ಗದಗ: ನಗರದ ಹೃದಯ ಭಾಗದಲ್ಲಿ ಇರುವ ಐತಿಹಾಸಿಕ ಭೀಷ್ಮ ಕೆರೆ ಆವರಣ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುತ್ತಿದೆ. ವಾರಾಂತ್ಯದ ದಿನಗಲ್ಲಿ ಇಲ್ಲಿ ಜನ ಜಾತ್ರೆಯೇ ನಡೆಯುತ್ತದೆ. ದೋಣಿ ವಿಹಾರ, ಉದ್ಯಾನದಲ್ಲಿ ಸಂಧ್ಯಾರಾಗ ಕಾರ್ಯಕ್ರಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಇಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸಿಗರ ರಕ್ಷಣೆಗಾಗಿ ಜಿಲ್ಲಾಡಳಿತ ಕ್ರಮ ವಹಿಸಿದೆ. ವಾರಾಂತ್ಯದ ದಿನಗಳಲ್ಲಿ ಇಲ್ಲಿ 400ರಿಂದ 500 ಮಂದಿ ಭೇಟಿ ಕೊಡುತ್ತಿದ್ದಾರೆ.
ಪ್ರವಾಸಿಗರ ರಕ್ಷಣೆಗಾಗಿ ಈಗಾಗಲೇ ಇಲ್ಲಿ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಇದರ ಜತೆಗೆ, ಬಸವೇಶ್ವರ ಮೂರ್ತಿ, ಉದ್ಯಾನ ಮತ್ತು ನೆಲಮಹಡಿಯಲ್ಲಿ ಆಯ್ದ ಸ್ಥಳಗಳಲ್ಲಿ 7 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಲವು ತಾಂತ್ರಿಕ ವಿಶೇಷತೆಗಳನ್ನು ಹೊಂದಿರುವ ಈ ಕ್ಯಾಮೆರಾಗಳು ಗರಿಷ್ಠ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಲ್ಲವು. ಮತ್ತು ಬಿಸಿಲು, ಮಳೆ, ಮಂಜು ಸೇರಿ ಪ್ರತಿಕೂಲ ವಾತಾವರಣದಲ್ಲೂ ಕಾರ್ಯನಿರ್ವಹಿಸಬಲ್ಲವು.
ಬಸವೇಶ್ವರ ಉದ್ಯಾನ ಜನಾಕರ್ಷಣೆ ಕೇಂದ್ರವಾಗಿ ಬದಲಾದ ಬೆನ್ನಲ್ಲೇ, ಇಲ್ಲಿನ ನೆಲಮಹಡಿಯಲ್ಲಿ ಬಸವಣ್ಣನವರ ಜೀವನ ದರ್ಶನ ಮಾಡಿಸುವ ಕಲಾಕೃತಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಜತೆಗೆ ಅವರ ಬದುಕು ಕುರಿತು, ವಿವರಣೆ ಕೇಳಬಹುದಾದ ಆಡಿಯೊ ಸೌಲಭ್ಯ ಕಲ್ಪಿಸಲಾಗಿದೆ.
ತುಂಗಭದ್ರಾ ನದಿ ನೀರಿನಿಂದ ಭೀಷ್ಮ ಕೆರೆ ತುಂಬಿಸಿದ ನಂತರ ಇಲ್ಲಿನ ಬಸವೇಶ್ವರ ಮೂರ್ತಿ, ಉದ್ಯಾನ ವೀಕ್ಷಣೆ ಹಾಗೂ ದೋಣಿ ವಿಹಾರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ‘ಶನಿವಾರ, ಭಾನುವಾರ ಕುಟುಂಬ ಸಮೇತ ಇಲ್ಲಿಗೆ ಬಂದು ದೋಣಿ ವಿಹಾರದ ಖುಷಿ ಪಡುತ್ತಿದ್ದಾರೆ. ಪ್ರಕೃತಿ ಸೌಂದರ್ಯದ ಸವಿ ಅನುಭವಿಸುತ್ತಿದ್ದಾರೆ. ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ಉದ್ಯಾನದಲ್ಲಿ ಉದಯರಾಗ ಕಾರ್ಯಕ್ರಮಕ್ಕೂ ಸಾಕಷ್ಟು ಜನರು ಸೇರುತ್ತಿದ್ದಾರೆ’ ಎಂದು ಇಲ್ಲಿನ ಪ್ರವಾಸಿ ಮಿತ್ರ ಪಡೆಯ ಸಿಬ್ಬಂದಿ ತಿಳಿಸಿದರು.
7 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ:
ಇತ್ತೀಚೆಗೆ ಭೀಷ್ಮಕೆರೆ ಆವರಣದಲ್ಲಿ ಪುಂಡ, ಪೋಕರಿಗಳ ಉಪಟಳ ಹೆಚ್ಚಾಗಿತ್ತು. ಉದ್ಯಾನದಲ್ಲಿ ಪ್ರೇಮಿಗಳು ಕೂಡ ಅಸಭ್ಯವಾಗಿ ವರ್ತಿಸುತ್ತಿರುವುದು ಸಿಬ್ಬಂದಿ ಗಮನಕ್ಕೆ ಬಂತು. ಪ್ರಮುಖವಾಗಿ ಇದಕ್ಕೆ ಇದಕ್ಕೆ ಕಡಿವಾಣ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಜತೆಗೆ ಉದ್ಯಾನ ಪ್ರವೇಶಕ್ಕೆ ₹ 10 ಶುಲ್ಕ ನಿಗದಿ ಮಾಡಲಿದೆ. ‘ಈ ಕ್ರಮಗಳ ಇಂತಹ ಹಾವಳಿ ಕಡಿಮೆಯಾಗಿದೆ. ಪ್ರವಾಸಿಗರ ರಕ್ಷಣೆಗೂ ಕ್ರಮ ವಹಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು. ಸದ್ಯ ಹಗಲು, ರಾತ್ರಿ ಇಲ್ಲಿ ಪ್ರವಾಸಿ ಮಿತ್ರ ಸಿಬ್ಬಂದಿ ಕಾವಲು ಇರುತ್ತದೆ.
‘ಬಸವಣ್ಣನ ಕಲಾಕೃತಿಗಳನ್ನು ಕೇವಲ ವೀಕ್ಷಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಕೆಲವರು ಈ ಕಲಾಕೃತಿಗಳನ್ನು
ಮುಟ್ಟುವುದು, ಹಾನಿ ಮಾಡಲು ಪ್ರಯತ್ನಿಸುವುದು ನಡೆದಿದೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಸಿ.ಸಿ.ಟಿ.ವಿ
ಕ್ಯಾಮೆರಾ ಹಾಕಲಾಗಿದೆ’ ಎಂದು ಸಿಬ್ಬಂದಿ ರವೀಂದ್ರಗೌಡ ಗೌಡರ ಹೇಳಿದರು.
‘ಪ್ರತಿನಿತ್ಯ ವಿವಿಧ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮಗಳಿಂದ ನೂರಾರು ಜನರು ಇಲ್ಲಿಗೆ ಬರುತ್ತಿದ್ದಾರೆ. ಕಲಾಕೃತಿಗಳ ಹಾಗೂ ಪ್ರವಾಸಿಗರ ರಕ್ಷಣೆ ನಮ್ಮ ಹೊಣೆಯಾಗಿದೆ. ಕ್ಯಾಮೆರಾ ಅಳವಡಿಸಿ ಮತ್ತಷ್ಟು ಭದ್ರತೆ ಆದ್ಯತೆ ನೀಡಲಾಗಿದೆ’ ಎಂದು ಪ್ರವಾಸಿ ಮಿತ್ರ ಸಿಬ್ಬಂದಿ ಪಿ.ಬಿ.ಜಾಧವ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.