ಧಾರವಾಡ: ಸಮಕಾಲೀನ ವ್ಯವಸ್ಥೆಗೆ ಸ್ಪಂದಿಸದ ಸಾಹಿತ್ಯವನ್ನು ಸುಟ್ಟು ಹಾಕಬೇಕು' ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ರಂಗಾಯಣದ ಸಮುಚ್ಚಯ ಭವನದಲ್ಲಿ ಭಾನುವಾರ ಕ್ರಾಂತಿ ಪ್ರಕಾಶನ ಹಮ್ಮಿಕೊಂಡಿದ್ದ ‘ಸಾಹಿತ್ಯ ಸಂಕ್ರಾಂತಿ–18’ ಪುಸ್ತಕ ಬಿಡುಗಡೆ, ಸಂವಾದ ಗೋಷ್ಠಿ, ಗಜಲ್ ಮೆಹಫಿಲ್ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೇಖಕರು ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಕೊಳ್ಳಬಾರದು ಎಂದರು.
ಸಾಹಿತ್ಯ ಇರದಿದ್ದರೆ ಸಮಾಜದ ವಿಚಾರಗಳು ಅರ್ಥವಾಗುತ್ತಿರಲಿಲ್ಲ, ಯುವ ಸಾಹಿತಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಾಹಿತ್ಯ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಭಾರತದ ಗ್ರಾಮೀಣ ಪ್ರದೇಶದಲ್ಲಿ ಹಿಂದು ಮತ್ತು ಮುಸ್ಲಿಂ ಎಂಬ ಭೇದಭಾವ ಇಲ್ಲದೆ ಬದುಕು ನಡೆಸುತ್ತಾರೆ. ಎಲ್ಲಿ ಸ್ಥಳೀಯ ಭಾಷೆ, ಸಂಸ್ಕೃತಿ, ಬಾಂಧವ್ಯಕ್ಕೆ ಧಕ್ಕೆ ಬರುವುದೋ ಅಲ್ಲಿ ಸಮಾಜ ನಾಶವಾಗುತ್ತದೆ ಎಂದರು.
ಜಾತ್ಯತೀತವಾದಿ ಶರಣ ಬಸವಣ್ಣ ನಮ್ಮ ಯಜಮಾನ. ಸಮಾಜದಲ್ಲಿ ಶೇ 90 ರಷ್ಟು ಜನರು ಬಸವ ತತ್ವಗಳನ್ನು ಪಾಲಿಸುವರು ಇದ್ದಾರೆ ಎಂದು ಹೇಳಿದರು.
ಬರಹಗಾರ ಅಬ್ದುಲ್ ಹೈ ತೋ ಮಾತನಾಡಿ, ಸಾಹಿತ್ಯ ಹಾಗೂ ಸಂಸ್ಕಾರದಿಂದ ಇಂದು ನಾವು ವಿಮುಖರಾಗುತ್ತಿದ್ದೇವೆ. ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.
ಮಾಜಿ ಸಂಸದ ಐ.ಜಿ. ಸನದಿ, ಪುಸ್ತಕಗಳಿಂದ ನಾವು ದೂರಾಗುತ್ತಿದ್ದು, ನಮ್ಮ ಕೈಗಳಲ್ಲಿ ಪುಸ್ತಕಗಳು ಇಲ್ಲದಂತಾಗಿವೆ ಎಂದು ಹೇಳಿದರು.
ಇಂದಿನ ಯಾಂತ್ರಿಕ ಯುಗದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಗೀಳಿನಲ್ಲಿ ತೊಡಗಿ ಯುವ ಜನತೆ ಸಾಹಿತ್ಯ ಕ್ಷೇತ್ರದಿಂದ ದೂರ ಉಳಿಯುತ್ತಿದ್ದಾರೆ. ಸಾಹಿತ್ಯದಿಂದ ನಮಗೆ ಏನು ದೊರೆಯುತ್ತದೆ ಎಂಬುದನ್ನು ಬದಿಗೊತ್ತಿ ಜ್ಞಾನಾರ್ಜನೆಗಾಗಿ ಸಾಹಿತ್ಯ ಓದಬೇಕು ಎಂದರು.
ಇದೇ ಸಂದರ್ಭದಲ್ಲಿ ನೆಲದವ್ವನ ಕಾವ್ಯ, ಡಯಾನ ಮರ, ಕಾರಣಿಕ ಅಂತರಂಗ, ಕಾರಣಿಕ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.