ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್ಮನ್ಗಳಾದ ಎಂ. ಕ್ರಾಂತಿಕುಮಾರ್ (ಔಟಾಗದೆ 99, 50ಎಸೆತ, 8ಬೌಂಡರಿ, 7 ಸಿಕ್ಸರ್) ಮತ್ತು ವಿಠ್ಠಲ್ ಹಬೀಬ್ (ಔಟಾಗದೆ 62, 41ಎ., 5ಬೌಂ., 3 ಸಿ.,) ಅಮೋಘ ಜೊತೆಯಾಟದ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಎಚ್ಪಿಎಲ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಹತ್ತು ವಿಕೆಟ್ಗಳ ಸುಲಭ ಗೆಲುವು ಪಡೆಯಿತು.
ರಾಜನಗರದಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿಯ ಸ್ಕೈಟೌನ್ ಬ್ಯಾಷರ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 161 ರನ್ ಗಳಿಸಿತ್ತು ಸವಾಲಿನ ಗುರಿಯನ್ನು ಟೈಗರ್ಸ್ ಪಡೆ 15.1 ಓವರ್ಗಳಲ್ಲಿ ಮುಟ್ಟಿತು. ಮೊದಲ ವಿಕೆಟ್ಗೆ ಜೊತೆಯಾಟದಲ್ಲಿ 165 ರನ್ ಗಳಿಸಿ ಕ್ರಾಂತಿಕುಮಾರ್ ಮತ್ತು ವಿಠ್ಠಲ್ ತಂಡದ ಸುಲಭ ಜಯಕ್ಕೆ ಕಾರಣರಾದರು.
ದಿನದ ಇನ್ನೊಂದು ಪಂದ್ಯದಲ್ಲಿ ಚುರುಕಿನ ಬೌಲಿಂಗ್ ಮಾಡಿದ ಮುಂಡಗೋಡ ಮಾನ್ಸ್ಟರ್ಸ್ ತಂಡ ಶಿರಸಿಯ ನಿಲೇಕಣಿ ಚಾಲೆಂಜರ್ಸ್ ಎದುರು 12 ರನ್ಗಳ ಜಯ ಸಾಧಿಸಿತು.
ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಮುಂಡಗೋಡ ತಂಡ ನಿಗದಿತ ಓವರ್ಗಳಳ್ಲಿ 132 ರನ್ ಗಳಿಸಿತ್ತು. ಚಾಲೆಂಜರ್ಸ್ ತಂಡ 120 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಮುಂಡಗೋಡ ತಂಡದ ಸಾದಿಕ್ ಕಿತ್ತೂರ ಮತ್ತು ಅಮರ ಘಾಲೆ ತಲಾ ಮೂರು ವಿಕೆಟ್ ಉರುಳಿಸಿ ಜಯ ತಂದುಕೊಟ್ಟರು.
ರೋಚಕ ಹೋರಾಟಕ್ಕೆ ಕಾರಣವಾದ ಇನ್ನೊಂದು ಪಂದ್ಯದಲ್ಲಿ ಸ್ವರ್ಣ ಸ್ಟ್ರೈಕರ್ಸ್ ತಂಡ 9 ರನ್ಗಳ ಜಯ ಸಾಧಿಸಿತು. ಸ್ಟ್ರೈಕರ್ಸ್ ನಿಡಿದ್ದ 165 ರನ್ ಗುರಿ ಮುಟ್ಟಲು ಹುಬ್ಬಳ್ಳಿ ನೈಟ್ಸ್ ಕೊನೆಯವರೆಗೆ ಉತ್ತಮ ಹೋರಾಟ ಮಾಡಿತಾದರೂ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಎಡವಿತು.
ಸಂಕ್ಷಿಪ್ತ ಸ್ಕೋರು: ಮುಂಡಗೋಡ ಮಾನ್ಸ್ಟರ್ಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 132 (ಶಶಿಧರ ಶಿಂಧೆ 19, ಮೊಹಮ್ಮದ್ ಅಜೀಮ್ ಗಂಟನವರ 39, ಸೈಯದ್ ಮೊಹಮ್ಮದ್ ಉಬದಹ 23, ಇಸ್ಫಾಕ್ ನಾಜೀರ್ 26ಕ್ಕೆ4, ಬಿ. ಶುಭಮ್ 18ಕ್ಕೆ2). ನಿಲೇಕಣಿ ಚಾಲೆಂಜರ್ಸ್, ಶಿರಸಿ 19.3 ಓವರ್ಗಳಲ್ಲಿ 120 (ಸಂಜಯ ಕುಲಕರ್ಣಿ 34, ಇಂದ್ರಸೇನ ದಾನಿ 16; ಸಾದಿಕ್ ಕಿತ್ತೂರ 19ಕ್ಕೆ3, ಅಮರ ಘಾಲೆ 25ಕ್ಕೆ3). ಫಲಿತಾಂಶ: ಮುಂಡಗೋಡ ಮಾನಸ್ಟರ್ಸ್ ತಂಡಕ್ಕೆ 12 ರನ್ ಗೆಲುವು.
ಸ್ಕೈಟೌನ್ ಬ್ಯಾಷರ್ಸ್, ಹುಬ್ಬಳ್ಳಿ 20 ಓವರ್ಗಳಲ್ಲಿ 6 ವಿಕೆಟ್ಗೆ 161 (ದರ್ಶನ ಪಾಟೀಲ 28, ಮೊಹಮ್ಮದ್ ತಾಹಾ 30, ದಿಕ್ಷಾಂಶು ನೇಗಿ 40, ನಿಶಾಂತಸಿಂಗ್ ಶೇಖಾವತ್ 25, ವಿಶಾಲ ನಾಗರಾಳಮಠ 16; ಮೊಹಮ್ಮದ್ ಅಸ್ಜೀತ್ 36ಕ್ಕೆ3). ಹುಬ್ಬಳ್ಳಿ ಟೈಗರ್ಸ್ 15.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 165 (ಎಂ. ಕ್ರಾಂತಿಕುಮಾರ ಔಟಾಗದೆ 99, ವಿಠ್ಠಲ್ ಹಬೀಬ್ ಔಟಾಗದೆ 62). ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 10 ವಿಕೆಟ್ ಗೆಲುವು.
ಸ್ವರ್ಣ ಸ್ಟ್ರೈಕರ್ಸ್, ಧಾರವಾಡ 20 ಓವರ್ಗಳಲ್ಲಿ 164 (ಅಭಿಷೇಕ ಹೊನ್ನಾವರ 18, ಸ್ಟಾಲಿನ್ ಹೂವರ್ 61, ಕಿಶೋರ್ ಕಾಮತ್ 37, ಆದಿತ್ಯ ಪಾಟೀಲ 15; ಜೀಶನ್ ಅಲಿಸೈಯದ್ 19ಕ್ಕೆ2). ಹುಬ್ಬಳ್ಳಿ ನೈಟ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 155 (ಅಬ್ರಾರ್ ಖಾಜಿ 22, ಜೀಶನ್ಅಲಿ ಸೈಯದ್ 42, ಗೋವಿಂದ ಗಾವಡೆ 44; ಅರ್ಜುನ ಪಾಟೀಲ 32ಕ್ಕೆ4). ಸ್ವರ್ಣ ಸ್ಟೈಕರ್ಸ್ ತಂಡಕ್ಕೆ 9 ರನ್ ಜಯ.
***
ಗ್ಯಾಲರಿಯಲ್ಲಿ ಪ್ರೇಕ್ಷಕರ ಸಂಭ್ರಮ
ಎಚ್ಪಿಎಲ್ ಟೂರ್ನಿಯ ಪಂದ್ಯಗಳನ್ನು ನೋಡಲು ಆರಂಭದ ದಿನಗಳಲ್ಲಿ ಹೆಚ್ಚು ಜನ ಕ್ರೀಡಾಂಗಣಕ್ಕೆ ಬರುತ್ತಿರಲಿಲ್ಲ. ಆದರೆ ಹೊನಲು ಬೆಳಕಿನಲ್ಲಿ ಪಂದ್ಯಗಳು ಆರಂಭವಾದ ಬಳಿಕ ನಿತ್ಯ ನೂರಾರು ಜನ ಬರುತ್ತಿದ್ದಾರೆ.
ಅದರಲ್ಲಿಯೂ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾನುವಾರ ಹಬ್ಬದ ಸಂಭ್ರಮ ಕಂಡುಬಂದಿತು. ಹೊನಲು ಬೆಳಕಿನಲ್ಲಿ ನಡೆದ ಸ್ವರ್ಣ ಸ್ಟ್ರೈಕರ್ಸ್–ಹುಬ್ಬಳ್ಳಿ ನೈಟ್ಸ್ ನಡುವಣ ಪಂದ್ಯ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು.
ಅದರಲ್ಲಿ ನೈಟ್ಸ್ ತಂಡದ ಬೆಂಬಲಿಗರೇ ಹೆಚ್ಚಾಗಿದ್ದರು. ನೈಟ್ಸ್ ತಂಡದ ಬ್ಯಾಟ್ಸ್ಮನ್ಗಳು ಬೌಂಡರಿ, ಸಿಕ್ಸರ್ಗಳನ್ನು ಸಿಡಿಸಿದಾಗ, ವಿಕೆಟ್ಗಳನ್ನು ಉರುಳಿಸಿದಾಗ ಸಂಭ್ರಮ ಕಂಡು ಬಂತು. ಬೆಂಬಲ ನೀಡಲು ಬಂದಿದ್ದ ಕ್ರಿಕೆಟ್ ಪ್ರೇಮಿಗಳಿಗೆ ನೈಟ್ಸ್ ಫ್ರಾಂಚೈಸ್ ಪೋಷಾಕು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.