ಆನೇಕಲ್: ಬಲಿಷ್ಠ ಭಾರತವನ್ನು ನಿರ್ಮಾಣ ಮಾಡುವ ಕನಸನ್ನು ಸ್ವಾಮಿ ವಿವೇಕಾನಂದರು ಕಂಡಿದ್ದರು. ಹಾಗಾಗಿ ಯುವಕರು ಅವರ ಕನಸನ್ನು ನನಸು ಮಾಡಿ ಭಾರತ ವಿಶ್ವ ಗುರುವಾಗಲು ಶ್ರಮಿಸಬೇಕು ಎಂದು ಜಿಎಂಆರ್ ಎಲೈಟ್ ಅಕಾಡೆಮಿ ಸಂಸ್ಥಾಪಕ ಜಿ.ಮುನಿರಾಜು ತಿಳಿಸಿದರು.
ಅವರು ಪಟ್ಟಣದಲ್ಲಿ ಜಾಗೃತ ಯುವ ಭಾರತ ಸಂಘಟನೆಯ ವಾರ್ಷಿಕೋತ್ಸವ ಹಾಗೂ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯುವಕರು ಬಲಿಷ್ಠ ಭಾರತ ನಿರ್ಮಾಣ ಮಾಡಲು ಕೊಡುಗೆ ನೀಡುವುದಾಗಿ ಹಾಗೂ ದುಶ್ಚಟಗಳಿಂದ ದೂರವಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೈಲಾದ ನೆರವು ನೀಡುವುದಾಗಿ ಸಂಕಲ್ಪ ಮಾಡಬೇಕು. ವಿವೇಕಾನಂದ ತತ್ವ, ಚಿಂತನೆಗಳನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡಬೇಕು ಎಂದರು.
ಬಿಜೆಪಿ ಮುಖಂಡ ಪಟಾಪಟ್ ಶ್ರೀನಿವಾಸ್ ಮಾತನಾಡಿ, ಯುವಕರು ಸಂಸ್ಕಾರವನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಎಂತಹ ಸಂದರ್ಭದಲ್ಲೂ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುವ ಮನೋಭಾವನೆ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಆಧ್ಯಾತ್ಮಿಕ ಚಿಂತನೆಗಳು, ಸೇವಾ ಮನೋಭಾವನೆಗಳು, ಭಾರತೀಯ ಸಂಸ್ಕೃತಿಯ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದರು.
ಭಾರತೀಯ ಪರಂಪರೆ ಮತ್ತು ಸಂಸ್ಕೃತಿ ಇಡೀ ವಿಶ್ವವೇ ಅಭಿಮಾನದಿಂದ ನೋಡುತ್ತಿದೆ. ಆದರೆ ಭಾರತೀಯ ಪಾಶ್ವಿಮಾತ್ಯ ಚಿಂತನೆಗಳತ್ತ ವಾಲುತ್ತಿರುವುದು ಒಳ್ಳೆಯ ಬೆಳೆವಣಿಗೆಯಲ್ಲ. ಹಿಂದೂ ಸಂಸ್ಕೃತಿ ಅತ್ಯಂತ ವೈಜ್ಞಾನಿಕವಾದುದ್ದು, ಪ್ರತಿಯೊಂದು ಹಬ್ಬ ಆಚರಣೆಗಳಿಗೂ ವೈಜ್ಞಾನಿಕ ಹಿನ್ನೆಲೆಯಿದೆ. ಇವುಗಳನ್ನು ತಿಳಿದುಕೊಳ್ಳುವ ಹಾಗೂ ಅಳವಡಿಸಿಕೊಳ್ಳುವ ದಿಸೆಯಲ್ಲಿ ಚಿಂತನೆ ಮಾಡಬೇಕು ಎಂದರು.
ಹೊಸ ಬೆಳಕು ಟ್ರಸ್ಟ್ನ ಅಧ್ಯಕ್ಷ ಜಿಗಣಿ ರಾಮಕೃಷ್ಣ, ಹಿಂದೂ ಜಾಗರಣ ವೇದಿಕೆಯ ಭವ್ಯಗೌಡ, ಕಲಾವಿದ ವಿಕ್ರಮ್ ಉದಯ್ಕುಮಾರ್, ಯೋಗ ಶಿಕ್ಷಕಿ ನಳಿನಾಕ್ಷಿ, ಜಾಗೃತ ಯುವ ಭಾರತ ಸಂಘಟನೆ ತಾಲ್ಲೂಕು ಅಧ್ಯಕ್ಷ ಗಣೇಶ್, ಕಾರ್ಯಾಧ್ಯಕ್ಷ ಲೋಕೇಶ್, ಪುರಸಭಾ ಸದಸ್ಯ ರಾಜು, ಮುಖಂಡರಾದ ಭರತ್ಕುಮಾರ್, ಸಿ.ಕೆ.ಜಗನ್ನಾಥ್, ಜಯದೇವ್, ಲೋಕೇಶ್ಗೌಡ, ಪ್ರಸಾದ್, ಅರ್ಜುನ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.