ಅಕ್ಕಿಆಲೂರ: ಇಲ್ಲಿನ ಮುತ್ತಿನಕಂತಿಮಠದ ಲಿಂ.ವೀರರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಹಾಗೂ ಧನುರ್ಮಾಸ ಲಿಂಗಪೂಜಾನುಷ್ಠಾನ ಮಂಗಲ ಮಹೋತ್ಸವದ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಜಗದ್ಗುರು ರೇಣುಕಾಚಾರ್ಯರ ಹಾಗೂ ವೀರರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ಗುರುವಾರ ವಿಜೃಂಭಣೆಯಿಂದ ಜರುಗಿತು.
ಮುತ್ತಿನಕಂತಿಮಠ ಗುರುಪೀಠದಲ್ಲಿ ವಿಶೇಷ ಪೂಜೆಯೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ತೆರೆದ ವಾಹದನದಲ್ಲಿ ರೇಣುಕಾಚಾರ್ಯರ ಮತ್ತು ಲಿಂ.ವೀರರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರ ಇರಿಸಲಾಗಿತ್ತು. ಮೆರವಣಿಗೆ ಸಾಗಿದುದ್ದಕ್ಕೂ ಪ್ರತಿ ಮನೆಗಳ ಎದುರು ಮಹಿಳೆಯರು ಭಾವಚಿತ್ರಗಳಿಗೆ ಶ್ರದ್ಧೆಯಿಂದ ಆರತಿ ಬೆಳಗಿದರು.
ನೂರಾರು ಮಹಿಳೆಯರು ಮೆರವಣಿಗೆಯುದ್ದಕ್ಕೂ ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ವಿವಿಧ ವಾದ್ಯಗಳು ವೈಭವಕ್ಕೆ ಕಾರಣವಾದವು. ಮರಳಿ ಮೆರವಣಿಗೆ ಗುರುಪೀಠ ತಲುಪಿ ಮಂಗಲಗೊಂಡಿತು. ವಿವಿಧ ಮಠಾಧೀಶರು, ಸದ್ಭಕ್ತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.