ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮ ಅರಿಯಲು ಅಭಂಗ್‌

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಶಾಸ್ತ್ರೀಯ ಸಂಗೀತದ ಗಾಯಕರು ಕಛೇರಿಗಳಲ್ಲಿ ಭಕ್ತಿಪ್ರಧಾನ ಅಭಂಗ್‌ಗಳಿಗೆ ವಿಶಿಷ್ಟ ಸ್ಥಾನ ನೀಡುತ್ತಾರೆ. ಪ್ರೇಕ್ಷಕರೂ ಇದನ್ನು ಬಹಳಷ್ಟು ಇಷ್ಟಪಡುತ್ತಾರೆ. ಇದೇ ರೀತಿ ಮರಾಠಿಯ ‘ಅಭಂಗ್’ ಕೂಡ ಶಾಸ್ತ್ರೀಯ ಸಂಗೀತ ವೇದಿಕೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.

ಭಾರತೀಯ ಸಾಮಗಾನ ಸಭಾದ ಒಂಬತ್ತನೇ ವಾರ್ಷಿಕ ಸಂಗೀತೋತ್ಸವ ‘ಸ್ವರಾಲಂಕಾರ’ವು ಜನವರಿ 17ರಂದು ನಗರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಸಂತವಾಣಿ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳಲಿದೆ. ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಅವರು ಗಾಯನ ಪ್ರಸ್ತುತಪಡಿಸುವರು.

ಜನವರಿ 21ರ ವರೆಗೆ ನಡೆಯಲಿರುವ ಈ ಸಂಗೀತೋತ್ಸವವು ಕರ್ನಾಟಕ ಸಂಪ್ರದಾಯದಲ್ಲಿ ಅಭಂಗ್ ಗಾಯನದಲ್ಲಿ ಹೆಸರು ಮಾಡಿರುವ ರಂಜನಿ-ಗಾಯತ್ರಿ ಸಹೋದರಿಯರ ಕಾರ್ಯಕ್ರಮದೊಂದಿಗೆ ಸಮಾರೋಪಗೊಳ್ಳಲಿದೆ.

‘ಪಂಢರಾಪುರಕ್ಕೆ ತೆರಳುವ ಭಕ್ತರು ದಾರಿಯುದ್ದಕ್ಕೂ ಅಭಂಗ್ ಭಕ್ತಿಗೀತೆಗಳನ್ನು ವಾರಕರಿ ಸಂಪ್ರದಾಯದ ರಾಗಗಳಲ್ಲಿ ಹಾಡುತ್ತಿದ್ದರು. ಈ ಭಕ್ತಿ ಗೀತೆಗಳನ್ನು ಗಾಯಕರು ತಮ್ಮ ಕಛೇರಿಗಳಲ್ಲಿ ಹಾಡಲು ಆರಂಭಿಸಿದ ಬಳಿಕ ಅವರು ತಮ್ಮ ರಾಗ ಜ್ಞಾನವನ್ನು ಬಳಸಿ ಇವುಗಳನ್ನು ಹಾಡುತ್ತಿದ್ದಾರೆ' ಎಂದು ಸಂಗೀತ ಕಟ್ಟಿ ಹೇಳುತ್ತಾರೆ.

‘ಅಭಂಗಗಳಿಗೆ ನಮ್ಮದೇ ಆದ ರಾಗಗಳ ಸ್ಪರ್ಶವನ್ನು ನೀಡಿ ನಾವು ಹಾಡುತ್ತೇವೆ. ಆದರೆ ಅದರ ರಾಗಗಳನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ' ಎನ್ನುತ್ತಾರೆ ರಂಜಿನಿ ಮತ್ತು ಗಾಯತ್ರಿ. ರಾಗದ ಮೂಲಕ ವ್ಯಕ್ತವಾಗುವ ಭಾವನೆಗಳು ಮತ್ತು ರಸ, ಅಭಂಗಗಳನ್ನು ಇಷ್ಟಪಡುವಂತೆ ಮಾಡುತ್ತದೆ.

‘ಒಬ್ಬ ಭಕ್ತ ಗಾಯಕ ಈ ಹಾಡುಗಳ ಮೂಲಕ ದೇವರನ್ನು ಗೆಳೆಯ, ತಂದೆ, ಮಗುವಿನ ರೂಪದಲ್ಲಿ ಅಥವಾ ಮೀರಾ ಕಂಡಂತೆ ಒಡನಾಡಿಯ ರೂಪದಲ್ಲಿ ಕಾಣಬಹುದು. ಕೇಳುಗ ಇನ್ನೊಂದು ರೂಪದಲ್ಲಿ ಕಾಣಬಹುದು. ಎಲ್ಲವು ಗಾಯಕನ ಮನಃಸ್ಥಿತಿಯನ್ನು ಅವಲಂಭಿಸಿರುತ್ತದೆ' ಎಂಬುದು ಕಟ್ಟಿ ಅವರ ಅಭಿಪ್ರಾಯ.

ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಪ್ರಸ್ತುತಪಡಿಸುತ್ತಿದ್ದ ರೀತಿಗಿಂತ ಭಿನ್ನವಾಗಿ ರಂಜಿನಿ-ಗಾಯತ್ರಿ ಸಹೋದರಿಯರು ಅಭಂಗ್‌ಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

‘ಕಛೇರಿಯ ಕೊನೆಗೆ ಸರಳವಾದ ಹಾಡುಗಳನ್ನು ಹಾಡುವ ‘ತುಕಡಾ’ ಸಂಪ್ರದಾಯವನ್ನು ಮೀರಿ ನಾವು ಧ್ವನಿ ನಿಯಂತ್ರಣ, ಭಾವೋದ್ವೇಗದ ಗಾಯನದ ಮೂಲಕ ಪ್ರೇಕ್ಷಕರ ಹೃದಯಕ್ಕೆ ನಾಟುವ ರೀತಿಯಲ್ಲಿ ಹಾಡುತ್ತೇವೆ' ಎನ್ನುತ್ತಾರೆ ಅವರು.

ಮುಂಬೈಯಲ್ಲಿ ಬೆಳೆದಿರುವ ಈ ಸಹೋದರಿಯರು ಅಲ್ಲಿ ‘ಆಷಾಢ ಏಕಾದಶಿ'ಯ ಸಂದರ್ಭದಲ್ಲಿ
ಬೀದಿಬೀದಿಗಳಲ್ಲಿ ಕೇಳಿ ಬರುತ್ತಿದ್ದ ಅಭಂಗ್‌ಗಳ ಮಾಂತ್ರಿಕ ಮೋಡಿಯಿಂದ ಪ್ರಭಾವಿತರಾದವರು. 2001ರಲ್ಲಿ ವಿಶ್ವಬ್ಯಾಂಕ್ ಉದ್ಯೋಗಿ ಹಾಗೂ ಹಿಂದೂಸ್ತಾನಿ ಸಂಗೀತ ಪ್ರಿಯರಾಗಿದ್ದ ವಿಶ್ವಾಸ್ ಶಿರ್ಗಾಂವ್ಕರ್ ಅವರನ್ನು ಭೇಟಿಯಾದ ಬಳಿಕ
ಅವರಿಂದ ‘ಅಭಂಗ್’, ‘ಭೂತ್ ಮೋಟೆ’ಯನ್ನು ಕಲಿತಿದ್ದಾರೆ.

‘2001ರಲ್ಲಿ ಮೊದಲ ಬಾರಿಗೆ ನಾವು ಸಂಗೀತ ಕಛೇರಿಯಲ್ಲಿ ಅಭಂಗ್‌ಗಳನ್ನು ಪ್ರಸ್ತುತಪಡಿಸಿದ್ದೆವು. ಅದಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಅನಂತರ ಕಛೇರಿಗಳ ಕೊನೆಯಲ್ಲಿ ಇದನ್ನು ಹಾಡಲು ಪ್ರಾರಂಭಿಸಿದೆವು. ಇವು ಉಲ್ಲಾಸ ಮತ್ತು ಸಂತೋಷ ಹೆಚ್ಚಿಸಲು ಸಹಕಾರಿ.
ಭಕ್ತಿ ಪರಾಕಾಷ್ಠೆಯನ್ನು ಹೊಂದಿರುವ ಈ ಹಾಡುಗಳು ಕರ್ನಾಟಕ ಸಂಗೀತದ ಭಂಡಾರಕ್ಕೆ ಸಹಜವಾಗಿಯೇ ಸೇರಿಹೋಗಿವೆ' ಎಂದು ರಂಜಿನಿ-ಗಾಯತ್ರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT