ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ರೈತರ ಸ್ವಾಭಿಮಾನದ ಕ್ರೀಡೆ ಕಂಬಳ’

ಅಡ್ವೆ: ಕೋಟಿ ಚೆನ್ನಯ ಜೋಡುಕರೆಯ 26ನೇ ವರ್ಷದ ಕಂಬಳೋತ್ಸವ
Last Updated 15 ಜನವರಿ 2018, 13:06 IST
ಅಕ್ಷರ ಗಾತ್ರ

ಪಡುಬಿದ್ರಿ: ಇಲ್ಲಿಗೆ ಸಮೀಪದ ಅಡ್ವೆ ಜೋಡುಕರೆಯ 26ನೇ ವರ್ಷದ ಕಂಬಳೋತ್ಸವವು ಶನಿವಾರ ರಾತ್ರಿ ಅಡ್ವೆ ಗಣಪತಿ ದೇವಸ್ಥಾನದ ಬಳಿ ಹೊನಲು ಬೆಳಕಿನಲ್ಲಿ ಜರಗಿತು.

ಸಂಜೆ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ‘ಈ ಭಾಗದಲ್ಲಿ ಜನಪದ ಕ್ರೀಡೆಯಾಗಿರುವ ಕಂಬಳವು ಆತಂಕಗಳಿಂದ ದೂರವಾಗಿದೆ. ಈ ನಿಟ್ಟಿನಲ್ಲಿ ಶಾಶ್ವತವಾದ ವ್ಯವಸ್ಥೆಗಾಗಿ ಸ್ಥಳ ಕಾಯ್ದಿರಿಸುವ ಮೂಲಕ ಕಂಬಳ ಕ್ರೀಡೆಯು ಉಜ್ವಲವಾಗಿ ಬೆಳೆದು, ಸ್ವಾಭಿಮಾನಿ ರೈತರಿಗೆ ಸಾಕಷ್ಟು ಅವಕಾಶಗಳಾಗಬೇಕು ಎಂದರು.

ಮೂಡುಬಿದರೆ ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ‘ಕಷ್ಟದ ದಿನಗಳಲ್ಲೂ ತುಳುನಾಡಿನ ಜನರ ಸಹಕಾರದಿಂದ ಶಿಸ್ತು ಬದ್ಧವಾಗಿ ಕಂಬಳವು ನಡೆಯುತ್ತಿತ್ತು. ತುಳುವರ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಿದೆ’ ಎಂದರು.

ಈ ಸಂದರ್ಭದಲ್ಲಿ ಕಂಬಳ ಕ್ರೀಡೆಗೆ ನಿರಂತರವಾಗಿ ಓಟದ ಕೋಣಗಳನ್ನು ಕಟ್ಟುವ ಮೂಲಕ ಭಾಗವಹಿಸುತ್ತಿದ್ದ ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಕ್ರೀಡೆಯ ಪ್ರಧಾನ ತೀರ್ಪುಗಾರ, ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಸಂಚಾಲಕ ಪ್ರೊ.ಕೆ.ಗುಣಪಾಲ ಕಡಂಬ, ಕ್ರೀಡಾ ರತ್ನ ಪುರಸ್ಕೃತ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ಸಹಿತ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ, ಮೀನುಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಅರಣ್ಯ, ಪರಿಸರ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಕಾಪು ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕಾರ್ಕಳ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಅದಾನಿ- ಯುಪಿಸಿಎಲ್ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್, ಐಕಳಭಾವ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಅಡ್ವೆ, ಮೂಡ್ರಗುತ್ತು ಚಿತ್ತರಂಜನ್ ಶೆಟ್ಟಿ, ಅಡ್ವೆ ಕಂಕಣಗುತ್ತು ಹರೀಶ್ ಶೆಟ್ಟಿ, ಅಡ್ವೆ ಮೂಡ್ರಗುತ್ತು ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್‌ ಚಂದ್ರ ಸುವರ್ಣ ಸ್ವಾಗತಿಸಿ, ಗೌರವ ಸಲಹೆಗಾರ ಪ್ರೊ.ಕೆ ಗುಣಪಾಲ ಕಡಂಬ ನಿರ್ವಹಿಸಿ, ಅರಂತಡೆ ಲಕ್ಷ್ಮಣ್ ಎಲ್. ಶೆಟ್ಟಿ ವಂದಿಸಿದರು.

ಸ್ಪರ್ಧೆಯಲ್ಲಿ ಒಟ್ಟು ನೂರು ಜತೆ ಕೋಣಗಳು ಪಾಲ್ಗೊಂಡಿದ್ದವು. ಬಹುಮಾನ ವಿತರಣಾ ಸಮಾರಂಭದಲ್ಲಿ ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್ ಡಿಸೋಜ, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ ಎಲ್ ಶೆಟ್ಟಿ ಇದ್ದರು.
**
ಕ್ರೀಡಾ ಇಲಾಖೆಯ ಮೂಲಕ ಕಂಬಳಕ್ಕೂ ರಾಜ್ಯ ಪ್ರಶಸ್ತಿ ದೊರಕಿಸುವ ಚಿಂತನೆ ಇದೆ.
ಅಭಯಚಂದ್ರ ಜೈನ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT