ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕುಂಟೆಗಳಲ್ಲಿ ನೀರಿಲ್ಲ, ಆತಂಕ

Last Updated 16 ಜನವರಿ 2018, 8:41 IST
ಅಕ್ಷರ ಗಾತ್ರ

ವಿಜಯಪುರ: ತೀವ್ರ ಬರಗಾಲಕ್ಕೆ ಸಿಲುಕಿದ ಬಯಲು ಸೀಮೆ ಭಾಗಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಜಲಮೂಲಗಳಾದ ಕೆರೆ, ಕುಂಟೆಗಳಲ್ಲಿ ಒಂದು ಹನಿ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡರಾದ ಹರ್ಷವರ್ಧನ್, ನಾರಾಯಣಸ್ವಾಮಿ, ಬಚ್ಚರಾಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಬಯಲು ಸೀಮೆ ಭಾಗಗಳಲ್ಲಿ ಆವ್ಯಾಹತವಾಗಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ, ನೀಲಗಿರಿ ಮರಗಳ ಬೆಳವಣಿಗೆ, ಜಾಲಿಮರಗಳಿಂದ ಅಂತರ್ಜಲ ಮಟ್ಟ 2012 ರಲ್ಲಿ 700 ರಿಂದ 800 ಅಡಿಗಳಲ್ಲಿತ್ತು. ಐದು ವರ್ಷಗಳಲ್ಲಿ 1,600 ಅಡಿಗಳಿಗೆ ಗಣನೀಯವಾಗಿ ಕುಸಿದಿದೆ. ಅಂತರ್ಜಲವನ್ನು ವೃದ್ಧಿಸಲು ಜಲ ಸಂಪನ್ಮೂಲ ಇಲಾಖೆ, ಕೆರೆ ಸಂಜೀವಿನಿ ಯೋಜನೆಯಂತಹ ಹಲವಾರು ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ  ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದ ಕಾರಣ ಬಹುತೇಕ ಕೆರೆಗಳಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ಕೆರೆಗಳಲ್ಲಿ ನೀಲಗಿರಿ ಮರಗಳು ದಟ್ಟವಾಗಿ ಬೆಳೆದು ನಿಂತಿವೆ. ಸರ್ಕಾರದ ಆದೇಶವಿದ್ದರೂ ಇದುವರೆಗೂ ಅವುಗಳನ್ನು ತೆರವುಗೊಳಿಸದ ಕಾರಣ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ. 2017 ರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಬಿದ್ದಿದ್ದ ಉತ್ತಮ ಮಳೆಯಿಂದ ಹಲವಾರು ಕೆರೆಗಳಿಗೆ ನೀರು ಬಂದಿದ್ದರೂ ಕೆಲವು ಕೆರೆಗಳಲ್ಲಿ ಹೇರಳವಾಗಿರುವ ಜಾಲಿಮರಗಳಿಂದ ನೀರು ಉಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನೀಲಗಿರಿಗಿಂತಲೂ ವೇಗವಾಗಿ ಅಂತರ್ಜಲವನ್ನು ಹೀರಬಲ್ಲ ಸಾಮರ್ಥ್ಯವುಳ್ಳ ಜಾಲಿಮರಗಳನ್ನು ಕೆರೆಗಳಿಂದ  ತೆರವುಗೊಳಿಸಬೇಕು ಎಂದು ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸೇರಿದಂತೆ ಗ್ರಾಮ ಪಂಚಾಯಿತಿಗಳಿಗೆ ಮನವಿ ಕೊಡಲಾಗಿದೆ. ಆದರೂ ಇದುವರೆಗೂ ಯಾರೂ ಗಮನ ಹರಿಸಿಲ್ಲ ಎಂದು ರೈತ ಮುಖಂಡ ದೊಡ್ಡೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ನೀಲಗಿರಿ ತೋಪುಗಳ ಪಕ್ಕಗಳಲ್ಲಿ ರೈತರು ಇಟ್ಟಿರುವ ಬೆಳೆಗಳು ಶೇ 80 ರಷ್ಟು ನಷ್ಟವಾಗುತ್ತಿವೆ. ಬೆಳೆಗಳು ಇಳುವರಿ ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಸಾಲವನ್ನು ತಲೆಯ ಮೇಲೆ ಎಳೆದುಕೊಳ್ಳುವಂತಾಗಿದೆ. ಹಲವು ಕಡೆಗಳಲ್ಲಿ ರೈತರೇ ಸ್ವಯಂಪ್ರೇರಿತರಾಗಿ ನೀಲಗಿರಿ ಮರಗಳನ್ನು ಕಿತ್ತುಹಾಕಿದ್ದಾರೆ ಎಂದಿದ್ದಾರೆ.

ಕೆರೆಗಳನ್ನು ಸಿದ್ಧಗೊಳಿಸಿಲ್ಲ: ನಾಗವಾರ ಪ್ರದೇಶದ ಹೆಬ್ಬಾಳದ ಕೆರೆಗಳ ನೀರನ್ನು ಸಂಸ್ಕರಿಸಿದ ನಂತರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಕೆರೆಗಳಿಗೆ ತುಂಬಿಸಿ, ಅಂತರ್ಜಲದ ಮಟ್ಟವನ್ನು ಏರಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳುತ್ತಿದೆ.

ಈವರೆಗೂ ಒಂದು ಕೆರೆಯಲ್ಲಿನ ಹೂಳು ತೆಗೆದಿಲ್ಲ. ಶಿಥಿಲವಾಗಿರುವ ಕೆರೆಗಳನ್ನು ದುರಸ್ತಿ ಮಾಡಿಲ್ಲ. ಎತ್ತಿನಹೊಳೆ ಯೋಜನೆಯಿಂದ ನೀರು ತರುವುದಾಗಿ ₹ 13 ಸಾವಿರ ಕೋಟಿ ಅನುದಾನ ಮೀಸಲಿಟ್ಟು ಅದರಲ್ಲಿ ₹ 2 ಸಾವಿರ ಕೋಟಿಯನ್ನು ಸಿ.ಸಿ.ರಸ್ತೆಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿ ಹಣ ಪೋಲು ಮಾಡಲಾಗುತ್ತಿದೆ. ಯೋಜನೆಯ ಬಗ್ಗೆ ಸರ್ಕಾರಕ್ಕೆ ಎಷ್ಟರಮಟ್ಟಿಗೆ ಬದ್ಧತೆಯಿದೆ ಎಂಬುದನ್ನು ಇದು ತೋರಿಸಿದೆ ಎಂದು ರೈತ ಮುಖಂಡ ಭೈರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಬೇಸಿಗೆಯಲ್ಲಿ ಕೆರೆಗಳಲ್ಲಿ ಹೂಳು ತೆಗೆಯುವ ಮೂಲಕ ಮುಂದಿನ ಮಳೆಗಾಲದಲ್ಲಿ ಬರುವ ಮಳೆಯ ನೀರನ್ನು ಇಂಗಿಸಿ ಅಂತರ್ಜಲ ವೃದ್ಧಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT