆಂಗಳೂರಿನಲ್ಲಿ ನಡೆದ ಗಂಗಾರಾಂ ಕಟ್ಟಡದ ದುರಂತ ಜಗದೀಶರ ಮನಸ್ಸಿನಲ್ಲಿತ್ತು. ಅಂತಹ ದುರಂತ ಅಮೆರಿಕದ ಅವಳಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಉಂಟಾದರೆ ಸಂಭವಿಸಬಹುದಾದ ಅನಾಹುತ ಅವರನ್ನು ಬೆಚ್ಚಿಬೀಳಿಸಿತ್ತು. ಹೀಗೆ ಕಾಡಲು ಶುರುವಾದ ಆತಂಕವನ್ನು 1997ರಲ್ಲಿ ಅವರು ಕಲಾಕೃತಿಯಾಗಿ ರೂಪಿಸಿದರು. ಈ ಕಲಾಕೃತಿ ಬೆಳಕಿಗೆ ಬಂದುದು 2001ರಲ್ಲಿ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದಾಗ.

ವಿಶ್ವ ವಾಣಿಜ್ಯ ಕೇಂದ್ರಗಳು ಉಗ್ರರ ದಾಳಿಗೆ ಸಿಲುಕಿ ನೆಲಸಮವಾಗುವ ನಾಲ್ಕು ವರ್ಷಗಳ ಮೊದಲೇ ಅದನ್ನು ಊಹಿಸಿದ್ದ ಕಲಾವಿದ ಮತ್ತು ಕಲಾಕೃತಿ ಮಾಧ್ಯಮಗಳ ಕಣ್ಣಿಗೆ ಬಿದ್ದವು. ಜಗದೀಶ್‍ರನ್ನು ತನಿಖೆಗೊಳಪಡಿಸಲಾಗುತ್ತದೆ ಎನ್ನುವ ಊಹಾಪೋಹಗಳೂ ಹಬ್ಬಿದ್ದವು.

ಜಗದೀಶ್‍ರ ಮತ್ತೊಂದು ಜನಪ್ರಿಯ ಕಲಾಕೃತಿ ಭಾರತ ಮತ್ತು ಪಾಕಿಸ್ತಾನದ ಸೌಹಾರ್ದಕ್ಕೆ ಸಂಬಂಧಿಸಿದ್ದು. ನೂರ್‍ ಫಾತಿಮಾ ಎನ್ನುವ ಬಾಲಕಿಯೊಬ್ಬಳು ಹೃದಯದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದ ಸುದ್ದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಉಭಯ ದೇಶಗಳ ನಡುವಣ ಸ್ನೇಹಸೇತುವೆಯ ರೂಪದಲ್ಲಿ ದೆಹಲಿ ಮತ್ತು ಲಾಹೋರ್‌ ನಡುವೆ ಸಂಚರಿಸುತ್ತಿದ್ದ ಬಸ್‌ನಲ್ಲಿ ನೂರ್‌ ಫಾತಿಮಾ ತನ್ನ ಪೋಷಕರೊಂದಿಗೆ 2003ರಲ್ಲಿ ಭಾರತಕ್ಕೆ ಬಂದಿದ್ದಳು. ಎರಡೂವರೆ ವರ್ಷದ ಈ ಬಾಲಕಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಈ ಘಟನೆಗೆ ಪ್ರತಿಕ್ರಿಯೆ ರೂಪದಲ್ಲಿ ಜಗದೀಶ್‍ ಕಲಾಕೃತಿಯೊಂದನ್ನು ರೂಪಿಸಿದ್ದರು. ಆ ಕಲಾಕೃತಿಯ ಪ್ರತಿಯೊಂದನ್ನು ಫಾತಿಮಾ ಕುಟುಂಬದವರು ಪಾಕಿಸ್ತಾನಕ್ಕೆ ಕೊಂಡೊಯ್ದಿದ್ದರು.

ಜಗದೀಶ್‍ರ ಮತ್ತೊಂದು ಪ್ರಮುಖ ಕಲಾಕೃತಿ ಇರಾನ್‍ ಮತ್ತು ಇರಾಕ್‍ ನಡುವಣ ಯುದ್ಧಕ್ಕೆ ಸಂಬಂಧಿಸಿದ್ದು. ಎರಡು ದೇಶಗಳ ಸಂಘರ್ಷವನ್ನು ಚಿತ್ರಿಸಿದ್ದ ಅವರು, ಯುದ್ಧ ಮನುಷ್ಯಕುಲಕ್ಕೆ ಉಂಟುಮಾಡುವ ಅನಾಹುತಗಳನ್ನು ಚಿತ್ರಿಸಿದ್ದರು. ಅಣುಬಾಂಬ್‍ ಬಳಕೆಯ ಅಪಾಯಗಳ ಕುರಿತ ಆತಂಕವೂ ಅವರ ಕಲಾಕೃತಿಗಳಲ್ಲಿತ್ತು.

ಕಲಾಕೃತಿಗಳ ಮೂಲಕ ಮನುಷ್ಯರ ನಡುವಣ ಅಡ್ಡಗೋಡೆಗಳನ್ನು ದಾಟುವ ಹಂಬಲವನ್ನು ನಿರಂತರವಾಗಿ ವ್ಯಕ್ತಪಡಿಸುತ್ತಿರುವ ಜಗದೀಶ್‍ ಮೂಲತಃ ಮಲೆನಾಡಿನವರು. ಕುವೆಂಪು ಅವರ ವಿಶ್ವಮಾನವ ಆದರ್ಶವನ್ನೇ ತಮ್ಮ ಕಲಾರಚನೆಯ ಭಿತ್ತಿಯನ್ನಾಗಿಸಿಕೊಂಡವರು. ತೀರ್ಥಹಳ್ಳಿ ತಾಲ್ಲೂಕಿನ ಬಾಣಂಕಿಯವರಾದ ಅವರ ಮೇಲೆ, ಮಲೆನಾಡಿನ ಪರಿಸರ ಗಾಢ ಪ್ರಭಾವ ಬೀರಿದೆ. ಆ ಪ್ರಭಾವ ಶಾಂತಿ- ಸೌಹಾರ್ದದ ಕುರಿತ ಅವರ ಕನವರಿಕೆಗೆ ಕಾರಣಗಳಲ್ಲೊಂದಾಗಿದೆ. ಮಲೆನಾಡಿನ ಪರಿಸರದಲ್ಲಾದ ಬದಲಾವಣೆಗಳು ಅವರ ಕುಂಚದಲ್ಲಿ ಮೂಡಿವೆ.

ಹಡಪದ್‍ ಮೇಷ್ಟ್ರ ಗರಡಿಯಲ್ಲಿ ಪಳಗಿರುವ ಅವರು, ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಕಲಾವಿದರಾಗಿ ದುಡಿದು ನಿವೃತ್ತರಾಗಿದ್ದಾರೆ. ಈಗವರು ಪೂರ್ಣಕಾಲಿಕ ಕಲಾವಿದರು. ಕಲಾಕೃತಿ ರಚಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ, ತಮ್ಮ ಅಭಿವ್ಯಕ್ತಿಯ ಆಶಯಗಳನ್ನು ಸಹೃದಯರಿಗೆ ತಲುಪಿಸಬೇಕೆನ್ನುವ ತುಡಿತ ಕೂಡ ಅವರಲ್ಲಿದೆ. ಆ ಕಾರಣದಿಂದಲೇ, ಜಾಗತಿಕ ಶಾಂತಿಯ ಆಶಯವನ್ನು ಬಿಂಬಿಸುವ ಕಲಾಕೃತಿಯನ್ನು ಭಾಷೆ- ದೇಶಗಳ ಗಡಿ ದಾಟಿ ಸಹೃದಯರಿಗೆ ತಲುಪಿಸಬೇಕೆಂಬ ಕನಸು ಕಾಣುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT